KSDL ಇ-ಕಾಮರ್ಸ್ ವಹಿವಾಟು ಭರ್ಜರಿ ಏರಿಕೆ, ಸಾಧನೆಗೆ ಪ್ರತಿಷ್ಠಿತ ಝೆಪ್ಟೋ ಪುರಸ್ಕಾರ
ಬೆಂಗಳೂರು: 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಸ್ಥೆಯು ಇತ್ತೀಚೆಗೆ ದಾಖಲೆಯ ವಹೀವಾಟು ನಡೆಸಿತ್ತು. ಹಲವು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಕೆಎಸ್ಡಿಎಲ್ ಪ್ರತಿಷ್ಠಿತ 'ಝೆಪ್ಟೋ ಉತ್ಕೃಷ್ಟತಾ ಪುರಸ್ಕಾರ' ಭಾಜನವಾಗಿದೆ.
ಕೆಎಸ್ಡಿಎಲ್ ಕುರಿತು ಮಾಹಿತಿ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಸಾಬೂನು ಸಂಸ್ಥೆಯು ತನ್ನ ಪಾರಂಪರಿಕ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪ್ ವಹಿವಾಟು ಉಪಕ್ರಮಕ್ಕಾಗಿ 'ತ್ವರಿತ ವಾಣಿಜ್ಯ ವಹಿವಾಟು' (ಕ್ವಿಕ್ ಕಾಮರ್ಸ್) ವಿಭಾಗದಲ್ಲಿ ಪ್ರತಿಷ್ಠಿತ ಝೆಪ್ಟೋ ಕಂಪನಿಯ "ಪೂರೈಕೆ ಸರಪಳಿ ಉತ್ಕೃಷ್ಟತಾ ಪುರಸ್ಕಾರ'ಕ್ಕೆ (ಸಪ್ಲೈ ಚೈನ್ ಎಕ್ಸಲೆನ್ಸ್ ಅವಾರ್ಡ್) ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಇ-ಕಾಮರ್ಸ್ ವಹೀವಾಟು 122 ಕೋಟಿ ರೂ.ಗೆ ಹೆಚ್ಚಳ
ಮೂರು ವರ್ಷಗಳ ಹಿಂದೆ ಕೆ.ಎಸ್.ಡಿ.ಎಲ್ ಸಂಸ್ಥೆಯ ಇ-ಕಾಮರ್ಸ್ ವಹಿವಾಟು ಕೇವಲ 28 ಕೋಟಿ ರೂಪಾಯಿ ಇತ್ತು. ನಾನು ಸಚಿವನಾದ ಮೇಲೆ ತೆಗೆದುಕೊಂಡ ದಿಟ್ಟ ಮಾರುಕಟ್ಟೆ ವಿಸ್ತರಣೆ ನಿರ್ಧಾರದ ಫಲವಾಗಿ ಇದು ಈಗ 122 ಕೋಟಿ ರೂಪಾಯಿ ತಲುಪಿದೆ. ಇದೇ ರೀತಿ 'ಝೆಪ್ಟೋ' ತ್ವರಿತ ವಹಿವಾಟು ವೇದಿಕೆಗಳಲ್ಲಿ ಎರಡು ವರ್ಷಗಳ ಹಿಂದೆ ತಿಂಗಳಿಗೆ ಕೇವಲ 10 ಲಕ್ಷ ರೂಪಾಯಿ ಮೌಲ್ಯದ ಮೈಸೂರು ಸ್ಯಾಂಡಲ್ ಸೋಪ್ ಮಾರಾಟವಾಗುತ್ತಿತ್ತು. ಈಗ ಇದು 2 ಕೋಟಿ ರೂಪಾಯಿ ತಲುಪಿದೆ. ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಈಗ ಪ್ರಥಮ ಸ್ಥಾನದಲ್ಲಿದೆ ಎಂದು ವಿವರಿಸಿದರು.
ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಸಂಸ್ಥೆ ಮುಂಚೂಣಿ
ಕೆ.ಎಸ್.ಡಿ.ಎಲ್ ಸಂಸ್ಥೆಯು ತನ್ನ ಪರಂಪರೆ ಮತ್ತು ನಂಬಿಕೆಗಳನ್ನು ಬಿಟ್ಟುಕೊಡದೆ, ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವಹಿವಾಟು ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಸಾಧಿಸಿದೆ. ಅದು ಪ್ರತಿಷ್ಠಿತ ಪ್ರಶಸ್ತಿಯ ಮೂಲಕ ಪ್ರತಿಫಲಿಸುತ್ತಿದೆ. ಡಿಜಿಟಲ್ ವಹಿವಾಟು ವೇದಿಕೆಗಳಲ್ಲಿ ಕೆ.ಎಸ್ ಡಿ.ಎಲ್ ಉತ್ಪನ್ನಗಳು ಅಗ್ರಗಣ್ಯ ಬ್ರ್ಯಾಂಡ್ ಆಗಿವೆ. ಎಫ್ಎಂಸಿಜಿ ವಿಭಾಗದಲ್ಲಿ ಮುಂಚೂಣಿಯಲ್ಲಿವೆ. ಇದಕ್ಕೆ ನಾವು ತಂದಿರುವ ಸುಧಾರಣೆಗಳು, ನಿರ್ದಿಷ್ಟ ಉತ್ಪಾದನಾ ವಿಧಾನ, ತಂತ್ರಜ್ಞಾನ ಆಧಾರಿತ ಪೂರೈಕೆ ವ್ಯವಸ್ಥೆ ಮತ್ತು ಝೆಪ್ಟೋ ಮುಂತಾದ ಕಂಪನಿಗಳ ಜತೆ ಹೊಂದಿರುವ ಸಹಭಾಗಿತ್ವ ಮುಂತಾದ ಉಪಕ್ರಮಗಳು ಕಾರಣವಾಗಿವೆ. ಇ-ಕಾಮರ್ಸ್ ವಹಿವಾಟಿಗೆಂದೇ ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ಪ್ರತ್ಯೇಕ ಪೂರೈಕೆದಾರರನ್ನು ನೇಮಿಸಿಕೊಂಡಿದ್ದೇವೆ ಎಂದರು.
ಸಂಸ್ಥೆಯು ಡಿಜಿಟಲ್ ಮಾರುಕಟ್ಟೆ ಬಲವರ್ಧನೆಗೆಂದೇ ಕೀವರ್ಡ್ ಜಾಹೀರಾತು, ಆನ್ಲೈನ್ ಪ್ರಚಾರ, ಬ್ಯಾನರ್ ಆಂದೋಲನ, ಬ್ರ್ಯಾಂಡ್ ವಿಸಿಬಲಿಟಿ ಮತ್ತು ಗ್ರಾಹಕ ಸಂಶೋಧನೆ ಮುಂತಾದ ಹೆಜ್ಜೆಗಳನ್ನು ಇಟ್ಟಿದೆ ಎಂದು ತಿಳಿಸಿದರು.
ಶತಮಾನದಲ್ಲೇ ಅತ್ಯಧಿಕ ವಹಿವಾಟು, ಲಾಭ
ಕೆಎಸ್ಡಿಎಲ್ ಕಳೆದ ಸುಮಾರು ಹನ್ನೊಂದು ದಶಕಗಳಲ್ಲೇ 2025-26ರ ದಶಕದಲ್ಲಿ 2016 ಕೋಟಿ ರೂಪಾಯಿ ವಹಿವಾಟು ನಡೆಸಿ ಹೊಸ ಮೈಲಿಗಲ್ಲು ಸಾಧಿಸಿದೆ. ಇದರಿಂದ 507 ಕೋಟಿ ರೂ.ನಿವ್ವಳ ಲಾಭ ಕಂಡಿದೆ. ಹೊಸ ಹೊಸ ಉಪಕ್ರಮಗಳಿಂದ ಸಾಬುನು, ಮಾರ್ಜಕ ಇನ್ನಿತರ ವಸ್ತುಗಳು ಜನರಿಗೆ ಹತ್ತಿರವಾಗುತ್ತಿವೆ. ಇನ್ನೂ ಶ್ರೀಗಂಧ ಅಧ್ಯಯನ ಪೀಠವನ್ನು ವಿಜಯಪುರದಲ್ಲಿ ಸ್ಥಾಪಿಸಲು ಚಿಂತನೆ ನಡೆಸಿರುವ ಸಚಿವರು, ಉತ್ಪನ್ನಗಳಿಗೆ ಪೂರಕವಾದ ಶ್ರೀಗಂಧ ಮರಗಳ ಕಳ್ಳತನ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಮರಗಳ್ಳತನ ತಡೆಯುವಲ್ಲಿ ಯಾವುದೇ ಉಪಾಯ, ಸಲಹೆಗಳು, ಉಪಕ್ರಮಗಳಿದ್ದರೂ ಅಳವಡಿಸಿಕೊಳ್ಳಲು ಸಿದ್ಧ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.













Click it and Unblock the Notifications