ಕೇರಳ ಗಡಿ ಸೀಲ್ಡ್: ಈಗ ಪಿಣರಾಯಿ ಸರಕಾರಕ್ಕೆ ಮಾನವೀಯತೆಯ ಪಾಠ ಮಾಡುವವರಾರು, ಸಿದ್ದರಾಮಯ್ಯ, ಗೌಡ್ರೇ?
ತಮ್ಮ ರಾಜ್ಯದಲ್ಲಿ ಕೊರೊನಾ ಹರಡವುದನ್ನು ತಡೆಯಲು ಕರ್ನಾಟಕ ಮತ್ತು ತಮಿಳುನಾಡು ಗಡಿಯನ್ನು ಮುಚ್ಚಲು ಕೇರಳ ಸಿಎಂ ಪಿಣರಾಯಿ ವಿಜಯನ್ ಆದೇಶ ನೀಡಿದ್ದಾರೆ. ಕಣ್ಣೂರು, ಇಡುಕ್ಕಿ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ದಾಖಲಾದ ಬಳಿಕ ಕೇರಳ ಗಡಿಯನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇರಳ ಸರಕಾರ ಹೇಳಿದೆ.
ಕೆಲವು ದಿನಗಳ ಹಿಂದಿನ ವಿದ್ಯಮಾನ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಕಾರಣಕ್ಕಾಗಿ, ಕರ್ನಾಟಕ, ಕೇರಳ ಜೊತೆಗೆ ಹಂಚಿಕೊಂಡಿದ್ದ ಗಡಿಯನ್ನು ಬಂದ್ ಮಾಡಿತ್ತು.
ಕರ್ನಾಟಕದ ಈ ನಿರ್ಧಾರಕ್ಕೆ ಕೆಂಡಾಮಂಡಲವಾಗಿದ್ದ ಕೇರಳ, ಯಡಿಯೂರಪ್ಪ ಸರಕಾರಕ್ಕೆ ಕನಿಷ್ಠ ಮಾನವೀಯತೆ ಇಲ್ಲವೇ ಎಂದು ಬೊಬ್ಬೆ ಹಾಕಿತ್ತು. ಕರ್ನಾಟಕ-ಕೇರಳ ಗಡಿ ಮಾರ್ಗವನ್ನು ತೆರೆಯುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಕೇರಳ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಕೊನೆಗೆ, ಕೇರಳದಿಂದ ಬರುವ ಅಂಬ್ಯುಲೆನ್ಸ್ ಗಳು ಕರ್ನಾಟಕವನ್ನು ಪ್ರವೇಶ ಮಾಡಲು ಒಪ್ಪಿಗೆ ನೀಡಲಾಗಿತ್ತು.
ಯಡಿಯೂರಪ್ಪನವರ ಸರಕಾರದ ನಿರ್ಧಾರಕ್ಕೆ ರಾಜಕೀಯ ಬಣ್ಣ ಬಂದು, ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಸರಕಾರದ ಕ್ರಮವನ್ನು ಟೀಕಿಸಿದ್ದರು. ಗೌಡ್ರು, ಸಿಎಂ ಬಿಎಸ್ವೈಗೆ ಪತ್ರವನ್ನು ಬರೆದು ಮನವಿ ಮಾಡಿದ್ದರು.

ಅ್ಯಂಬುಲೆನ್ಸ್ ಅನ್ನು ಪೊಲೀಸರು ತಡೆದು ನಿಲ್ಲಿಸುವುದು ಅಮಾನವೀಯ, ಗೌಡ್ರು
"ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ದಿಗ್ಬಂಧನ ವಿಧಿಸಿದ್ದರೂ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಅ್ಯಂಬುಲೆನ್ಸ್ ಅನ್ನು ಪೊಲೀಸರು ತಡೆದು ನಿಲ್ಲಿಸುವುದು ಅಮಾನವೀಯ. ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು" ಎಂದು ದೇವೇಗೌಡ್ರು, ಸಿಎಂ ಬಿಎಸ್ವೈಗೆ ಪತ್ರ ಮುಖೇನ ಮನವಿ ಮಾಡಿದ್ದರು.
|
ಮಾನವೀಯತೆಯ ಆಧಾರದಲ್ಲಿ ಬಿಡಬೇಕು, ಸಿದ್ದರಾಮಯ್ಯ
"ಕೊರೊನಾ ವಿರುದ್ದದ ನಮ್ಮ ಹೋರಾಟ ಯಾವುದೇ ಜಾತಿ, ಧರ್ಮ, ಗಡಿಗೆ ಸೀಮಿತವಲ್ಲ. ಕಾಸರಗೋಡಿನಿಂದ ಮಂಗಳೂರಿಗೆ ತುರ್ತು ಸೇವೆಗಾಗಿ ಬರುವ ವಾಹನಗಳನ್ನು ಮಾನವೀಯತೆಯ ಆಧಾರದಲ್ಲಿ ಬಿಡಬೇಕು" ಎಂದು ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿದ್ದರು.

ನನ್ನ ರಾಜ್ಯದ ಜನರ ಹಿತಾದೃಷ್ಟಿ ನೋಡಿಕೊಳ್ಳುವುದು ನನಗೆ ಮುಖ್ಯ, ಬಿಎಸ್ವೈ
ನನ್ನ ರಾಜ್ಯದ ಜನರ ಹಿತಾದೃಷ್ಟಿ ನೋಡಿಕೊಳ್ಳುವುದು ನನಗೆ ಮುಖ್ಯ ಎಂದು ಯಡಿಯೂರಪ್ಪನವರು, ಗೌಡ್ರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದರು. ಕರ್ನಾಟಕಕ್ಕೆ ಮಾನವೀಯತೆಯ ಪಾಠ ಮಾಡಿದ್ದ ಕೇರಳ ಈಗ, ಕರ್ನಾಟಕ - ತಮಿಳುನಾಡು ಗಡಿಯನ್ನು ಬಂದ್ ಮಾಡಿದೆ. ಮಾನವ ಧರ್ಮದಲ್ಲಿ ನಾವು ನಂಬಿಕೆ ಇಟ್ಟವರು ಎಂದಿದ್ದ ಪಿಣರಾಯಿ ವಿಜಯನ್ ಈಗ ಗಡಿ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಪಿಣರಾಯಿ ಸರಕಾರಕ್ಕೆ ಮಾನವೀಯತೆಯ ಪಾಠ ಮಾಡುವವರು ಯಾರು?
ಅಂದು ಮಾನವೀಯತೆ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡ್ರು ಈಗ ಕೇರಳ ಸರಕಾರದ ನಡೆಯ ಬಗ್ಗೆ ಹೇಳಿಕೆಯನ್ನು ನೀಡುತ್ತಾರೋ ಎಂದು ಕಾದು ನೋಡಬೇಕಿದೆ. ಪಿಣರಾಯಿ ಸರಕಾರದ್ದು ಡಬಲ್ ಸ್ಟ್ಯಾಂಡರ್ಡ್ ಎಂದು ಟ್ವಿಟ್ಟರ್ ನಲ್ಲಿ ಲೇವಡಿ ಮಾಡಲಾಗುತ್ತಿದೆ. #KeralaSealed ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.












Click it and Unblock the Notifications