ಕೊಡಗಿನಲ್ಲಿ ಬೂದಿಮುಚ್ಚಿದ ಕೆಂಡದಂಥ ವಾತಾವರಣ
ಮಡಿಕೇರಿ, ನ.10: ಕರ್ನಾಟಕ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿ ಬಿಜೆಪಿ ಕರೆ ನೀಡಿರುವ ಕೊಡಗು ಜಿಲ್ಲಾ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನಗರದ ಹಲವೆಡೆ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐಜಿಪಿ ಸಿಂಗ್, ಎಸ್ಪಿ ವಾರ್ತಿಕಾ ಕಟಿಯಾರ್ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಟಿಪ್ಪು ಪರ ಮೆರವಣಿಗೆ ನಡೆಸಲು ಅನುಮತಿ ನೀಡಿರಲಿಲ್ಲ. ಅದರೆ, ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ. ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ಈಗ ಪರಿಸ್ಥಿತಿ ಹತೋಟಿಯಲ್ಲಿದ್ದರೂ ಬೂದಿಮುಚ್ಚಿದ ಕೆಂಡದಂತಾಗಿದೆ. [ಟಿಪ್ಪು ಸುಲ್ತಾನ್ ವಿರುದ್ಧ ಕ್ರೈಸ್ತ ಸಮುದಾಯದ ವಿರೋಧವೇಕೆ?]
* ಸಾಹಿತಿ ಕಾರ್ನಾಡ್ ಹೇಳಿಕೆ ಖಂಡಿಸಿ, ಬೆಂಗಳೂರು ಸೇರಿದಂತೆ 14 ಜಿಲ್ಲೆಗಳಲ್ಲಿ ಪ್ರತಿಭಟನೆ ಬಂದ್ ನಡೆಸಲು ಬಿಜೆಪಿ ಸಿದ್ಧತೆ.
* ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಬುಧವಾರ(ನ. 11) ದಂದು ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. [ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?]
* ಕುಟ್ಟಪ್ಪ ಅವರ ಸಾವನ್ನು ಖಂಡಿಸಿ, ಚೇರಂಬಾಣಿ ಗ್ರಾಮದಲ್ಲಿ ಮರಗಳಿಗೆ ಬೆಂಕಿ ಹಚ್ಚಿ ಗಲಭೆ ಮಾಡಲಾಗಿದೆ.
* ಕೊಡಗಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜಯಂತಿ ಆಚರಣೆ ಬಂದ್ ಮಾಡಿರುವುದು ತಪ್ಪು ಎಂದ ಜಿಲ್ಲಾ ಉಸ್ತುವಾರಿ ಸಚಿವ ಕೆಜ್ ಜಾರ್ಜ್.
* ಗಲಾಟೆ ನೋಡುತ್ತಾ ನಿಂತಿದ್ದ ರಾಜು ಎಂಬಾತ ಗೋಡೆಯಿಂದ ಕೆಳಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಮೈಸೂರಿನ ಆಪೊಲೋ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
* ಆರ್ ಎಎಫ್, ಕೆಎಸ್ ಆರ್ ಪಿ ಹೆಚ್ಚುವರಿ ತುಕಡಿ ನಿಯೋಜಿಸಲಾಗುತ್ತಿದೆ. ಎಡಿಜಿಪಿ ಅಲೋಕ್ ಮೋಹನ್ ಅವರನ್ನು ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
* ಟಿಪ್ಪು ಸುಲ್ತಾನ್ ಆಚರಣೆ ನಿರ್ಧಾರ ತಪ್ಪಲ್ಲ, ಬಂದ್ ಆಚರಣೆ ತಪ್ಪು. ದುಷ್ಕರ್ಮಿಗಳಿಂದ ಅಮಾಕರ ಹತ್ಯೆ ತಪ್ಪಿಸಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.[ಅಪ್ರತಿಮ ದೇಶಭಕ್ತ ಹುತಾತ್ಮ ಹಜರತ್ ಟಿಪ್ಪು ಸುಲ್ತಾನ್]

* ಮಡಿಕೇರಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ 62 ವರ್ಷ ವಯಸ್ಸಿನ ಕುಟ್ಟಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಧ್ಯಾಹ್ನ 2 ಗಂಟೆಯೊಳಗೆ ಆರೋಪಿಗಳ ಬಂಧನಕ್ಕೆ ಗಡುವು ನೀಡಿದ ವಿಶ್ವ ಹಿಂದೂ ಪರಿಷತ್.
* ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮುಂತಾದ ಕಡೆ ಟಿಪ್ಪು ಆಚರಣೆಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ
* ಟಿಪು ಜಯಂತಿ ಆಚರಣೆ ವಿರೋಧಿಸಿ ತುಮಕೂರು, ಮಂಗಳೂರಿನಲ್ಲೂ ಪ್ರತಿಭಟನೆ
* ತಿಮ್ಮಯ್ಯ ವೃತ್ತದಲ್ಲಿ ನಡೆದ ಗಲಭೆಯಲ್ಲಿ ತಲೆಗೆ ಪೆಟ್ಟು ತಿಂದಿದ್ದ ಕುಟ್ಟಪ್ಪ ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.
* ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿದೆ. ಟಿಪ್ಪು ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು ಮೂವರಿಗೆ ಗಾಯಗಳಾಗಿವೆ. [ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸಿ ಆನ್ ಲೈನ್ ಅರ್ಜಿ]

* ಗಾಯಗೊಂಡವರ ಪೈಕಿ ಒಬ್ಬರನ್ನು ವಿಶ್ವ ಹಿಂದೂಪರಿಷತ್ ಮುಖಂಡ ಕುಟ್ಟಪ್ಪ ಎಂದು ಗುರುತಿಸಲಾಗಿದೆ. ಎಲ್ಲರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
* ಮಕ್ಕಂದೂರು, ತೊಂಬತ್ತುಮನೆ ಮುಂತಾದೆಡೆ ರಸ್ತೆಗಳಿಗೆ ಮರಗಳನ್ನು ಹಾಕಿ ಸಂಚಾರ ಬಂದ್ ಮಾಡಲಾಗಿದೆ.
* ಗೋಣಿಕೊಪ್ಪ, ವಿರಾಜಪೇಟೆ, ಸೋಮವಾರಪೇಟೆ, ಮಡಿಕೇರಿ, ಕುಶಾಲನಗರ ಸೇರಿದಂತೆ ಕೊಡಗಿನ ಬಹುತೇಕ ಎಲ್ಲಾ ನಗರಗಳು ಸಂಪೂರ್ಣ ಬಂದ್ ಆಗಿವೆ.
* ಶಾಲೆ, ಕಾಲೇಜುಗಳು ಮುಚ್ಚಿವೆ. ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಸರ್ಕಾರಿ ಬಸ್ ಗಳಲ್ಲದೆ ಖಾಸಗಿ ಬಸ್ ಗಳು ಕೂಡಾ ರಸ್ತೆಗಿಳಿದಿಲ್ಲ.

ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ: ಟಿಪ್ಪು ಒಬ್ಬ ಪ್ರಜಾಪೀಡಕ. ಆದರೆ ಅವನನ್ನು ಜಾತ್ಯತೀತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಂದು ತಪ್ಪಾಗಿ ವೈಭವೀಕರಿಸಲಾಗುತ್ತಿದೆ. ವಿವಾದಾತ್ಮಕ ವ್ಯಕ್ತಿಯೊಬ್ಬನ ಜಯಂತಿಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರ ಆಚರಿಸುತ್ತಿರುವುದು ದುರದೃಷ್ಟಕರ. ಟಿಪ್ಪು ಆಡಳಿತದಿಂದ ಅತ್ಯಂತ ಹೆಚ್ಚಿಗೆ ನೋವು ಅನುಭವಿಸಿದ ಕೊಡಗು ಜನತೆ ಸೇರಿ ಟಿಪ್ಪುವಿನಿಂದ ಹಿಂಸೆಗೊಳಗಾದವರನ್ನು ಸರ್ಕಾರ ಈ ಮೂಲಕ ಅವಮಾನಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕಪ್ಪು ದಿನಾಚರಣೆ: ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಕೊಡವರು ಕಪ್ಪು ದಿನಾಚರಣೆ ಆಚರಿಸುತ್ತಿದ್ದಾರೆ. ಕೊಡಗು ಹಾಗೂ ಮೈಸೂರು ಜಿಲ್ಲಾಡಳಿತದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸಲಾಗುವುದು ಎಂದು ಬಿಜೆಪಿ ಮುಖಂಡ ಕೆಜಿ ಬೋಪಯ್ಯ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications