KRS Dam: ಕೆಆರ್ಎಸ್ ಜಲಾಶಯದ ಒಳಹರಿವು ಮತ್ತೆ ಹೆಚ್ಚಳ; ಮೆಟ್ಟೂರು ಜಲಾಶಯಕ್ಕೂ ಹೆಚ್ಚಾದ ಒಳಹರಿವು
ಕೊಡಗು ಮತ್ತು ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಕಾವೇರಿ ನದಿ ಪಾತ್ರದ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಮಂಗಳವಾರ ಕೆಆರ್ ಎಸ್ ಜಲಾಶಯದ ಒಳಹರಿವು ಮತ್ತೆ ಹೆಚ್ಚಾಗಿದ್ದು, ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೂ ಒಳಹರಿವು ಆರಂಭವಾಗಿದೆ.
ಮಂಗಳವಾರ ಕೆಆರ್ ಎಸ್ ಜಲಾಶಯದ ಒಳಹರಿವು 12400 ಕ್ಯೂಸೆಕ್ಸ್ಗೆ ಏರಿಕೆಯಾಗಿದೆ. ಕಬಿನಿ ಜಲಾಶಯದ ಒಳಹರಿವು 10,400 ಕ್ಯೂಸೆಕ್ಸ್ ಆಗಿದೆ. ಹೇಮಾವತಿ ಜಲಾಶಯಕ್ಕೂ ಉತ್ತಮ ಒಳಹರಿವು ಇದ್ದು, 8500 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.

ಮಂಗಳವಾರ ಬೆಳಗ್ಗೆ 8787 ಕ್ಯೂಸೆಕ್ಸ್ ಇದ್ದ ಕೆಆರ್ ಎಸ್ ಒಳಹರಿವು ಮಧ್ಯಾಹ್ನದ ವೇಲೆ 12400 ಕ್ಯೂಸೆಕ್ಸ್ಗೆ ಏರಿಕೆಯಾಗಿದೆ. ಮಳೆ ಮತ್ತಷ್ಟು ಚುರುಕಾಗುವ ಸಾಧ್ಯತೆ ಇದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಮಾಡಲಾಗಿದೆ.
100 ಅಡಿಕೆ 3.5 ಅಡಿ ಬಾಕಿ
ಕೆಆರ್ ಎಸ್ನಲ್ಲಿ ನೀರಿನ ಸಂಗ್ರಹ ಮಟ್ಟ 96.5 ಅಡಿಗೆ ತಲುಪಿದ್ದು 100 ಅಡಿಗೆ ಇನ್ನು 3.5 ಅಡಿಯಷ್ಟು ನೀರು ಬರಬೇಕಿದೆ. 124 ಅಡಿ ಗರಿಷ್ಠ ಸಂಗ್ರಹ ಮಟ್ಟವಾಗಿದೆ. 49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 20.191 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯದಿಂದ 1542 ಕ್ಯೂಸೆಕ್ಸ್ ನೀರು ಹೊರಬಿಡುತ್ತಿದ್ದು ತಮಿಳುನಾಡಿನ ಮೆಟ್ಟೂರು ಜಲಾಶಯದ ಒಳಹರಿವು ಕೂಡ ಹೆಚ್ಚಾಗುತ್ತಿದೆ. ಮೆಟ್ಟೂರು ಜಲಾಶಯಕ್ಕೆ ಸದ್ಯ 876 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ.
ಸೋಮವಾರ ಮೆಟ್ಟೂರು ಜಲಾಶಯದ ಒಳಹರಿವು 1038 ಕ್ಯೂಸೆಕ್ಸ್ ಇತ್ತು, ಮಂಗಳವಾರ ಒಳಹರಿವು ಪ್ರಮಾಣ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಜೂನ್ ತಿಂಗಳಿನಲ್ಲೇ ರಾಜ್ಯದ ಜಲಾಶಯಗಳಿಗೆ ಉತ್ತಮ ಹರಿವು ಇದ್ದ ಕಾರಣ, ಜುಲೈ ಮಳೆಗೆ ರಾಜ್ಯದ ಜಲಾಶಯಗಳು ತುಂಬುವ ನಿರೀಕ್ಷೆ ಇದೆ. ಆದಷ್ಟು ಬೇಗನೆ ಕಾವೇರಿ ನದಿಪಾತ್ರದ ರಾಜ್ಯದ ಜಲಾಶಯಗಳು ಭರ್ತಿಯಾಗಿ ಮೆಟ್ಟೂರು ಜಲಾಶಯಕ್ಕೆ ನೀರು ಹರಿದು ತುಂಬಿದರೆ, ಈ ಬಾರಿಯಾದರೂ ಕಾವೇರಿ ಪಾತ್ರದ ರಾಜ್ಯದ ರೈತರು ನೆಮ್ಮದಿಯಾಗಿ ಬೆಳೆ ಬೆಳೆದುಕೊಳ್ಳಬಹುದಾಗಿದೆ.
ಕಳೆದ ವರ್ಷ ರಾಜ್ಯದಲ್ಲಿ ಬರಗಾಲ ಇದ್ದರೂ ತಮಿಳುನಾಡಿಗೆ ನೀರು ಬಿಡುವ ಅನಿವಾರ್ಯತೆ ರಾಜ್ಯಕ್ಕೆ ಬಂದಿತ್ತು. ಕೆಆರ್ ಎಸ್ ಜಲಾನಯನ ವ್ಯಾಪ್ತಿಯ ರೈತರು ನೀರು ಸಿಗದೆ ಬೆಳೆ ಬೆಳೆಯದೆ ನಷ್ಟ ಮಾಡಿಕೊಂಡಿದ್ದರು. ಈ ಬಾರಿ ಕೂಡ ಇನ್ನೂ ನಾಲೆಗಳಿಗೆ ನೀರು ಹರಿಸಿಲ್ಲ, ಜಲಾಶಯದ ನೀರಿನ ಸಂಗ್ರಹ 100 ಅಡಿ ದಾಟಿದ ಬಳಿಕ ನಾಲೆಗಳಿಗೆ ನೀರು ಹರಿಸುವುದಾಗಿ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ.












Click it and Unblock the Notifications