ಕರ್ನಾಟಕದಲ್ಲಿ ಕೋಮುವಾದಿ ಬಹಿಷ್ಕಾರ: ಕಿರಣ್ ಮಜುಂದಾರ್ ಶಾ ಟ್ವೀಟ್
ಬೆಂಗಳೂರು ಮಾರ್ಚ್ 31: ರಾಜ್ಯದಲ್ಲಿ ಧಾರ್ಮಿಕ ವಿಭಜನೆ ಬಿಕ್ಕಟ್ಟನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಒತ್ತಾಯಿಸಿದ್ದಾರೆ.
ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಭಹಿಷ್ಕಾರ, ಹಲಾಲ್ ಕಟ್-ಜಟ್ಕಾ ಕಟ್ ವಿವಾದಗಳು ಒಂದಾದ ಮೇಲೊಂದರಂತೆ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿವೆ. ಇದರಿಂದ ಹಿಂದೂ ಮುಸ್ಲಿಂ ಎಂಬ ಭೇದ ಭಾವ ಹೆಚ್ಚಾಗುತ್ತಿದ್ದು ದ್ವೇಷದ ಭಾವನೆ ಹುಟ್ಟುಹಾಕುತ್ತಿವೆ. ಇವು ಹೀಗೆ ಮುಂದುವರೆದರೆ ರಾಜ್ಯದಲ್ಲಿ ಅಶಾಂತಿ ತಲೆದೋರಿ ಪರಸ್ಪರ ದ್ವೇಷದ ಮನೋಭಾವನೆ ಹುಟ್ಟುಹಾಕುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಮುಂದಿನ ಕ್ಷೇತ್ರ ಯಾವುದು?: ಅವರೇ ನೀಡಿದ ಸ್ಪಷ್ಟನೆ ಹೀಗಿದೆ..
ಈ ಬಗ್ಗೆ ಟ್ವೀಟ್ ಮಾಡಿರುವ ಮಜುಂದರ್ ಶಾ ಅವರು, ಹೆಚ್ಚುತ್ತಿರುವ ಧಾರ್ಮಿಕ ವಿಭಜನೆಯನ್ನು ಮುಖ್ಯಮಂತ್ರಿ ಕೂಡಲೇ ಬಗೆಹರಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೇ ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡಲಿದೆ ಎಂದು ಎಚ್ಚರಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರವು ಕೋಮುವಾದಿಯಾದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಲಾಲ್ ಕಟ್ ವಿರುದ್ಧ ರೂಪಿಸಿರುವ ಜಟ್ಕಾ ಕಟ್ ಅಭಿಯಾನ, ಸಂಘಟನೆಗಳು ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರಿರುವುದು ಮುಂತಾದ ವಿವಾದಗಳ ಬಗ್ಗೆ ಮಾತನಾಡಿರುವ ಕಿರಣ್ ಮಜುಂದಾರ್ ಶಾ ಅವರು, ಇದು 'ಕೋಮುವಾದಿ ಬಹಿಷ್ಕಾರ' ಎಂದು ಹರಿಹಾಯ್ದಿದ್ದಾರೆ.
ನಮ್ಮ ಸಿಎಂ ಬಗ್ಗೆ ನನಗೆ ವಿಶ್ವಾಸವಿದೆ. ಈ ಸಮಸ್ಯೆಯನ್ನು ಅವರು ಶಾಂತಿಯುತವಾಗಿ ಪರಿಹರಿಸುತ್ತಾರೆ. ಅಲ್ಲದೇ 'ದುರಾದೃಷ್ಟವಶಾತ್ ಪಟ್ಟಭದ್ರ ಹಿತಾಸಕ್ತಿಗಳು ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಹೆಮ್ಮೆಯ ಕನ್ನಡಿಗ ಆಗಿರುವ ನಾನು ಇಂತಹ ಘಟನೆಗಳಿಂದ ಆರ್ಥಿಕ ಪ್ರಗತಿ ಕುಂಠಿತವಾಗುವುದನ್ನು ನೋಡಲು ಬಯಸುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಶ್ರಮಿಸಬೇಕಿದೆ' ಎಂದಿದ್ದಾರೆ.
ಕರ್ನಾಟಕದಲ್ಲಿ ಕೋಮುವಾದಕ್ಕೆ ಅವಕಾಶ ನೀಡಬಾರದು. ಕರ್ನಾಟಕವು ಎಲ್ಲ ಸಮುದಾಯದವರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿಯನ್ನು ರೂಪಿಸಿದೆ. ಐಟಿಬಿಟಿ ಯಂತಹ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ' ಎಂದು ಆಗ್ರಹಿಸಿದ್ದಾರೆ. ವಿಶೇಷ ಅಂದರೆ ಇಂತಹ ಧಾರ್ಮಿಕ ದ್ವೇಷ ಹರಡುವ ಅಭಿಯಾನಗಳ ವಿರುದ್ಧ ಮಾತನಾಡಿದ ಮೊದಲ ದೊಡ್ಡ ಕಾರ್ಪೋರೇಟರ್ ಕಿರಣ್ ಮಜುಂದರ್ ಶಾ ಎನಿಸಿಕೊಂಡಿದ್ದಾರೆ.
ಜಾತ್ರೆ, ಉತ್ಸವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಬಲಪಂಥೀಯ ಗುಂಪುಗಳ ನೀಡಿರುವ ಕರೆಗೆ ಸಂಬಂಧಿಸಿದಂತೆ ಕಿರಣ್ ಮಜುಂದಾರ್-ಶಾ ಪ್ರತಿಕ್ರಿಯಿಸಿದ್ದಾರೆ.
ಬೊಮ್ಮಾಯಿ ಮತ್ತು ಕಿರಣ್ ಶಾ ಅವರಿಗೆ ಟ್ಯಾಗ್ ಮಾಡಿ ವ್ಯಕ್ತಿಯೊಬ್ಬ, ಬೊಮ್ಮಾಯಿ ಅವರು ಕೋಮುಗಳ ನಡುವಿನ ವಿಭಜನೆಯನ್ನು ಹೆಚ್ಚಿಸುತ್ತಾರೆ. ನಮ್ಮ ಕಣ್ಣೆದುರೇ ಕರ್ನಾಟಕ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ಶಾ ಅವರು, ನಮ್ಮ ಮುಖ್ಯಮಂತ್ರಿಗಳು ಪ್ರಗತಿಪರ ನಾಯಕ. ಈ ಬಿಕ್ಕಟ್ಟನ್ನು ಅವರು ಪರಿಹರಿಸುತ್ತಾರೆಂಬ ಭರವಸೆಯಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮುವಾದದಿಂದ ಮುಂದಾಗುವ ಅಪಾಯದ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದರ್ ಶಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.