ಕೆಪಿಎಂಇ ಕಾಯ್ದೆಗೆ ರಾಜ್ಯಪಾಲರ ಅಂಕಿತ, ಫೆಬ್ರವರಿಯಿಂದ ಜಾರಿ ಸಾಧ್ಯತೆ
ಬೆಂಗಳೂರು, ಜನವರಿ 6 : ತೀವ್ರ ವಿವಾದಕ್ಕೀಡಾಗಿದ್ದ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ಕಾಯ್ದೆಗೆ ಕೊನೆಗೂ ರಾಜ್ಯಪಾಲ ವಜುಭಾಯಿ ವಾಲ ಅವರು ಸಹಿ ಹಾಕಿದ್ದು, ಮುಂದಿನ ತಿಂಗಳೂ ಅಂದರೆ ಫೆಬ್ರವರಿಯಿಂದ ಕಾಯ್ದೆ ಜಾರಿಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್ ಕುಮಾರ್, " ಕೆಪಿಎಂಇ ಕಾಯ್ದೆ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ. ಹಾಗೆಯೇ ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಸಹ ಇದರಿಂದ ಯಾವ ತೊಂದರೆಯಾಗುವುದಿಲ್ಲ" ಎಂದು ಹೇಳಿದರು.
ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದ ನಂತರ ಇದನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳಿಸಲಾಗಿತ್ತು. ಗುರುವಾರದಂದು ಸಚಿವ ರಮೇಶ್ ಕುಮಾರ್ ರಾಜ್ಯಪಾಲರೊಡನೆ ಚರ್ಚೆ ನಡೆಸಿದ ನಂತರ ಶುಕ್ರವಾರ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಈ ಕಾಯ್ದೆಯಿಂದ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಮನಸ್ಸಿಗೆ ಬಂದಂತೆ ವಿಧಿಸುವ ಚಿಕಿತ್ಸಾ ದರಕ್ಕೆ ನಿಯಂತ್ರಣ ಬೀಳಲಿದೆ. ಈ ಕಾಯ್ದೆಯನ್ನು ಜಾರಿಗೆ ತರದಂತೆ ಇತ್ತೀಚೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ ರಾಜ್ಯದ ಖಾಸಗಿ ವೈದ್ಯರು ಮೂರ್ನಾಲ್ಕು ದಿನಗಳ ವರೆಗೆ ಆಸ್ಪತ್ರೆಗಳನ್ನು ಮುಚ್ಚಿ ಧರಣಿ ನಡೆಸಿದ್ದರು.
ವೈದ್ಯರ ಪ್ರತಿಭಟನೆಯಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಹತ್ತಾರು ರೋಗಿಗಳು ಸಾವನ್ನಪ್ಪಿದ್ದರು.












Click it and Unblock the Notifications