'ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಕರೆ ಹಿಂದೆ RSS ಕೈವಾಡ?'
ಬೆಂಗಳೂರು, ಜೂ. 11: ಮಾಜಿ ಕಾಂಗ್ರೆಸ್ ಸಂಸದೀಯ ನಾಯಕ, ಕಾಂಗ್ರೆಸ್ ರಾಜ್ಯಸಭಾ ಚುನಾವಣೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಜೀವ ಬೆದರಿಕೆ ಪ್ರಕರಣ ತಿರುವು ಪಡೆದುಕೊಂಡಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
Recommended Video
ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನಾ ದಿನ (ಜೂ.07) ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿತ್ತು. ಮಧ್ಯರಾತ್ರಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸದಂತೆ ಬೆದರಿಕೆ ಹಾಕಿದ್ದ. ಮಧ್ಯ ರಾತ್ರಿ ಕರೆ ಮಾಡಿ ಹಿಂದಿ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಿದ್ದ. ಅಂದೇ ರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೂ ಅಪರಿಚಿತ ಕಾಲ್ (private number) ಬಂದಿತ್ತು. ಕೊನೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕರೊಬ್ಬರು ಸಂಚಲನ ಮೂಡಿಸುವ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ನಮ್ಮ ತತ್ವ ಸಿದ್ದಾಂತಗಳಿಗೆ ಹೆದರುವ ಮಾತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕೂಡ ಕುತೂಹಲ ಮೂಡಿಸಿದೆ.

ಆರ್ಎಸ್ಎಸ್ ಕೈವಾಡ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ದೂರವಾಣಿ ಕರೆಯ ಹಿಂದೆ ಆರ್ಎಸ್ಎಸ್ ಕೈವಾಡ ಇದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ. ವಿ ಮೋಹನ್ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರ್ಎಸ್ಎಸ್ ಮೇಲೆ ಆರೋಪ ಮಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಸಂಸದೀಯ ನಾಯಕರಾಗಿದ್ದಾಗ ಕೇಂದ್ರ ಸರ್ಕಾರದ ಲೋಪಗಳನ್ನು ಎತ್ತಿ ತೋರಿಸುತ್ತಿದ್ದರು.
ಇದೀಗ ಮತ್ತೆ ಅವರು ರಾಜ್ಯಸಭೆ ಪ್ರವೇಶಿಸಿ ವಿರೋಧ ಪಕ್ಷದ ನಾಯಕರಾಗುವ ಸಾಧ್ಯತೆಯಿದೆ. ಅದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅವರಿಗೆ ಜೀವಬೆದರಿಕೆ ಹಾಕಿ ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.

RSS ನಿಯಂತ್ರಣ
ರಾಜ್ಯದ ಬಿಜೆಪಿ ಸರ್ಕಾರವನ್ನು ಆರ್ಎಸ್ಎಸ್ ನಿಯಂತ್ರಿಸುತ್ತಿದೆ. ಆ ಕಾರಣದಿಂದಲೇ ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಂದಿರುವ ಜೀವ ಬೆದರಿಕೆಯನ್ನು ರಾಜ್ಯಗೃಹ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ದೇಶದಲ್ಲಿ ಶಾಂತಿ-ನೆಮ್ಮದಿ ಕದಡುವ ಕೆಲಸಕ್ಕೆ ಆರ್ಎಸ್ಎಸ್ ಕಾರ್ಯಕರ್ತರು ಮುಂದಾಗಿದ್ದಾರೆ. ರಾಷ್ಟ್ರದಲ್ಲಿನ ಕೋಮು ಗಲಭೆಗಳಿಗೆ ಆರ್ಎಸ್ಎಸ್ ಕಾರಣ. ಖರ್ಗೆ ಅವರಿಗೆ ಬಂದಿರುವ ಜೀವಬೆದರಿಕೆ ಕರೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮೋಹನ್ ಆಗ್ರಹಿಸಿದ್ದಾರೆ.

ಕೆನಡಾದಿಂದ ಬಂದಿತ್ತು ಕಾಲ್
ಈ ಹಿಂದೆ ಕೆನಡಾದಿಂದ ಕರೆ ಬಂದಿತ್ತು ಎಂದು ಮಾಜಿ ಸಚಿವ, ಮಲ್ಲಿಕಾರ್ಜುನ್ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಮಾಹಿತಿ ಕೊಟ್ಟಿದ್ದಾರೆ. ಕೆಲವೊಂದು ಗೋಸ್ಟ್ ಕರೆಗಳು ಬರುತ್ತವೆ. ಕೆಲವೊಂದು ಕಾಲ್ ರೆಕಾರ್ಡ್ ಇರುವುದಿಲ್ಲ. ಉನ್ನತ ಮಟ್ಟದ ತನಿಖೆಗೆ ನಾವು ಪ್ರಯತ್ನ ಮಾಡುತ್ತೇವೆ. ಲ್ಯಾಂಡ್ ಲೈನ್ ಗೆ ಕರೆ ಬಂದಿತ್ತು.
ಎಲ್ಲೋ ರಾಜಕೀಯ ಉದ್ದೇಶ ಇತ್ತು ಎಂದು ಕಾಣುತ್ತದೆ. ನಮ್ಮ ತತ್ವ ಸಿದ್ದಾಂತಗಳಿಗೆ ಹೆದರುವ ಮಾತಿಲ್ಲ. ಅವರು ಏನೋ ಮಾಡುತ್ತೇವೆ ಅಂದುಕೊಂಡ್ರೆ ಅದು ಸುಳ್ಳು. ನಾವು ನಮ್ಮ ತತ್ವ ಸಿದ್ದಾಂತಗಳಿಗೆ ಬದ್ಧರಿದ್ದೇವೆ. ಯಾವುದಕ್ಕೂ ನಾವು ಹೆದರುವುದಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಕೊಟ್ಟಿದ್ದಾರೆ.

ನೋಡೋಣ ಏನ್ಮಾಡ್ತಾರೊ
ತಮಗೆ ಜೀವ ಬೆದರಿಕೆ ಕರೆ ಬಂದಿದ್ದರ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಎರಡು ವರ್ಷಗಳ ಹಿಂದೆಯೂ ಬೆದರಿಕೆ ಕರೆ ಬಂದಿತ್ತು. ಆ ಬಗ್ಗೆ ಲೋಕಸಭೆ ಸ್ಪೀಕರ್ ಗಮನಕ್ಕೆ ತಂದಿದ್ದೆ. ಪ್ರಧಾನಿಯವರ ಗಮನಕ್ಕೂ ತಂದಿದ್ದೆ. ದೆಹಲಿಯ ತುಘಲಕ್ ಠಾಣೆಯಲ್ಲಿ ದೂರೂ ದಾಖಲಾಗಿತ್ತು.
ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗ ಮತ್ತೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪ್ರಿಯಾಂಕ್ ಖರ್ಗೆ ದೂರು ಕೊಟ್ಟಿದ್ದಾರೆ. ನೊಡೋಣ ಏನು ಮಾಡ್ತಾರೆ ಎಂದು ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕೊಟ್ಟಿದ್ದರು.












Click it and Unblock the Notifications