ರಾಜ್ಯದ ಗಂಗಾವತಿ ರೈಲು ನಿಲ್ದಾಣಕ್ಕೆ 'ಅಂಜನಾದ್ರಿ' ಹೆಸರು: 3 ನಿಲ್ದಾಣಕ್ಕೆ ಮರುನಾಮಕರಣ
ಬೆಂಗಳೂರು, ನವೆಂಬರ್ 24: ಕರ್ನಾಟಕ ರಾಜ್ಯದಲ್ಲಿ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ನೈಋತ್ಯ ರೈಲ್ವೆಯ ಪ್ರಮುಖ ಮೂರು ನಿಲ್ದಾಣಗಳಿಗೆ ಮಹಾತ್ಮಾ ಗಾಂಧಿ, ಅಂಜನಾದ್ರಿ (ಕಿಷ್ಕಿಂಧಾ), ಹುಲಿಗೆಮ್ಮ ದೇವಿ ಹೆಸರಿಡಲಾಗುತ್ತಿದೆ. ಈ ಕುರಿತು ರೈಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಶೀಫಾರಸು ಮಾಡಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ.
ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ರೈಲು ನಿಲ್ದಾಣಕ್ಕೆ 'ಅಂಜನಾದ್ರಿ (ಕಿಷ್ಕಿಂಧಾ)', ಮುನಿರಾಬಾದ್ ರೈಲು ನಿಲ್ದಾಣಕ್ಕೆ 'ಹುಲಿಗೆಮ್ಮ ದೇವಿ' ಮತ್ತು ಬಾನಾಪುರ ರೈಲ್ವೆ ನಿಲ್ದಾಣಕ್ಕೆ ಮಹಾತ್ಮ ಗಾಂಧಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಭಾನುವಾರ ಹೇಳಿದರು.

ಈ ಮೂರು ಹೆಸರುಗಳನ್ನು ರೈಲು ನಿಲ್ದಾಣಗಳಿಗೆ ಮರುನಾಮಕರಣ ಮಾಡಲು ಶಿಫಾರಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಿಸಲಾಗಿದೆ. ಅವರ ಮೂಲಕ ಇದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳಿಸಿ ಕೊಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಈ ಮೂರು ನಿಲ್ದಾಣಗಳಿಗೆ ಮರುನಾಮಕರಣ ಮಾಡುವುದರ ಹಿಂದೆ ಜನರ ಭಾವನೆಗಳಿಗೆ ಮನ್ನಣೆ ನೀಡಿದಂತೆ ಆಗುತ್ತದೆ. ಅಂಜನಾದ್ರಿಯು ರಾಮಾಯಣದಲ್ಲಿ ಬರುವ ಆಂಜನೇಯನ ಜನ್ಮಸ್ಥಳವಾಗಿದ್ದು, ಹುಲಿಗೆಮ್ಮದೇವಿ ಈ ಭಾಗದ ಜನಪ್ರಿಯ ಜನಪದ ದೇವತೆಯಾಗಿದೆ. ಮಹಾತ್ಮ ಗಾಂಧಿ ಅವರ ಹೆಸರಿಡುವುದರ ಹಿಂದೆ ಕೂಡ ಐತಿಹಾಸಿಕ ಕಾರಣವಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು KSR ನಿಲ್ದಾಣ ಪುನರಾಭಿವೃದ್ಧಿ
ಇತ್ತೀಚೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ರೈಲ್ವೆ ಭೂಮಿ ಅಭಿವೃದ್ಧಿ ಪ್ರಾಧಿಕಾರ ಮತ್ತು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದ ಪುನರಾಭಿವೃದ್ಧಿಯ ಕುರಿತ ಪ್ರಸ್ತಾವನೆಯನ್ನು ಾವರು ಪರಿಶೀಲಿಸಿದರು. ಅಧಿಕಾರಿಗಳಿಂದ ಪುನರ್ ಅಭಿವೃದ್ಧೀ ಯೋಜನೆ ಮಾಹಿತಿ ಪಡೆದರು.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವು ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ಮತ್ತು ಅತ್ಯಾಧುನಿಕ ಸೌಕರ್ಯಗಳೊಂದಿಗೆ ಪುನರಾಭಿವೃದ್ಧಿ ಮಾಡಲು ಸರ್ಕಾರ ಸಿದ್ಧವಿದೆ. ಹೆಚ್ಚುತ್ತಿರುವ ರೈಲು ಪ್ರಯಾಣಿಕರ ಅನುಗುಣಕ್ಕೆ ತಕ್ಕಂತೆ ಸುವ್ಯವಸ್ಥೆಯೊಂದಿಗೆ ನಿಲ್ದಾಣವನ್ನು ಸ್ಥಾಪಿಸಲಾಗುವುದು. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ವಿ.ಸೋಮಣ್ಣ ಅವರು ತಿಳಿಸಿದ್ದಾರೆ.












Click it and Unblock the Notifications