ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವುದು ಹೇಗೆ?
ಬೆಂಗಳೂರು, ನವೆಂಬರ್ 20 : ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರ ಪದಚ್ಯುತಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಮಂಡನೆ ಮಾಡಿ, ಅಂಗೀಕಾರ ಪಡೆಯಲಾಗುತ್ತದೆ. ಸದನದಲ್ಲಿ ನಿರ್ಣಯ ಅಂಗೀಕಾರಗೊಂಡ ನಂತರ ಮುಂದಿನ ಪ್ರಕ್ರಿಯೆಗಾಗಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಅದನ್ನು ಸಲ್ಲಿಕೆ ಮಾಡಲಾಗುತ್ತದೆ.
ಲೋಕಾಯುಕ್ತರನ್ನು ಪದಚ್ಯುತಿಗೊಳಿಸಿ ಎಂದು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಹಿ ಹಾಕಿದ ಮನವಿ ಪತ್ರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಸಲ್ಲಿಸಿದ್ದಾರೆ. ಇದನ್ನು ಸದನದಲ್ಲಿ ಮಂಡಿಸಿ ಶಾಸಕರ ಒಪ್ಪಿಗೆ ಪಡೆಯಲಾಗುತ್ತದೆ. [ಲೋಕಾಯುಕ್ತ ಪದಚ್ಯುತಿಗೆ ಒಂದಾದ ಬಿಜೆಪಿ, ಜೆಡಿಎಸ್]
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಕಮಲ್ ಪಂತ್ ಮತ್ತು ರಾಜ್ಯದ ಅಡ್ವೊಕೇಟ್ ಜನರಲ್ ಜೊತೆ ಮಾತುಕತೆ ನಡೆಸಿ, ಈ ಕುರಿತ ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. [ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಲೋಕಾಯುಕ್ತ ಪದಚ್ಯುತಿ ನಿರ್ಣಯವನ್ನು ಉಭಯ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆದ ಬಳಿಕ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುತ್ತದೆ. ನಂತರ ಪದಚ್ಯುತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಪ್ರಕ್ರಿಯೆಗಳೇನು ಎಂದು ಚಿತ್ರಗಳಲ್ಲಿ ನೋಡಿ.....
ಶಾಸಕರ ಸಹಿ ಮೊದಲ ಪ್ರಕ್ರಿಯೆ
ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಣವನ್ನು ಸದನದಲ್ಲಿ ಮಂಡಿಸಲು 50 ಶಾಸಕರು ಅಥವ 33 ವಿಧಾನಪರಿಷತ್ ಸದಸ್ಯರ ಸಹಿ ಇರುವ ಮನವಿ ಪತ್ರ ಬೇಕು. ಈಗಾಗಲೇ ಈ ಪ್ರಕ್ರಿಯೆ ಮುಗಿದಿದ್ದು, ಮನವಿ ಪತ್ರ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಕೈ ಸೇರಿದೆ.
ಉಭಯ ಸದನಗಳಲ್ಲಿ ಚರ್ಚೆ
ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಣಯದ ಬಗ್ಗೆ ಉಭಯ ಸದನದಲ್ಲಿ ಚರ್ಚೆ ನಡೆಯುತ್ತದೆ. ಶಾಸಕರ ಒಪ್ಪಿಗೆ ಪಡೆದ ಬಳಿಕ ಅದನ್ನು ಅಂಗೀಕರಿಸಲಾಗುತ್ತದೆ. ನಂತರ ವಿಧಾನಸಭೆ ಸ್ಪೀಕರ್ ನಿರ್ಣಯವನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಮುಂದಿನ ಪ್ರಕ್ರಿಯೆಗಾಗಿ ಕಳುಹಿಸುತ್ತಾರೆ.
ನ್ಯಾಯಮೂರ್ತಿಗಳ ಸಮಿತಿ ರಚನೆ
ಸ್ಪೀಕರ್ ಕಳುಹಿಸಿದ ನಿರ್ಣಯವನ್ನು ಪರಿಶೀಲಿಸುವ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿರುವ ಮೂವರು ಸದಸ್ಯರ ಸಮಿತಿಯನ್ನು ರಚನೆ ಮಾಡುತ್ತಾರೆ. ಈ ಸಮಿತಿ ಲೋಕಾಯುಕ್ತರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲಿದೆ.
ಲೋಕಾಯುಕ್ತರಿಗೆ 90 ದಿನಗಳ ಅವಕಾಶ
ತಮ್ಮ ವಿರುದ್ಧ ಬಂದಿರುವ ಆರೋಪಗಳು ನಿರಾಧಾರ ಎಂಬುವುದಾದದರೆ ಲೋಕಾಯುಕ್ತರು ದಾಖಲೆ ಸಹಿತಿ ವಿವರಣೆಯನ್ನು ಸಮಿತಿಗೆ 90 ದಿನಗಳಲ್ಲಿ ನೀಡಬೇಕು. ಇದನ್ನು ಪರಿಶೀಲನೆ ಮಾಡುವ ಸಮಿತಿ ತನ್ನ ವರದಿಯನ್ನು ಮುಖ್ಯನ್ಯಾಯಮೂರ್ತಿಗಳಿಗೆ ಮತ್ತು ಸ್ಪೀಕರ್ಗೆ ಸಲ್ಲಿಕೆ ಮಾಡುತ್ತದೆ.
ಸದನದ ಒಪ್ಪಿಗೆ ಬೇಕು
ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ನೀಡುವ ವರದಿಯನ್ನು ಪುನಃ ಸದನದಲ್ಲಿ ಮಂಡಿಸಲಾಗುತ್ತದೆ. ಆಗ ಲೋಕಾಯುಕ್ತ ಪದಚ್ಯುತಿಗೆ ಬಹುಮತ ಸಿಕ್ಕರೆ ಆ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರ ಒಪ್ಪಿಗೆ ಸಿಕ್ಕಿದರೆ ಲೋಕಾಯುಕ್ತರ ಪದಚ್ಯುತಿಯಾಗುತ್ತದೆ.
ಕಾನೂನಿನಲ್ಲಿ ಅವಕಾಶವಿದೆ
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 6ಪ್ರಕಾರ ಲೋಕಾಯುಕ್ತರನ್ನು ದುರ್ವರ್ತನೆ ಮತ್ತು ಅಸಮರ್ಥತೆ ಆಧಾರದ ಮೇಲೆ ಪದಚ್ಯುತಗೊಳಿಸಲು ಅವಕಾಶವಿದೆ. ಪ್ರತಿಪಕ್ಷಗಳು ಇದರ ಮೂಲಕವೇ ಲೋಕಾಯುಕ್ತರ ಪದಚ್ಯುತಿಗೆ ಆಗ್ರಹಿಸುತ್ತಿವೆ.
ಪದಚ್ಯುತಿಗೆ ಏಕೆ ಒತ್ತಾಯ?
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ.ಭಾಸ್ಕರರಾವ್ ಅವರ ಪುತ್ರ ಅಶ್ವಿನ್ರಾವ್ ಬಂಧನವಾಗಿದೆ. ಅವರ ಮೇಲಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ, ಎಫ್ಐಆರ್ ದಾಖಲಾಗಿದೆ. ಆದ್ದರಿಂದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಲೋಕಾಯುಕ್ತರ ಪದಚ್ಯುತಿಗೆ ಒತ್ತಾಯ ಮಾಡುತ್ತಿವೆ.