ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು: ಕೋಡಿ ಶ್ರೀಭವಿಷ್ಯ
ಬೆಂಗಳೂರು, ಆಗಸ್ಟ್ 18: "ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು," ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಶುಭಕೃತವಾದ ತಿಂಗಳಿನಲ್ಲಿ ಈ ಬಾರಿ ಅಶುಭದ ಘಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕಂಪಿನ ಸಿದ್ದ ವೃಷಭೇಂದ್ರ ಕತೃ ಗದ್ದುಗೆ ಶಿಲಾಮಯ ಕಟ್ಟಡದ ಕಾಮಗಾರಿ ವೀಕ್ಷಿಸಿದ ನಂತರ ಕೋಡಿ ಶ್ರೀಗಳು ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ರಾಷ್ಟ್ರ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಮುಂದೆ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ಕೋಡಿಮಠದ ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಭವಿಷ್ಯವಾಣಿಯು ಸಾರ್ವಜನಿಕರಲ್ಲಿಯೂ ಭಯವನ್ನು ಹುಟ್ಟಿಸುವಂತಿದೆ. ಕೋಡಿ ಶ್ರೀಗಳು ನುಡಿದ ಭವಿಷ್ಯ ವಾಣಿಯ ರಹಸ್ಯವೇನು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ದೇಶದಲ್ಲಿ ಜ್ಞಾನದ ಕೊರತೆಯಿಂದ ಧರ್ಮ ಸಂಘರ್ಷ
ಭಾರತದಲ್ಲಿ ಕಳೆದ ಹಲವು ತಿಂಗಳುಗಳಿಂದ ಧರ್ಮ ಸಂಘರ್ಷಗಳು ನಡೆಯುತ್ತಿವೆ. ಜನರಲ್ಲಿ ಜ್ಞಾನರ ಕೊರತೆಯಿಂದಾಗಿ ಧರ್ಮ ಸಂಘರ್ಷಗಳು ನಡೆಯುತ್ತಿವೆ. ಅದೇ ಜ್ಞಾನದ ಕೊರತೆಯು ದೇಶದಲ್ಲಿ ಅಶಾಂತಿದಾಯಕ ವಾತಾವರಣವನ್ನು ಹುಟ್ಟು ಹಾಕುತ್ತಿದೆ ಎಂದು ಶ್ರೀಗಳು ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.

ನಾಡಿನಲ್ಲಿ ಅಗ್ನಿ ಅನಾಹುತದ ಸಂಭವ
ಶುಭಕೃತ ನಾಮ ಸಂವತ್ಸರವು ನಾಡಿನಲ್ಲಿ ಅಶುಭ ಘಟನೆಗಳಿಗೆ ಸಾಕ್ಷಿ ಆಗಲಿದೆ. ಶ್ರೀಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡವೇ ಒಡೆದು ಹಾನಿ ಆಗಿದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಪೂಜೆಯನ್ನು ನೆರವೇರಿಸುವುದಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೇ ಇದು ನಾಡಿನಲ್ಲಿ ನಡೆಯಲಿರುವ ಬೆಂಕಿ ಅನಾಹುತಗಳ ಮುನ್ಸೂಚನೆ ಎಂದು ಶ್ರೀಗಳು ಹೇಳಿದ್ದಾರೆ.

ದೇಶದಲ್ಲಿ ರಾಜಕೀಯ ಪಕ್ಷಗಳು ಇಬ್ಭಾಗ
ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೋಡಿಮಠದ ಶ್ರೀಗಳು ಉಲ್ಲೇಖಿಸಿದ್ದಾರೆ. ಭವಿಷ್ಯದಲ್ಲಿ ದೇಶದ ರಾಜಕೀಯ ಪಕ್ಷಗಳೇ ಇಬ್ಭಾಗವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಬೀಸುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ.

ಮುಂಬರುವ ಕಾರ್ತಿಕ ಮಾಸದಲ್ಲಿ ವಿಕೋಪ
ಕಾರ್ತಿಕ ಮಾಸದಲ್ಲಿ ಪ್ರಕೃತಿ ವಿಕೋಪದ ಅಪಾಯ ಹೆಚ್ಚಾಗಲಿದೆ. ಹಿಂಗಾರು ಮಳೆ ಕಡಿಮೆಯಾಗಿದ್ದರೂ, ಅಕಾಲಿಕ ಮಳೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಅಕಾಲಿಕ ಮಳೆಯು ಪ್ರಕೃತಿ ವಿಕೋಪಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ಇದರಿಂದ ರೋಗ ರುಜಿನಗಳು ಹೆಚ್ಚಾಗುವ ಅಪಾಯವಿದೆ ಎಂದು ಕೋಡಿಶ್ರೀಗಳು ತಮ್ಮ ಭವಿಷ್ಯವಾಣಿಯಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications