ಚಿತ್ರ ನಟ ಕಿಚ್ಚ ಸುದೀಪ್ ಪುಣ್ಯಕೋಟಿ ರಾಯಭಾರಿಯನ್ನಾಗಿ ನೇಮಿಸಿ ಸರ್ಕಾರದ ಆದೇಶ
ಬೆಂಗಳೂರು, ಸೆಪ್ಟೆಂಬರ್ 02: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ರನ್ನು ನೇಮಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಕಿಚ್ಚ ಸುದೀಪ್ಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗೋಮಾತೆಯನ್ನು ರಕ್ಷಿಸುವ ಮಹತ್ವದ ಯೋಜನೆ ಇದಾಗಿದ್ದು. ಪಶು ಸಂಗೋಪನೆಯ ಇಲಾಖೆಯು ಜಾನುವಾರುಗಳ ರಕ್ಷಣೆಯನ್ನು ಮಾಡುವ ಸಲುವಾಗಿ ಪುಣ್ಯ ಕೋಟಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಜಾನುವಾರುಗಳನ್ನು ದತ್ತು ಪಡೆಯುವ ಅದನ್ನು ಪಾಲನೆಯನ್ನು ಮಾಡುವ ಮಹತ್ವದ ಯೋಜನೆ ಇದಾಗಿದೆ.
ಕಿಚ್ಚ ಸುದೀಪ್ರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿರುವುದರಿಂದ ಅಭಿಮಾನಿಗಳು ಮತ್ತು ಪ್ರಾಣಿಗಳ ಬಗ್ಗೆ ಪ್ರೀತಿಯುಳ್ಳವರು ಹಸುವನ್ನು ದತ್ತು ತೆಗೆದುಕೊಂಡು ಅದರ ಪಾಲನೆ ಮತ್ತು ಪೋಷಣೆಯನ್ನು ಮಾಡಲು ಸಹಾಯವಾಗಲಿದೆ. ಇನ್ನು ಸ್ವತಃ ತಾವೇ ಹಸುವನ್ನು ಸಾಕದಿದ್ದರೂ ಆ ಹಸುವನ್ನು ದತ್ತು ತೆಗೆದುಕೊಂಡು ಅದರ ಪಾಲನೆ ಪೋಷಣೆಗೆ ತಗಲುವ ವೆಚ್ಚವನ್ನು ದತ್ತು ತೆಗೆದುಕೊಂಡವರು ಭರಿಸಬಹುದಾಗಿದೆ.

ಪುಣ್ಯ ಕೋಟಿ ಯೋಜನೆಯ ರಾಯಭಾರಿ
''ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ಮಹತ್ವದ ಗಿಫ್ಟ್ ಸಿಕ್ಕಿದೆ. ಪುಣ್ಯಕೋಟಿ ಯೋಜನೆಗೆ ಸುದೀಪ್ರನ್ನು ರಾಯಭಾರಿಯನ್ನಾಗಿ ನೇಮಿಸಿದೆ. ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ ಈ ಶುಭಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ'' ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಪತ್ರ ಬರೆದಿದ್ದಾರೆ.

ಸಂಭಾವನೆಯಿಲ್ಲದೇ ಯೋಜನೆಗೆ ರಾಯಭಾರಿ
ಕಿಚ್ಚ ಸುದೀಪ್ರನ್ನು ಪಶು ಸಂಗೋಪನೆ ಇಲಾಖೆಯ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಹಸುಗಳನ್ನು ರಕ್ಷಿಸುವ ಹೊಣೆಗಾರಿಗೆ ಮನುಜ ಕುಲದ್ದಾಗಿದೆ. ತಾಯಿ ಎದೆ ಹಾಲು ಕುಡಿಸುವುದು ನಿಂತರು ಹಸುವಿನ ಹಾಲು ಮಗುವಿನ ಜೀವವನ್ನೇ ಉಳಿಸುತ್ತದೆ. ಇದರಿಂದಾಗಿ ಪುಣ್ಯಕೋಟಿ ಯೋಜನೆ ಮಹತ್ವದ್ದಾಗಿದೆ. ಸುದೀಪ್ ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆ ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.

ಜನ್ಮದಿನ ಶುಭಾಶಯದೊಂದಿಗೆ ಅಧಿಕೃತ ಪತ್ರ
ಈ ಹಿಂದೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ನಟ ಸುದೀಪ್ಗೆ ಪತ್ರ ಬರೆದು, ಪುಣ್ಯಕೋಟಿ ರಾಯಭಾರಿಯಾಗುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಪಶು ಸಂಗೋಪನೆ ಇಲಾಖೆಯ ರಾಯಭಾರಿ ಕೆಲಸ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಇಂದು ಅವರ ಜನ್ಮದಿನದ ಅಂಗವಾಗಿ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಿರುವ ಕುರಿತು ಅಧಿಕೃತವಾಗಿ ಪತ್ರ ಬರೆಯಲಾಗಿದೆ. ಸುದೀಪ್ ಈ ಕೆಲಸಕ್ಕ ಯಾವುದೇ ಸಂಭಾವನೆ ಪಡೆಯದೇ ಗೋಸಂಪತ್ತಿನ ಸಂರಕ್ಷಣೆಗೆ ತಮ್ಮ ಸಣ್ಣದೊಂದು ಅಳಿಲು ಸೇವೆ ಸಲ್ಲಿಸುವುದಾಗಿ ತಿಳಿಸಿರುವುದಾಗಿ ಪ್ರಭು ಚವ್ಹಾಣ್ ವಿವರಿಸಿ, ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಗೋಸೇವೆಗೆ ಅನುಕೂಲ ಎಂದ ಪ್ರಭು ಚವ್ಹಾಣ್
ರಾಜ್ಯದಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ, 100 ಸರ್ಕಾರಿ ಗೋಶಾಲೆಗಳು, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮನಿರ್ಭರ ಗೋಶಾಲೆ, ಸಂಚಾರಿ ಪಶು ಚಿಕಿತ್ಸಾ ವಾಹನಗಳು, ಪಶು ಜಿಲ್ಲಾಸ್ಪತ್ರೆಗಳ ನಿರ್ಮಾಣ, ಸ್ಪೇಷಲ್, ಸೂಪರ್ ಸ್ಪೇಷಾಲಿಟಿ ಹಾಗೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳು, 100 ಪಶು ಚಿಕಿತ್ಸಾಲಯಗಳು, 400 ಪಶು ವೈದ್ಯರ ನೇಮಕಾತಿ, 250 ಕಿರಿಯ ಪಶು ವೈದ್ಯಕೀಯ ಸಹಾಯಕರ ನೇಮಕಾತಿ, ಪುಣ್ಯಕೋಟಿ ದತ್ತು ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೀಗ ಕಿಚ್ಚ ಸುದೀಪ್ ರಾಯಭಾರಿಯಾಗಲು ಒಪ್ಪಿರುವುದು ಗೋಸೇವೆಯಲ್ಲಿ ತೊಡಗಿರುವ ನಮಗೆ ಆನೆಬಲ ಬಂದಂತಾಗಿದೆ ಎಂದು ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications