ಹಂಗಾಮಿ ರಾಜ್ಯಪಾಲರಾಗಿ ರೋಸಯ್ಯ ಪ್ರಮಾಣ ವಚನ
ಬೆಂಗಳೂರು, ಜೂ.29: ತಮಿಳುನಾಡಿನ ರಾಜ್ಯಪಾಲ ಕೆ.ರೋಸಯ್ಯ ಅವರು ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾನುವಾರ ಬೆಳಗ್ಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ಎಚ್ ವಘೇಲ ಅವರು ಪ್ರಮಾಣ ವಿಧಿ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ಕ್ಯಾಬಿನೆಟ್ ಸಚಿವರು ಉಪಸ್ಥಿತರಿದ್ದರು.
ಹಂಸರಾಜ್ ಭಾರದ್ವಾಜ್ ಅವರ ಅಧಿಕಾರ ಅವಧಿ ಮುಕ್ತಾಯ(ಜೂ.28ಕ್ಕೆ)ವಾದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮಿಳುನಾಡಿನ ಹಾಲಿ ರಾಜ್ಯಪಾಲ ಕೆ ರೋಸಯ್ಯ ಅವರಿಗೆ ಕರ್ನಾಟಕದ ರಾಜ್ಯಪಾಲರಾಗಿ ಹೆಚ್ಚುವರಿ ಅಧಿಕಾರ ಸ್ವೀಕರಿಸುವಂತೆ ಸೂಚಿಸಿದ್ದರು. ಕರ್ನಾಟಕದಲ್ಲಿ ಹೊಸ ರಾಜ್ಯಪಾಲರು ನೇಮಕಗೊಳ್ಳುವ ತನಕ ರೋಸಯ್ಯ ಅವರು ಹಂಗಾಮಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಜೂ.28ರಂದು ರಾತ್ರಿ ಬೆಂಗಳೂರಿಗೆ ಆಗಮಿಸಿದ ರೋಸಯ್ಯ ಅವರು ಭಾನುವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದು ಮಧ್ಯಾಹ್ನ 12 ಗಂಟೆ ನಂತರ ಚೆನ್ನೈಗೆ ತೆರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರೋಸಯ್ಯ ಅವರು ತಮಿಳುನಾಡಿಗೆ ವಾಪಸ್ ಹೋಗಲಿದ್ದಾರೆ ಎಂದು ರಾಜಭವನ ಮೂಲಗಳು ಹೇಳಿವೆ.[ಭಾರದ್ವಾಜ್ ಮತ್ತು ವಿವಾದಗಳ ಹಿನ್ನೋಟ]
ಎಚ್.ಆರ್.ಭಾರದ್ವಾಜ್ ಅವರಿಂದ ತೆರವಾಗುವ ಕರ್ನಾಟಕದ ರಾಜ್ಯಪಾಲರ ಹುದ್ದೆಗೆ ಯಾರು ನೇಮಕವಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾ, ವಿ.ಕೆ.ಮಲ್ಹೋತ್ರಾ ಮತ್ತು ಕಲ್ಯಾಣ್ ಸಿಂಗ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.












Click it and Unblock the Notifications