ಕಿತ್ತಳೆ ನಾಡು ಕೊಡಗಿನಲ್ಲಿ ಹಳೆ ಸುಂದರಿಯರದ್ದೇ ದರ್ಬಾರ್
ಕೊಡಗು, ಅಕ್ಟೋಬರ್, 31: ಕಾರ್.. ಕಾರ್.. ಇಲ್ಮೋಡಿ ಕಾರ್.. ಅಂಥ ನೀವು ಈ ಅಪರೂಪದ ಕಾರು ಮ್ಯೂಸಿಯಂಗೆ ಸುತ್ತು ಹೊಡೆದ ಮೇಲೆ ಖಂಡಿತಾ ಉಸುರುತ್ತೀರಾ.. ಏಕೆಂದರೆ ಆ ಕಾರು ಮ್ಯೂಸಿಯಂ ಹಾಗೆಯೇ ಇದೆ. ಅಲ್ಲಿ ಏಳೆಂಟು ದಶಕ ಪೂರೈಸಿದ ದೇಶ ವಿದೇಶಗಳ ಕಾರು, ಬೈಕ್ ಗಳಿವೆ. ಅದಕ್ಕಿಂತ ಹೆಚ್ಚಾಗಿ ಇಂದಿಗೂ ಅವು ಸುಸ್ಥಿತಿಯಲ್ಲಿವೆ.
ಇಷ್ಟಕ್ಕೂ ಈ ಕಾರು ಮ್ಯೂಸಿಯಂ ಇರುವುದು ಯಾವುದೋ ಪಟ್ಟಣದಲ್ಲಲ್ಲ. ಇದು ಇರುವುದು ಕೊಡಗಿನ ಕಾಫಿ ತೋಟಗಳ ನಡುವೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಕಾರು ಮ್ಯೂಸಿಯಂ ನಿರ್ಮಾಣಗೊಂಡಿರುವುದು ಕೂಡ ಸಂಘ ಸಂಸ್ಥೆಗಳಿಂದಲ್ಲ. ವ್ಯಕ್ತಿಯೊಬ್ಬರ ಹವ್ಯಾಸದ ಫಲವೇ ಕಾರು ಮ್ಯೂಸಿಯಂನ ಸೃಷ್ಟಿಗೆ ಕಾರಣವಾಗಿದೆ.[ರಾಜಶ್ರೀಯನ್ನು ವರಿಸಿದ ಡಿವಿಎಸ್ ಮಗ ಕಾರ್ತಿಕ್ ಗೌಡ]
ಒಟ್ಟಿನಲ್ಲಿ ಒಂದು ಹವ್ಯಾಸ ಒಬ್ಬ ವ್ಯಕ್ತಿಯನ್ನು ಪ್ರಪಂಚದ ಉತ್ಕೃಷ್ಟ ಪ್ರಜೆಯನ್ನಾಗಿ ಮಾಡಲು ಸಾಧ್ಯವಿದೆ. ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುವುದಕ್ಕೆ ಕೊಡಗಿನಲ್ಲಿ ಕಂಡು ಬರುತ್ತಿರುವ ಕಾರ್ ಮ್ಯೂಸಿಯಂ ಸಾಕ್ಷಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಕಿತ್ತಳೆ ನಾಡಾದ ಕೊಡಗಿನಲ್ಲಿ ಇದೀಗ ಕಾರು ಮ್ಯೂಸಿಯಂದೇ ದರ್ಬಾರ್. ಬನ್ನಿ ಕಾರಿನ ಮ್ಯೂಸಿಯಂನ್ನು ಸುತ್ತು ಹಾಕಿ ಬರೋಣ.
ಕಾರ್ ಮ್ಯೂಸಿಯಂ ಇರುವುದು ಎಲ್ಲಿ?
ವಿಶಿಷ್ಟ, ವಿಭಿನ್ನತೆಯ ಅಪರೂಪದ ಕಾರುಗಳ ಮ್ಯೂಸಿಯಂನ್ನು ನೋಡಬೇಕಾದರೆ ಸೌಂದರ್ಯದ ಗಣಿಯಾದ ಕೊಡಗಿನ ಸಿದ್ದಾಪುರದಿಂದ 3ಕಿ.ಮೀ. ದೂರದಲ್ಲಿರುವ ಅಭ್ಯತ್ ಮಂಗಲಕ್ಕೆ ಬರಬೇಕು. ಇಲ್ಲಿ ನಿಮಗೆ ನಾನಾ ಕಾರುಗಳ ನೋಟವನ್ನು ಕಾಣಬಹುದು.
ಸೃಷ್ಟಿಕರ್ತರು ಯಾರು?
ಮೂಲತಃ ಕೊಡಗಿನ ನಿವಾಸಿಯಾದ ಅಹಮ್ಮದ್ ಕುಟ್ಟಿಹಾಜಿಯೇ ಮ್ಯೂಸಿಯಂನ ಸೃಷ್ಟಿಕರ್ತರು. ಇವರು ಕಾರು ಸಂಗ್ರಹವನ್ನು ಕೇವಲ ಒಂದು ಹವ್ಯಾಸವಾಗಿ ಆರಂಭಿಸಿದರು. ಇದು ದೊಡ್ಡಮಟ್ಟದ ಮ್ಯೂಸಿಯಂ ಆಗಿ ಬೆಳೆದು ನಿಂತಿದೆ.[ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ಕಾರ್ ಮ್ಯೂಸಿಯಂನ ವಿಶೇಷತೆ ಏನು?
ಸುಮಾರು 2ಎಕರೆ ವಿಸ್ತೀರ್ಣದಲ್ಲಿ ಅಹಮ್ಮದ್ ಕುಟ್ಟಿಹಾಜಿಯವರು ಕಾರು ಮ್ಯೂಸಿಯಂ ನಿರ್ಮಿಸಿದ್ದು, 1926ರಿಂದ 1965ರವರೆಗಿನ ವಿವಿಧ ಮಾದರಿಯ, ದೇಶ, ವಿದೇಶಗಳ ಅಪರೂಪದ ಕಾರುಗಳಿವೆ. ಮೇಲ್ಮೋಟಕ್ಕೆ ಅವುಗಳು ಪ್ರದರ್ಶನಕ್ಕಿಟ್ಟಂತೆ ಇವೆಯಾದರೂ ಅವುಗಳಲ್ಲಿ 85ಕ್ಕೂ ಹೆಚ್ಚಿನ ಕಾರುಗಳು ಇವತ್ತಿಗೂ ಸುಸ್ಥಿತಿಯಲ್ಲಿದ್ದು ಅವುಗಳಲ್ಲಿ ಕೂತು ಜಾಲಿ ರೈಡ್ ಮಾಡಬಹುದು ಎನ್ನುವುದೇ ಮ್ಯೂಸಿಯಂನ ಮತ್ತೊಂದು ವಿಶೇಷತೆಯಾಗಿದೆ.
ಹವ್ಯಾಸವೇ ಪ್ರಸಿದ್ಧಿಗೊಳಿಸಿತು
ಈ ಕಾರು ಮ್ಯೂಸಿಯಂ ನಿರ್ಮಾಣವಾಗಿದ್ದು ಕೂಡ ಅಹಮ್ಮದ್ ಕುಟ್ಟಿಹಾಜಿ ಅವರ ಹವ್ಯಾಸದ ಫಲದಿಂದಾಗಿಯೇ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸಗಳಿರುವಂತೆ ಅವರಿಗೂ ಹಳೆಯ ಕಾರುಗಳನ್ನು ನೋಡಿದಾಗಲೆಲ್ಲಾ ಅವುಗಳನ್ನು ಸಂಗ್ರಹಿಸಿಡಬೇಕೆಂಬ ಬಯಕೆ ಉಂಟಾಗಿತ್ತು.
ದ್ವಿಚಕ್ರವಾಹನಗಳೂ ಇವೆ!
ಕೇವಲ ವಿವಿಧ ಕಾರ್ ಗಳ ಮ್ಯೂಸಿಯಂ ಅಲ್ಲ. ಇಲ್ಲಿ ದ್ವಿಚಕ್ರಗಳ ಬೈಕ್, ಸ್ಕೂಟರ್ ಗಳು ತನ್ನ ಸ್ಥಾನ ಪಡೆದುಕೊಂಡಿದೆ. ಈ ಬೈಕ್ ಗಳು ಆಧುನಿಕ ಕಾಲದ ಸೋಗನ್ನು ಪಡೆದ ಬೈಕ್ ಗಳಲ್ಲ. ಇವಕ್ಕೆ ಹಲವು ದಶಕಗಳ ಇತಿಹಾಸವಿದೆ.
ಅಹಮ್ಮದ್ ಕುಟ್ಟಿಹಾಜಿ ಅವರು ಕಾರು ಸಂಗ್ರಹಿಸಿದ್ದು ಹೇಗೆ?
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ ಅಹಮ್ಮದ್ ಕುಟ್ಟಿಯವರಿಗೆ ವಾಹನಗಳ ಬಗ್ಗೆ ಹೆಚ್ಚಿನ ಆಸಕ್ತಿ. ಹಾಗಾಗಿ ತಮಗಿದ್ದ ಸಂಪರ್ಕದಲ್ಲಿ ಹಳೆಯ ವಾಹನಗಳನ್ನು ಖರೀದಿಸಿ ಅವುಗಳನ್ನು ದುರಸ್ತಿಪಡಿಸಿ ಸಂಗ್ರಹಿಸಿಡ ತೊಡಗಿದರು. ಇದು ಇವತ್ತು ಕಾಫಿ ತೋಟದ ನಡುವೆ ಮ್ಯೂಸಿಯಂ ನಿರ್ಮಾಣಕ್ಕೆ ಕಾರಣವಾಗಿ ಎಲ್ಲರ ಗಮನಸೆಳೆಯುವಂತೆ ಮಾಡಿದೆ.[ಕೊಡಗಿನಲ್ಲಿ ಹಾಕಿನಮ್ಮೆ ಹುಟ್ಟಿಕೊಂಡ ವಿಶಿಷ್ಟ ಕಥೆ]
ಮ್ಯೂಸಿಯಂ ಪ್ರಸಿದ್ಧಿ ಎಲ್ಲಿವರೆಗೆ ಹಬ್ಬಿದೆ?
ಕೊಡಗಿನ ಪುರಾತನ ಕಾರುಗಳ ಸರದಾರ ಎಂದೇ ಗುರುತಿಸಲ್ಪಡುತ್ತಿರುವ ಅಹಮ್ಮದ್ ಕುಟ್ಟಿ ಹಾಜಿ ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ನಡೆದ ಕಾರು ರ್ಯಾಲಿ ಹಾಗೂ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಂಸೆ ಪಡೆದಿದ್ದಾರೆ. ಈ ಮ್ಯೂಸಿಯಂಗೆ ಈಗಾಗಲೇ ದೇಶಿ ವಿದೇಶಿಗಳ ಪ್ರವಾಸಿಗರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮ್ಯೂಸಿಯಂನ ಮುಖ್ಯ ಉದ್ದೇಶವೇನು?
ಪ್ರತಿ ಕಾರಿನ ಬಣ್ಣ ಹಾಗೂ ಮಾದರಿಯನ್ನು ಮೂಲ ರೂಪದಲ್ಲೇ ಉಳಿಸಿಕೊಂಡು ಬಂದಿರುವ ಅವರು ಈ ಕಾರುಗಳು ಕೇವಲ ಶೆಡ್ ನಲ್ಲಷ್ಟೇ ಉಳಿಯದೆ ಅವುಗಳ ಪರಿಚಯ ಈಗಿನ ಮಕ್ಕಳಿಗೂ ಆಗಲಿ ಎಂಬ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಿ ಮುಕ್ತ ಅವಕಾಶ ಮಾಡಿಕೊಟ್ಟಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಅಹಮ್ಮದ್ ಕುಟ್ಟಿ ಹಾಜಿ ಹೊಂದಿರುವ ಭರವಸೆ ಏನು?
ಮ್ಯೂಸಿಯಂನಲ್ಲಿರುವ ಕಾರುಗಳನ್ನು ಅವರ ತಂದೆ ಕಾಲದಿಂದಲೇ ಸಂಗ್ರಹಿಸಿಕೊಂಡು ಬಂದಿದ್ದು, ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಈ ಮ್ಯೂಸಿಯಂನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ದೇಶ, ವಿದೇಶಗಳ ಗಮನಸೆಳೆಯುವಂತೆ ಮಾಡಬಹುದು ಎಂಬ ಅಭಿಪ್ರಾಯ ಅಹಮ್ಮದ್ ಕುಟ್ಟಿ ಹಾಜಿ ಅವರದ್ದಾಗಿದೆ.