ಕೆಪಿಸಿಸಿ ಅಧ್ಯಕ್ಷ ಹುದ್ದೆ; ಹೊಸ ದಾಳ ಉರುಳಿಸಿದ ಸಿದ್ದರಾಮಯ್ಯ!
ಬೆಂಗಳೂರು, ಆಗಸ್ಟ್ 23 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯದ ಚಿಂತನೆಯಲ್ಲಿ ತೊಡಗಿದ್ದು ತಮ್ಮ ಚಟುವಟಿಕೆಗಳಿಗೆ ವೇಗ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ತಮ್ಮ ಪ್ರಭಾವ ಕುಗ್ಗದಂತೆ ನೋಡಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಆಪ್ತರಾದ ದಿನೇಶ್ ಗುಂಡೂರಾವ್ ನೇಮಕ ಮಾಡಿಸಿದ್ದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಲೋಕಸಭಾ ಚುನಾವಣೆ ಸೋಲಿನ ಬಳಿಕ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷದ ಪ್ರಭಾವಿ ನಾಯಕ ಡಿ. ಕೆ. ಶಿವಕುಮಾರ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಸಿದ್ದರಾಮಯ್ಯ ಮಾಜಿ ಸಚಿವ ಕೃಷ್ಣ ಬೈರೇಗೌಡ ಪರ ಒಲವು ಹೊಂದಿದ್ದು, ಅಧ್ಯಕ್ಷ ಹುದ್ದೆಯ ವಿಚಾರದಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಆ ಮೂಲಕ ಪಕ್ಷದಲ್ಲಿನ ಹಿಡಿತ ತಪ್ಪಿಹೋಗಬಾರದು ಎಂದು ತಂತ್ರ ರೂಪಿಸುತ್ತಿದ್ದಾರೆ.
Recommended Video

ಪತ್ರಿಪಕ್ಷ ನಾಯಕನ ಸ್ಥಾನ
ಮೈತ್ರಿ ಸರ್ಕಾರ ಪತನಗೊಂಡ ನಂತರ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗುವುದು ಖಚಿತವಾಗಿದೆ. ಇದರಿಂದಾಗಿ ಪಕ್ಷದ ಮೇಲೆ ಒಂದು ಮಟ್ಟಿನ ಹಿಡಿತ ಸಿಗುತ್ತದೆ. ಈಗ ಕೆಪಿಸಿಸಿಗೂ ತಮ್ಮ ಆಪ್ತರನ್ನೇ ತಂದು ಕೂರಿಸಿದರೆ ಅನುಕೂಲವಾಗಲಿದೆ ಎಂದು ಚಿಂತನೆ ನಡೆಸಿದ್ದು, ಕೃಷ್ಣ ಬೈರೇಗೌಡ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.

ಡಿ. ಕೆ. ಶಿವಕುಮಾರ್ ಭಯ
ಸಿದ್ದರಾಮಯ್ಯ ಅವರಂತೆಯೇ ಡಿ. ಕೆ. ಶಿವಕುಮಾರ್ ಪ್ರಭಾವಿ ನಾಯಕರು. ಒಂದು ವೇಳೆ ಅವರು ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷ ಬೇರೆ ಯಾರ ಹಿಡಿತಕ್ಕೂ ಸಿಗುವುದಿಲ್ಲ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ. ಆದ್ದರಿಂದ, ಕೆಪಿಸಿಸಿ ಅಧ್ಯಕ್ಷ ಪಟ್ಟ ಡಿಕೆಶಿ ಕೈ ತಪ್ಪಿಸಲು ಪ್ರಯತ್ನ ನಡೆಸಿದ್ದಾರೆ.

ಒಕ್ಕಲಿಗ ಸಮುದಾಯ
ಈಗಾಗಲೇ ಕೆಪಿಸಿಸಿಯ ಅಧ್ಯಕ್ಷ, ಕಾರ್ಯಾಧ್ಯಕ್ಷ ಬಿಟ್ಟು ಉಳಿದ ಎಲ್ಲಾ ಹುದ್ದೆಗಳನ್ನು ವಿಸರ್ಜನೆ ಮಾಡಲಾಗಿದೆ. ನೂತನ ಪದಾಧಿಕಾರಿಗಳ ನೇಮಕ ನಡೆಯಲಿದ್ದು, ಅಧ್ಯಕ್ಷರ ನೇಮಕವೂ ಆಗಲಿದೆ. ಆಗ ಡಿ. ಕೆ. ಶಿವಕುಮಾರ್ ಬದಲು ಅದೇ ಸಮುದಾಯಕ್ಕೆ ಸೇರಿರುವ ಕೃಷ್ಣ ಬೈರೇಗೌಡರನ್ನು ನೇಮಕ ಮಾಡಬೇಕು ಎಂಬುದು ಸಿದ್ದರಾಮಯ್ಯ ತಂತ್ರ.

ಪಕ್ಷದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ತಂತ್ರ
ಅಹಿಂದ ಟ್ರಂಪ್ ಕಾರ್ಡ್, ಜನತಾ ಪರಿವಾರದ ಬಾಂಧವ್ಯ ಇವುಗಳನ್ನು ಬಳಕೆ ಮಾಡಿಕೊಂಡು ಪಕ್ಷದಲ್ಲಿನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಬಯಸಿದ್ದಾರೆ. ಅಹಿಂದ ಸಮಾವೇಶಗಳನ್ನು ನಡೆಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಕೆಲಸಕ್ಕೆ ಸಿದ್ದರಾಮಯ್ಯ ಶೀಘ್ರದಲ್ಲೇ ಕೈ ಹಾಕಲಿದ್ದಾರೆ.












Click it and Unblock the Notifications