ನಲಪಾಡ್ ಗೆ ಸ್ಪರ್ಧಿಸಲು ಅನುಮತಿ ನೀಡಿದ್ದೇಕೆ, ಅತಿಹೆಚ್ಚು ಮತ ಪಡೆದ ಮೇಲೆ ಅಮಾನತು ಮಾಡಿದ್ದೇಕೆ?
ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿರೀಕ್ಷೆಗೂ ಮೀರಿ ಮತ ಚಲಾವಣೆಯಾಗಿತ್ತು. ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಮಿಥುನ್ ರೈ ಕಣದಿಂದ ಹಿಂದಕ್ಕೆ ಸರಿದಿದ್ದರು.
ಪಕ್ಷದ ಮೊದಲ ಪಂಕ್ತಿಯ ಯಾವ ನಾಯಕರೂ ಯಾವ ಅಭ್ಯರ್ಥಿಗಳ ಜೊತೆಗೂ ಗುರುತಿಸಿಕೊಳ್ಳಬಾರದು ಎನ್ನುವ ಫರ್ಮಾನ್ ಅನ್ನು ಹೊರಡಿಸಲಾಗಿತ್ತು. ಹಾಗಾಗಿ, ಬಹಿರಂಗವಾಗಿ ಯಾರೂ ಇವರೇ ನಮ್ಮ ಅಭ್ಯರ್ಥಿ ಎಂದು ಹೇಳಿಕೊಂಡಿರಲಿಲ್ಲ.
ಆದರೆ, ತೆರೆಯ ಹಿಂದೆ ಇದು ಸ್ಪಷ್ಟವಾಗಿ ಎರಡು ಬಣದ ಪ್ರತಿಷ್ಠೆಯಂತೆ ಕಂಡು ಬಂದು, ಫಲಿತಾಂಶ ಘೋಷಣೆಯಾದ ನಂತರ ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಡಿಕೆಶಿ ಒಲವು ತೋರಿದ್ದರು. ಈ ನಿಟ್ಟಿನಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ ಡಿಕೆಶಿ ಮನವಿ ಮಾಡಿದ್ದರು. ಆದರೆ, ನಲಪಾಡ್ ಇದಕ್ಕೆ ಒಪ್ಪಿರಲಿಲ್ಲ.

ಎಂ.ಎಸ್.ರಾಮಯ್ಯ ಅವರ ಮೊಮ್ಮಗ ರಕ್ಷಾ ರಾಮಯ್ಯ
ನಲಪಾಡ್ ಕಣದಿಂದ ಹಿಂದಕ್ಕೆ ಸರಿಯಲು ಒಪ್ಪದ ಹಿನ್ನಲೆಯಲ್ಲಿ ಇವರಿಗೆ ಸ್ಪರ್ಧಿಸಲು ಅನುಮತಿ ನೀಡಲಾಗಿತ್ತು. ಈಗ ಅವರು ಅತಿಹೆಚ್ಚು ಮತಗಳಿಸಿದರೂ, ಅವರ ಗೆಲುವನ್ನು ಅಮಾನತು ಮಾಡಿ, ಎಂ.ಎಸ್.ರಾಮಯ್ಯ ಅವರ ಮೊಮ್ಮಗ ರಕ್ಷಾ ರಾಮಯ್ಯ ಅವರನ್ನು ವಿಜೇತ ಎಂದು ಘೋಷಿಸಲಾಗಿದೆ.

ನಲಪಾಡ್ ಅವರನ್ನು ಸ್ಪರ್ಧಿಸಲು ಅನುಮತಿ ನೀಡಿದ್ದೇಕೆ
ಇಲ್ಲಿರುವ ಪ್ರಶ್ನೆಯೆಂದರೆ ನಲಪಾಡ್ ಅವರನ್ನು ಸ್ಪರ್ಧಿಸಲು ಅನುಮತಿ ನೀಡಿ, ಅವರು ಅತಿಹೆಚ್ಚು ಮತ ಪಡೆದ ನಂತರ ಅಮಾನತಿನಲ್ಲಿ ಇಟ್ಟಿದ್ಯಾಕೆ ಎನ್ನುವುದು. ಹಾಗಾದರೆ, ನಲಪಾಡ್ ಪರ ಮತ ಚಲಾಯಿಸಿದ ಕೇಡರ್ ಗಳು ಮೂರ್ಖರೇ, ಅವರ ಮತಗಳಿಗೆ ಮೌಲ್ಯವಿಲ್ಲವೇ ಎನ್ನುವುದು ಕೆಪಿಸಿಸಿ ಪಡಶಾಲೆಯಲ್ಲಿ ಹರಿದಾಡುವ ಮಾತು.

ಎಷ್ಟು ಸರಿ ಎನ್ನುವುದು ಸ್ವಾಭಾವಿಕವಾಗಿ ಕಾಡುವ ಪ್ರಶ್ನೆ
ನಲಪಾಡ್ ಮೇಲೆ ಕೇಸ್ ಇರುವುದು ಮೊದಲೇ ಕೆಪಿಸಿಸಿಯವರಿಗೆ ತಿಳಿದಿರಲಿಲ್ಲವೇ, ಈ ಹಿನ್ನಲೆಯವರಿಗೆ ಸ್ಪರ್ಧಿಸಲು ಅವಕಾಶವಿಲ್ಲ ಎನ್ನುವ ನಿಯಮವನ್ನು ಚುನಾವಣೆಗೆ ಮೊದಲೇ ಯಾಕೆ ಪ್ರಕಟಿಸಿರಲಿಲ್ಲ. ಗೆದ್ದ ಮೇಲೆ ಅದನ್ನು ತಡೆಹಿಡಿದಿದ್ದು ಎಷ್ಟು ಸರಿ ಎನ್ನುವುದು ಸ್ವಾಭಾವಿಕವಾಗಿ ಕಾಡುವ ಪ್ರಶ್ನೆ.

ಮೊದಲೇ ಕೆಪಿಸಿಸಿಯವರಿಗೆ ತಿಳಿದಿರಲಿಲ್ಲವೇ
ಕೆಪಿಸಿಸಿ ಯುವ ಅಧ್ಯಕ್ಷ ಸ್ಥಾನದಲ್ಲಿ ಮೊಹಮ್ಮದ್ ನಲಪಾಡ್, ರಕ್ಷಾ ರಾಮಯ್ಯ ಮತ್ತು ಎಚ್.ಎಸ್.ಮಂಜುನಾಥ್ ಕಣದಲ್ಲಿದ್ದರು. ಇದರಲ್ಲಿ ನಲಪಾಡ್ ಗೆ 64,203, ರಕ್ಷಾ ರಾಮಯ್ಯಗೆ 56,271 ಮತ್ತು ಮಂಜುನಾಥ್ ಗೆ 18,137 ಮತಗಳು ಬಿದ್ದಿದ್ದವು. ಈಗ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷ, ಮಂಜುನಾಥ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.












Click it and Unblock the Notifications