KSRTC: ಇಂದು 63ನೇ ಸಂಸ್ಥಾಪನಾ ದಿನಾಚರಣೆ: ₹1 ಕೋಟಿ ಚೆಕ್ ವಿತರಣೆ, ಈ ಬಸ್ಗಳಿಗೆ ಚಾಲನೆ
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ( KSRTC) ಅಸ್ತಿತ್ವಕ್ಕೆ ಬಂದು ಇಂದಿಗೆ ಆರು ದಶಕಗಳು ಕಳೆದಿವೆ. ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಸಾಗಿ ಬಂದ ಸಂಸ್ಥೆಯು ಅಕ್ಟೋಬರ್ 16ರಂದು 63ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. ಈ ಸಂಬಂಧ ಕೆಲವು ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 63ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರೂ ಆಗಿರುವ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಅವರು ಪಾಲ್ಗೊಂಡು ಫಲಾನುಭವಿಗಳಿಗೆ ಚೆಕ್ ವಿತರಿಸಲಿದ್ದಾರೆ.

ವಿವಿಧ ಕಾರ್ಯಕ್ರಮಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಶಾಸಕರಾದ ಎನ್ಎ ಹ್ಯಾರಿಸ್, ನಿಗಮ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಮತ್ತಿತರ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ. ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕೈಗೊಳ್ಳಲಾದ ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ.
* ಐರಾವತ ಕ್ಲಬ್ ಕ್ಲಾಸ್ 3 ಬಸ್ಸುಗಳನ್ನು ಇದೇ ಮೊಲದ ಬಾರಿಗೆ ಪುನಶ್ಚೇತನಗೊಳಿಸಲಾಗಿದೆ. ಈ ಬಸ್ಗಳಿಗೆ ಚಾಲನೆ ನೀಡಲಾಗುತ್ತದೆ.
* ಅಪಘಾತದಲ್ಲಿ ಮೃತಪಟ್ಟ ಮೂರು ಸಿಬ್ಬಂದಿಗಳ ಅವಲಂಬಿತರಿಗೆ ಸಾರಿಗೆ ಸುರಕ್ಷಾ ವಿಮಾ ಯೋಜನೆ ಅಡಿ ತಲಾ 1 ಕೋಟಿ ರೂಪಾಯಿಯ ಚೆಕ್ ವಿತರಣೆ.
* ಅಪಘಾತ ಹೊರತುಪಡಿಸಿ ಇತರ ಕಾರಣಗಳಿಂದಾಗಿ ಮೃತಪಟ್ಟ 37 ಸಿಬ್ಬಂದಿ ಅವಲಂಬಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ ರೂ.10 ಲಕ್ಷಗಳ ಚೆಕ್ ವಿತರಣೆ ಇದೇ ವೇಳೆ ನಡೆಯಲಿದೆ.
* ನಿಗಮದ ಆಂತರಿಕ ನಿಯತ ಕಾಲಿಕ ಸಾರಿಗೆ ಸಂಪದ ಮತ್ತು ವಾಹನಗಳ ಪುನಶ್ಚೇತನ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ.
* KSRTC ಬಸ್ಸುಗಳ ಪುನಶ್ಚೇತನ ಕಾರ್ಯಕ್ಕೆ ವಿಭಾಗ ಹಾಗೂ ಪ್ರಾದೇಶಿಕ ಕಾರ್ಯಾಗಾರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
* ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು ಮತ್ತು ಹಾಸನದ ಕ್ಯಾಂಟೀನ್ನ ನವೀಕರಣಕ್ಕೆ ಸಾರಿಗೆ ಇಲಾಖೆಗೆ ಅನುದಾನ ಘೋಷಿಸಲಿದೆ.
* ಶೂನ್ಯ ಅಪಘಾತ ಸಾಧನೆಗೆ ಪಾವಗಡ ಘಟಕ ಹಾಗೂ ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಿದೆ.
* ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಮೃತರ ಅವಲಂಬಿತರಿಗೆ ಸ್ವಚ್ಛತಾಗಾರ ಹಾಗೂ KST ಕಾನ್ಸಟೇಬಲ್ ಹುದ್ದೆಗೆ ನೇಮಕಾತಿಗೆ ಆದೇಶಿಸಿ, ಪತ್ರ ವಿತರಣೆ ಮಾಡಲು ನಿಗಮ ಕಾರ್ಯಕ್ರಮ ರೂಪಿಸಿದೆ.












Click it and Unblock the Notifications