ದೊಡ್ಡ ತಲೆಗಳು ಉರುಳುತ್ತವೆ! ನಿಜವಾಗುತ್ತಾ ಕೋಡಿಮಠ ಶ್ರೀಗಳ ಚುನಾವಣಾ ಫಲಿತಾಂಶ ಭವಿಷ್ಯ?
ಕರ್ನಾಟಕ ವಿಧಾನಸಭಾ ಚುನಾವಣೆ ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಬಗ್ಗೆ ಹೇಳಿದ್ದರೆ, ಕಾಂಗ್ರೆಸ್ ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಹೇಳಿರುವುದು ಮೂಲಕ ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಈಗಾಗಲೇ ರಾಜ್ಯಾದ್ಯಂತ ಗೆಲುವು ಸೋಲಿನ ಬಗ್ಗೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.
ಫಲಿತಾಂಶಕ್ಕೆ ಮುನ್ನ ಕೋಡಿಮಠ ಶ್ರೀಗಳು ರಾಜ್ಯ ರಾಜಕೀಯದ ಬಗ್ಗೆ ಹೇಳಿದ್ದ ಭವಿಷ್ಯ ಈಗ ಮತ್ತೆ ಚರ್ಚೆಗೆ ಬಂದಿದೆ. ಜನವರಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ್ದ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ, ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಜೊತೆಗೆ ಈ ಬಾರಿ ಚುನಾವಣೆಯಲ್ಲಿ ಹಲವು ದೊಡ್ಡ ತಲೆಗಳು ಸೋಲು ಕಾಣಲಿವೆ ಎಂದು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.

ರಾಜ್ಯದ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದ ಅವರು, ಕರ್ನಾಟಕದಲ್ಲಿ ರಾಜಕೀಯ ಅಸ್ಥಿರದೆ ಇದೆ, ಚುನಾವಣೆವರೆಗೂ ಪಕ್ಷಾಂತರ ನಡೆಯುತ್ತಲೇ ಇರುತ್ತದೆ, ಎಲ್ಲಾ ಪಕ್ಷಗಳು ಹೊಂದಾಣಿಕೆಯಲ್ಲಿ ಹೋಗುವುದು ಕಷ್ಟ, ಚುನಾವಣೆವರೆಗೂ ಏನು ಹೇಳಲು ಸಾಧ್ಯವಿಲ್ಲ, ಎಲ್ಲ ಛಿದ್ರವಾಗುವ ಸಾಧ್ಯತೆ ಇದೆ, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು.
ಯಾವ ಪಕ್ಷಕ್ಕೆ ಬಹುಮತ?
ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಸರಳ ಬಹುಮತ ಎಂದಿದ್ದರೂ ಕಾಂಗ್ರೆಸ್ ನಾಯಕರೇ 130-140 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನು ಬಿಜೆಪಿ ನಾಯಕರೂ ಕೂಡ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಲಿದ್ದು ಮತ್ತೆ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಇನ್ನೊಂದು ಕಡೆ ಜೆಡಿಎಸ್ ಕಿಂಗ್ ಮೇಕರ್ ಆಗುವ ವಿಶ್ವಾಸದಲ್ಲಿದೆ. ಮತದಾನ ಮುಗಿದ ಬಳಿಕ ಹೆಚ್ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ, ಅಲ್ಲಿಂದಲೇ ರಾಜಕೀಯ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಎರಡೂ ಪಕ್ಷಗಳ ನಾಯಕರು ಕೂಡ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿವೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಚೆಂಡು ಜೆಡಿಎಸ್ ಅಂಗಳಕ್ಕೆ ಬೀಳಲಿದೆ. ಎರಡೂ ಪಕ್ಷಗಳಲ್ಲಿ ಯಾವುದು ಉತ್ತಮ ಎಂದು ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ, ಈಗಾಗಲೇ ಎರಡೂ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಕೈಸುಟ್ಟುಕೊಂಡಿರುವ ಹೆಚ್ಡಿ ಕುಮಾರಸ್ವಾಮಿ ಯಾವ ಪಕ್ಷದ ಜೊತೆ ಹೋಗುತ್ತಾರೆ, ಅಥವಾ ತಟಸ್ಥವಾಗಿ ಉಳಿಯುತ್ತಾರ ಎನ್ನುವ ಕುತೂಹಲ ಎದುರಾಗಿದೆ. ಎಲ್ಲಾ ಗೊಂದಲಗಳಿಗೆ ಮೇ 13ರ ಸಂಜೆ ವೇಳೆಗೆ ತೆರೆ ಬೀಳಲಿದೆ.












Click it and Unblock the Notifications