ಕೆಓಎಸ್ ಮುಖ್ಯ ಪರೀಕ್ಷೆ: ಕರಡು ಪ್ರವೇಶ ಪತ್ರದ ಪ್ರಮುಖ ಮಾಹಿತಿ
ಬೆಂಗಳೂರು, ಏಪ್ರಿಲ್ 28: ಮೇ ತಿಂಗಳಿನಲ್ಲಿ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಮುಖ್ಯ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಕರಡು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.
ಈ ಕುರಿತು ಗೋಪಾಲಕೃಷ್ಣ ಹೆಚ್. ಎನ್. ನಿರ್ದೇಶಕರು (ಪರೀಕ್ಷೆಗಳು) ಕೆ. ಎಸ್. ಇ. ಎ. ಬಿ. ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಮೇ-2024 ಮಾಹೆಯಲ್ಲಿ ನಡೆಯಲಿರುವ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳ ಕರಡುಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಸುತ್ತೋಲೆಯ ವಿವರಗಳು: ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಮುಖ್ಯ ಪರೀಕ್ಷೆಯನ್ನು ದಿನಾಂಕ 20/05/2024 ರಿಂದ 29/05/2024 ರವರೆಗೆ ನಡೆಸಲಾಗುತ್ತಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಮಂಡಳಿಯ ವೆಬ್ಸೈಟ್ https://kseab.karnataka.gov.in ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಮಂಡಳಿಯ ಜಾಲತಾಣದಲ್ಲಿ ಕರಡು ಪ್ರವೇಶ ಪತ್ರಗಳನ್ನು ಸಂಬಂಧಿಸಿದ ಕಲಿಕಾ ಕೇಂದ್ರಗಳ ಲಾಗಿನ್ಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿ ಕ್ರಮವಹಿಸುವುದು ಎಂದು ಹೇಳಿದೆ.
ಕಲಿಕಾ ಕೇಂದ್ರದ ಸಮನ್ವಯಾಧಿಕಾರಿಗಳು INSTITUTE LOGIN ನಲ್ಲಿ ತಮ್ಮ ಸಂಸ್ಥೆಯ USER NAME ಹಾಗೂ PASS WORD ಬಳಸಿ ಎಲ್ಲಾ ಅಭ್ಯರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರಿಶೀಲಿಸಬೇಕು. ಕಲಿಕಾ ಕೇಂದ್ರದಿಂದ ನೋಂದಾಯಿಸಿದ ಅಭ್ಯರ್ಥಿಗಳ ಸಂಖ್ಯೆಗೆ ಅನುಸಾರ ನಿಮ್ಮ ಕಲಿಕಾ ಕೇಂದ್ರದ ಸ್ವೀಕೃತವಾದ ಪ್ರವೇಶ ಪತ್ರಗಳ ಸಂಖ್ಯೆಗಳು ತಾಳೆಯಾಗುತ್ತಿರುವ ಬಗ್ಗೆ ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ತಾಳೆ ಹೊಂದದಿದ್ದಲ್ಲಿ ಯಾವ ಅಭ್ಯರ್ಥಿಯ ಪ್ರವೇಶ ಪತ್ರ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಅಗತ್ಯ ಕ್ರಮಕ್ಕಾಗಿ ಸಮರ್ಥನೆಯೊಂದಿಗೆ/ ದಾಖಲೆಗಳನ್ನು ಕಳುಹಿಸಿಕೊಡಬೇಕು.
ಕರಡು ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು/ ತಂದೆ/ ತಾಯಿಯ ಹೆಸರು/ ಜನ್ಮ ದಿನಾಂಕ ಹಾಗೂ ಇತರೆ ತಿದ್ದುಪಡಿಗಳಿದ್ದಲ್ಲಿ ತಲಾ ಅಭ್ಯರ್ಥಿಗೆ ದಂಡ ಶುಲ್ಕ ರೂ.200/-ಗಳನ್ನು ನೆಫ್ಟ್ ಮೂಲಕ ಪಾವತಿಸಿ ತಿದ್ದುಪಡಿಗೆ ಸೂಕ್ತ ದಾಖಲೆಗಳೊಂದಿಗೆ ದಿನಾಂಕ 30/04/2024 ರೊಳಗೆ ಮಂಡಳಿಯನ್ನು ಸಂಪರ್ಕಿಸುವುದು. ವಿಷಯ ಬದಲಾವಣೆಗೆ ಅವಕಾಶವಿರುವುದಿಲ್ಲ.
ಕಲಿಕಾ ಕೇಂದ್ರದ ಸಂಕೇತ ಹಾಗೂ ಸಂಸ್ಥೆಯ ಹೆಸರಿನಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಸಮರ್ಥನೆಯೊಂದಿಗೆ ಮಂಡಳಿಗೆ ಕಳುಹಿಸಿಕೊಡುವುದು. ಕಲಿಕಾ ಕೇಂದ್ರದಿಂದ ಅಪ್ ಲೋಡ್ ಮಾಡಿರುವಂತೆ ಅಭ್ಯರ್ಥಿಗಳ ಮಾಹಿತಿಗಳು, ಭಾವಚಿತ್ರ ಮತ್ತು ಸಹಿಯನ್ನು ಪ್ರವೇಶ ಪತ್ರದಲ್ಲಿ ಮುದ್ರಿಸಲಾಗಿದೆ. ಇವುಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಮಂಡಳಿಯನ್ನು ದಿನಾಂಕ 30/04/2024 ರ ಅಪರಾಹ್ನ 3 ಗಂಟೆಯೊಳಗೆ ಇ-ಮೇಲ್ ಮೂಲಕ ಅಥವಾ ಸೂಕ್ತ ದಾಖಲೆಗಳೊಂದಿಗೆ ಮಂಡಳಿಗೆ ಖುದ್ದು ಹಾಜರಾಗಿ ತಿದ್ದುಪಡಿ ಮಾಡಿಕೊಳ್ಳುವುದು. ಪ್ರವೇಶ ಪತ್ರದಲ್ಲಿ ಹಾಗೂ ಕೇಂದ್ರ ನಾಮ ಪಟ್ಟಿಯಲ್ಲಿ ಭಾವಚಿತ್ರ ಇಲ್ಲದೇ ಇರುವ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ. ಇದರಿಂದ ಅಭ್ಯರ್ಥಿಗೆ ಆಗುವ ತೊಂದರೆಗೆ ಸಂಬಂಧಿಸಿದ ಕಲಿಕಾ ಕೇಂದ್ರದ ಸಮನ್ವಯಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ ಎಂದು ಸ್ಪಷ್ಟ ಪಡಿಸಿದೆ.
ಯಾವುದೇ ಅಭ್ಯರ್ಥಿಯ ಭಾವಚಿತ್ರ ಬದಲಾವಣೆಗೆ ಸಂಬಂಧಿಸಿದಂತೆ, ಪರೀಕ್ಷೆಗೆ ಮುಂಚೆ ಮಾಡಲಾದ ಬದಲಾವಣೆಗಳನ್ನು ಮಾತ್ರ ಮಂಡಳಿಯು ಪರಿಗಣಿಸುತ್ತದೆ. ಕೇಂದ್ರ ನಾಮಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಇದ್ದಲ್ಲಿ ನಾಮಪಟ್ಟಿಯಲ್ಲಿರುವ ಭಾವಚಿತ್ರದ ಅಭ್ಯರ್ಥಿಯೇ ನೈಜ ಅಭ್ಯರ್ಥಿ ಎಂದು ಪರಿಗಣಿಸಲಾಗುವುದು.
ಪರೀಕ್ಷಾ ನಂತರದಲ್ಲಿ ಬರುವ ಅಭ್ಯರ್ಥಿಗಳ ಭಾವಚಿತ್ರ ಬದಲಾವಣೆ ಕುರಿತ ಯಾವುದೇ ಮನವಿಗಳನ್ನು ಮಂಡಳಿ ಪುರಸ್ಕರಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಕಲಿಕಾ ಕೇಂದ್ರದ ಹಾಗೂ ಪರೀಕ್ಷಾ ಕೇಂದ್ರದ ಅಧೀಕ್ಷಕರುಗಳೇ ನೇರ ಜವಾಬ್ದಾರರಾಗಿರುತ್ತಾರೆ. ಈ ರೀತಿ ಆದಲ್ಲಿ ಬದಲಿ ಅಭ್ಯರ್ಥಿ ಪರೀಕ್ಷೆ ಬರೆಯಲು ಸಹಕರಿಸಿ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾಗಿರುತ್ತೀರೆಂದು ಪರಿಗಣಿಸಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಮೇಲೆ ಕೆ.ಸಿ.ಎಸ್.ಆರ್ (ಸಿ.ಸಿ.ಎ) ನಿಯಮ-1957 ಮತ್ತು 1983 ರ ಕರ್ನಾಟಕ ಶಿಕ್ಷಣ ಕಾಯ್ದೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಾಯ್ದೆ-1966 ರನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.
ಕರಡು ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆಗಳನ್ನು ಪಾಲಿಸಲು ಅಭ್ಯರ್ಥಿಗಳಿಗೆ ಅಗತ್ಯವಾದ ಮಾಹಿತಿಯನ್ನು ನೀಡುವುದು. ಕೊನೆ ದಿನಾಂಕದ ನಂತರ ತಿದ್ದುಪಡಿಗೆ ಯಾವುದೇ ಅವಕಾಶವಿರುವುದಿಲ್ಲ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕರಡು ಪ್ರವೇಶ ಪತ್ರದಲ್ಲಿ ಪರೀಕ್ಷೆಗೆ ಹಾಜರಾಗುವ ವಿಷಯದ ಮುಂದೆ ನಮೂದಿಸಿರುವ ವಿಷಯ ಸಂಕೇತ ಖಚಿತ ಪಡಿಸಿಕೊಳ್ಳುವುದು.
ಪರೀಕ್ಷಾ ದಿನಾಂಕ ಪ್ರಾರಂಭವಾದ ವೇಳೆ 09:30 ಗಂಟೆಯ ನಂತರ ಪ್ರವೇಶ ಪತ್ರಗಳನ್ನು Down Load ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮೇಲ್ಕಂಡ ಅಂಶಗಳಂತೆ ನಿಮ್ಮ ಸಂಸ್ಥೆಯ ಎಲ್ಲಾ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಆದ್ಯತೆ ಮೇರೆಗೆ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವುದು ಎಂದು ಹೇಳಿದೆ.












Click it and Unblock the Notifications