ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನ ಸಂಪುಟದಿಂದ ಕೈಬಿಡುವಂತೆ ಕೆ ಎಸ್ ಈಶ್ವರಪ್ಪ ಆಗ್ರಹ
ಶಿವಮೊಗ್ಗ, ಆಗಸ್ಟ್ 07: ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 8 ರಿಂದ 10 ಲಕ್ಷ ಕೇಳ್ತಾರೆ ಎಂದು ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳು ಕೃಷಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಈ ರೀತಿ ಮೊದಲ ಬಾರಿ ಆಗಿದೆ. ರಾಜ್ಯಪಾಲರು ಸಂಬಂಧಪಟ್ಟ ಅಧಿಕಾರಿಗೆ ತನಿಖೆಗೆ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳು ಕೃಷಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು, ತನಿಖೆ ಮಾಡಿ ಹಣ ಲೂಟಿ ಮಾಡಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸರಕಾರ ಬಂದು ಮೂರು ತಿಂಗಳು ಆಗಿಲ್ಲ. ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಬಿ ಎಸ್ ಯಡಿಯೂರಪ್ಪ ಅವರು ರೈತರಿಗೆ ಕೊಟ್ಟ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿಟ್ಟ ಬೇರೆ ಬೇರೆ ಹಣ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ದ್ರೋಹಿ ಆಗಿದ್ದಾರೆ. ರೈತರ ದ್ರೋಹಿ ಯಾರಾದ್ರೂ ಇದ್ದರೆ ಅದು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರದ ರೈತರ ಯೋಜನೆ ಮುಂದುವರೆಸಲು ಈಶ್ವರಪ್ಪ ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರ ಸಮಸ್ಯೆ ಪರಿಹರಿಸುವುದಿರಲಿ, ಅವರ ಶಾಸಕರ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಬಹಿರಂಗವಾಗಿಯೇ ಸಚಿವರು, ಶಾಸಕರೇ ನಮಗೆ ಸಮಾಧಾನ ಇಲ್ಲ ಎಂತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮೊದಲು ಸರ್ಕಾರ ಜನರ ಸಂಕಷ್ಟಗಳನ್ನು ಅರಿಯಬೇಕು. ಶಾಸಕರ ಸಮಾಧಾನ ಮಾಡಲು 6-7 ಜಿಲ್ಲೆ ಶಾಸಕರ ಸಮಾಧಾನ ಮಾಡಲು ಸಭೆ ಮಾಡುವಂತಹ ದುಸ್ಥಿತಿ ಈ ಸರಕಾರಕ್ಕೆ ಬಂದಿದೆ. ಇಂತಹ ಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಬಂದಿರೋದು ಬಹಳ ಅನ್ಯಾಯವಾಗಿದೆ. ಲೋಕಸಭೆ ಚುನಾವಣೆ ತಯಾರಿ ಮಾಡಿಕೊಳ್ಳಲಿ ಅದು ಅವರ ವಿಚಾರ. ದೆಹಲಿ, ಹೈದ್ರಾಬಾದ್ ಎಲ್ಲಿಗಾದರೂ ಹೋಗಲಿ. ಆದರೆ, ಮೊದಲು ಜನರ ಸಮಸ್ಯೆ ಬಗ್ಗೆ ಗಮನ ಕೊಡಿ ಎಂದ ಈಶ್ವರಪ್ಪ ಹೇಳಿದರು.












Click it and Unblock the Notifications