ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಜೈ ಎಂದ ಎಚ್.ವಿಶ್ವನಾಥ್!
ಬೆಂಗಳೂರು, ಆಗಸ್ಟ್ 29 : ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ಅವರ ಸಲಹೆ ಪಡೆದಿದ್ದಾರೆ. ಬ್ರಿಗೇಡ್ ರಚನೆ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಕೆಲವು ದಿನಗಳಿಂದ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಕೆ.ಎಸ್.ಈಶ್ವರಪ್ಪ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶಮೂರ್ತಿ ಮುಂತಾದ ನಾಯಕರು ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದರು.[ಕರ್ನಾಟಕ ಬಿಜೆಪಿ ಬಿಕ್ಕಟ್ಟಿಗೆ 'ರಾಮ'ಬಾಣ ಸಿದ್ಧ!]
ಈಶ್ವರಪ್ಪ ಭೇಟಿ ಬಳಿಕ ಮಾತನಾಡಿದ ಎಚ್.ವಿಶ್ವನಾಥ್ ಅವರು 'ಈಶ್ವರಪ್ಪ ಮತ್ತು ಅವರ ಹಲವು ಬೆಂಬಲಿಗರು ಸಂಘಟನೆ ಹುಟ್ಟು ಹಾಕುವ ಬಗ್ಗೆ ನನ್ನಿಂದ ಸಲಹೆ ಕಳಿದ್ದಾರೆ. ರಾಜಕೀಯ ಅಧಿಕಾರ ಪಡೆಯುವ ಲಾಭಕ್ಕಾಗಿ ಈ ಕೆಲಸಕ್ಕೆ ಕೈ ಹಾಕುವುದಾದರೆ. ಆ ಕೆಲಸವನ್ನು ಮಾಡಲೇಬೇಡಿ' ಎಂದು ಸಲಹೆ ನೀಡಿದ್ದೇನೆ' ಎಂದು ಹೇಳಿದರು.[ಟ್ರಸ್ಟ್ ರೂಪದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೋಂದಣಿ!]
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲು ಈಗಾಗಲೇ ಈಶ್ವರಪ್ಪ ಅವರು ನಿರ್ಧರಿಸಿದ್ದು, ಅಕ್ಟೋಬರ್ 1ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದ ಸಿದ್ಧತೆಗಳ ಕುರಿತು ಚರ್ಚಿಸಲು ಆಗಸ್ಟ್ 31ರಂದು ಕೂಡಲ ಸಂಗಮದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ...
ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ
'ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ ಕುರುಬ ಸಮುದಾಯಕ್ಕೆ ಅವರಿಂದ ಏನೂ ಆಗಿಲ್ಲ. ಅಹಿಂದದ ಮೂಲಕ ಕುರುಬರಿಗೆ ಏನೋ ಉಪಕಾರವಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದೆ' ಎಂದು ವಿಶ್ವನಾಥ್ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರಿಗೆ ನಂಬಿಕೆ ಹೋಗಿದೆ
'ಅಹಿಂದ ಎಂಬ ಪರಿಭಾಷೆಯ ಬಗ್ಗೆ ಜನರಿಗೆ ನಂಬಿಕೆ ಹೋಗಿದೆ. ಈ ಹಿನ್ನಲೆಯಲ್ಲಿ ರಾಯಣ್ಣ ಹೆಸರಿನಲ್ಲಿ ಈಶ್ವರಪ್ಪ ಹಿಂದುಳಿದವರು, ದಲಿತರನ್ನು ಸಂಘಟಿಸಲು ಹೊರಟಿರುವುದು ಸ್ವಾಗತಾರ್ಹ ಅಲ್ಪಸಂಖ್ಯಾತರನ್ನು ಸೇರಿಸಿಕೊಂಡರೆ ಇನ್ನೂ ಒಳ್ಳೆಯದು' ಎಂದು ವಿಶ್ವನಾಥ್ ಸಲಹೆ ನೀಡಿದ್ದಾರೆ.
'ಈಶ್ವರಪ್ಪ ಅವರು ಬೇರೆಡೆ ಹೊರಳಿದ್ದಾರೆ'
ಈಶ್ವರಪ್ಪ, ವಿಶ್ವನಾಥ್ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು, 'ಈಶ್ವರಪ್ಪ ಅವರು ಶಿವಮೊಗ್ಗ ರಾಜಕಾರಣ ಬಿಟ್ಟು ಬೇರೆಡೆ ಹೊರಳಿದ್ದಾರೆ. ವಿಶ್ವನಾಥ್ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಬಯಸಿ ಅವರನ್ನು ಭೇಟಿ ಮಾಡಿರಬಹುದು' ಎಂದು ಹೇಳಿದ್ದಾರೆ.
ಬ್ರಿಗೇಡ್ ನೋಂದಣಿಯಾಗಿದೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಈಗಾಗಲೇ ನೋಂದಣಿಯಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಟ್ರಸ್ಟ್ ರೂಪದಲ್ಲಿ ನೋಂದಣಿ ಮಾಡಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಟ್ರಸ್ಟ್ನಲ್ಲಿ ಕೆ.ಎಸ್.ಈಶ್ವರಪ್ಪ ಅವರು ಯಾವುದೇ ಹುದ್ದೆಯನ್ನು ಪಡೆದಿಲ್ಲ