ಕರ್ನಾಟಕ ಸಿಎಂ ಬದಲಾಗ್ತಾರಾ? ರಾಜ್ಯದಲ್ಲಿ ಮಳೆ ಕೊರತೆಯಾಗಲ್ಲ: ಕೋಡಿಮಠ ಶ್ರೀ ಅಚ್ಚರಿಯ ಭವಿಷ್ಯ
ಸಿದ್ದರಾಮಯ್ಯ ಕರ್ನಾಟಕ ಸಿಎಂ ಆಗಿ ಐದು ವರ್ಷ ಅವಧಿ ಪೂರ್ಣಗೊಳಿಸ್ತಾರ ಇಲ್ಲ ಅಧಿಕಾರ ಬಿಟ್ಟುಕೊಡ್ತಾರಾ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲವು ನಾಯಕರು ಐದು ವರ್ಷಗಳಿಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದರೆ ಇನ್ನೂ ಕೆಲವರು ಇಲ್ಲ ಇಲ್ಲ 2.5 ವರ್ಷದ ನಂತರ ಸಿಎಂ ಬದಲಾವಣೆ ಆಗುತ್ತೆ ಎಂದಿದ್ದರು. ಹೈಕಮಾಂಡ್ ವಾರ್ನಿಂಗ್ ಕೊಟ್ಟ ನಂತರ ಈ ಬಗ್ಗೆ ಚರ್ಚೆ ತಣ್ಣಗಾಗಿದೆ.
ಈಗ ಕೋಡಿಮಠ ಶ್ರೀಗಳು ಕೂಡ ಸಿದ್ದರಾಮಯ್ಯ ಅವರ ಬದಲಾವಣೆ ಬಗ್ಗೆ ಭವಿಷ್ಯ ನುಡಿದಿದ್ದು ಅಚ್ಚರಿ ಮೂಡಿಸಿದ್ದಾರೆ. ಸಿಎಂ ಆಗಿ ಸಿದ್ದರಾಮಯ್ಯ ಐದು ವರ್ಷ ಪೂರೈಸ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ರಾಜ್ಯ ಸರ್ಕಾರಕ್ಕೆ ಏನೂ ತೊಂದರೆಯಿಲ್ಲ, ಆಸರೆ ಸಿಎಂ ಆಗಿ ಸಿದ್ದರಾಮಯ್ಯ ಅವರು ಮುಂದುವರಿಯುತ್ತಾರ ಇಲ್ಲವಾ ಎನ್ನುವುದು 2024ರ ಲೋಕಸಭೆ ಚುನಾವಣೆಯ ನಂತರ ತೀರ್ಮಾನವಾಗಲಿದೆ ಎಂದು ಹೇಳಿದರು. ಈ ಮೂಲಕ ಲೋಕಸಭಾ ಚುನಾವಣೆ ನಂತರ ರಾಜ್ಯದ ಸಿಎಂ ಬದಲಾದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೇಳಿದ ಪ್ರಶ್ನೆಗೆ, ಚುನಾವಣೆ ಹತ್ತಿರ ಬಂದಾಗ ಈ ಬಗ್ಗೆ ಹೇಳುತ್ತೇನೆ ಎಂದು ಕೋಡಿಮಠ ಶ್ರೀಗಳು ಹೇಳಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ!
ಮುಂದಿನ ದಿನಗಳ ಬಗ್ಗೆ ಭವಿಷ್ಯ ನುಡಿದ ಅವರು, ಭೂಮಿ ಬಿರುಕು ಆಗಲಿದೆ, ದ್ವೇಷ, ಸಾವುಗಳು ಹೆಚ್ಚಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಕೋಡಿಮಠ ಶ್ರೀಗಳು ಹೇಳಿದ್ದಾರೆ. ಜುಲೈನಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿತ್ತು. ಅದೇ ರೀತಿ ಮತ್ತೊಂದು ಸಾರಿ ಮಳೆ ಬರಲಿದೆ ಎಂದರು ಹೇಳಿದರು.
ಅನ್ನಕ್ಕೆ ತೊಂದರೆ ಆಗಲ್ಲ, ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಪ್ರಕೃತಿಯಿಂದ ಕೂಡ ಹಾನಿಯಾಗಲಿದೆ. ಶ್ರಾವಣದಲ್ಲಿ ಮಳೆಯ ಬಗ್ಗೆ ತಿಳಿಯಲಿದೆ. ಶ್ರಾವಣದ ಮಧ್ಯದ ದಿನಗಳಿಂದ ಕಾರ್ತಿಕ ಮಾಸದವರೆಗೆ ಮಳೆಯಾಗಲಿದೆ. ಮಳೆಯಿಂದ ಮತ್ತೆ ಅಪಾಯವಿದೆ ಎಂದು ಹೇಳಿದ್ದಾರೆ.
ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗುತ್ತಿದೆ, ಆದರೂ ಏನೂ ಆಗುವುದಿಲ್ಲ. ನೋಡೋರಿಲ್ಲ, ಕೇಳೋರಿಲ್ಲ, ಖುಷಿ ಪಡುವವರು ಇಲ್ಲ ಎಂದು ಕೋಡಿಮಠ ಶ್ರೀಗಳು ಮಾರ್ಮಿಕವಾಗಿ ಹೇಳಿದ್ದಾರೆ.
ಕೋಡಿಮಠ ಶ್ರೀಗಳ ಮಾತುಗಳನ್ನು ಲಕ್ಷಾಂತರ ಭಕ್ತರು ನಂಬುತ್ತಾರೆ, ಹಲವು ಬಾರಿ ಅವರು ಹೇಳಿದಂತೆ ಆಗಿದೆ ಕೂಡ. ಈಗ ರಾಜ್ಯ ರಾಜಕೀಯದ ಬಗ್ಗೆ ಅಚ್ಚರಿಯ ಭವಿಷ್ಯ ನುಡಿಯುವ ಮೂಲಕ ಸಂಚಲನ ಮೂಡಿಸಿದ್ದಾರೆ. ಆದರೂ ಮಳೆ ಬರುತ್ತದೆ ಎಂದು ಹೇಳಿರುವುದು ಸಂತಸ ಮೂಡಿಸಿದೆ.












Click it and Unblock the Notifications