ವಿಕ್ರಮ್ ಹತ್ವಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
ನವದೆಹಲಿ, ಜೂನ್ 17: ಕನ್ನಡದ ಹಿರಿಯ ಸಾಹಿತಿ ಡಾ. ಸುಮತೀಂದ್ರ ನಾಡಿಗ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ 2016ನೇ ಸಾಲಿನ 'ಬಾಲ ಸಾಹಿತ್ಯ ಪುರಸ್ಕಾರ' ದೊರೆತಿದೆ. ಇದರ ಜೊತೆಗೆ ಕಥೆಗಾರ ವಿಕ್ರಮ್ ಹತ್ವಾರ್ ಅವರಿಗೆ 'ಯುವ ಪುರಸ್ಕಾರ' ಸಿಕ್ಕಿದೆ.
ಮಕ್ಕಳ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ಡಾ. ಸುಮತೀಂದ್ರ ನಾಡಿಗ್ ಅವರಿಗೆ 2016ನೇ ಸಾಲಿನ 'ಬಾಲಸಾಹಿತ್ಯ ಪುರಸ್ಕಾರ' ನೀಡಲಾಗಿದೆ. ಯುವ ಕಥೆಗಾರ ವಿಕ್ರಮ್ ಹತ್ವಾರ್ ಅವರ ಸಣ್ಣ ಕಥೆಗಳ ಸಂಗ್ರಹ 'ಜೀರೊ ಮತ್ತು ಒಂದು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. [ಹತ್ವಾರ್ ಅವರು ಬರೆದ ಸಣ್ಣ ಕಥೆ ಬೇಟೆ]
ಕನ್ನಡ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಅವರ ಫಾರ್ದೆಸ್ಟ್ ಫೀಲ್ಡ್ ಆನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್ (ಆತ್ಮಕಥೆ) ಇಂಗ್ಲೀಷ್ ಕೃತಿಗೆ ಯುವ ಪುರಸ್ಕಾರ್ ಪ್ರಶಸ್ತಿ ಲಭಿಸಿದೆ.
ಕೊಂಕಣಿ ಬಾಲ್ಯ ಸಾಹಿತ್ಯ ವಿಭಾಗದಲ್ಲಿ ಗೋವಾದ ಹಿರಿಯ ಸಾಹಿತಿ ಹಾಗೂ ಗೋವಾ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಿಲೀಪ್ ಬೋರ್ಕರ್ ಅವರ 'ಪಿಂಟೂಚಿ ಕಾಳ್ಬೋಂವಡಿ' ಕೃತಿಗೆ ಲಭಿಸಿದೆ. 'ಯುವ ಪುರಸ್ಕಾರ' ವಿಭಾಗದಲ್ಲಿಕೊಂಕಣಿ ಸಾಹಿತ್ಯದಲ್ಲಿ ಗೋವಾದ ಯುವ ಕಥೆಗಾರ್ತಿ ಅನ್ವೇಶಾ ಸಿಂಗ್ಬಾಲ್ ಅವರ ಚೊಚ್ಚಲ ಕವನ ಸಂಕಲನ 'ಸುಲೂಸ್' ಆಯ್ಕೆಯಾಗಿದೆ.
ಯುವ ಪುರಸ್ಕಾರ: ಕನ್ನಡದ ಯುವ ಕಥೆಗಾರ ವಿಕ್ರಮ್ ಹತ್ವಾರ್ ಸೇರಿ 24 ಭಾಷೆಗಳ ಯುವ ಸಾಹಿತಿಗಳಿಗೆ ಪ್ರಶಸ್ತಿ ಘೊಷಿಸಲಾಗಿದೆ. 35 ವರ್ಷದೊಳಗಿನ ಸಾಹಿತಿಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.ಕನ್ನಡದ ಸಾಹಿತಿಗಳ ಆಯ್ಕೆಗೆ ಈ ಬಾರಿ ಡಾ. ಲತಾಗುತ್ತಿ, ಮ.ನ ಜವರಯ್ಯ, ಉಷಾ ಪಿ. ರೈ ಅವರ ಜ್ಯೂರಿ ಸಮಿತಿ ಸಸದ್ಯರಾಗಿದ್ದರು.
ಬಾಲಸಾಹಿತ್ಯ ಪುರಸ್ಕಾರ: 2010ರಿಂದ 2014ರವರೆಗೆ ಪ್ರಕಟವಾಗಿರುವ ಮಕ್ಕಳ ಸಾಹಿತ್ಯ ಕೃತಿಗಳಿಗೆ ಬಾಲಸಾಹಿತ್ಯ ಪುರಸ್ಕಾರ ನೀಡಲಾಗಿದೆ. ಭಾರತದ 21 ಭಾಷೆಗಳಲ್ಲಿ ಪ್ರಶಸ್ತಿ ಘೊಷಿಸಲಾಗಿದ್ದು ಕನ್ನಡ, ತಮಿಳು, ಅಸ್ಸಾಮಿ, ಒಡಿಯಾ, ಪಂಜಾಬಿ, ಮರಾಠಿ ಹಾಗೂ ಸಿಂಧಿ ಭಾಷೆಗಳಲ್ಲಿ ಒಟ್ಟಾರೆ ಕೊಡುಗೆ ಪರಿಗಣಿಸಿ ಸಾಹಿತಿಗಳಿಗೆ ಪ್ರಶಸ್ತಿ ಘೊಷಿಸಲಾಗಿದೆ.
ಯುವ ಪುರಸ್ಕಾರ್ ವಿಜೇತರ ಸಂಪೂರ್ಣ ಪಟ್ಟಿ ಡೌನ್ ಲೋಡ್ ಮಾಡಿಕೊಳ್ಳಿ
50,000 ರು ಪ್ರಶಸ್ತಿ ಮೊತ್ತ, ಕಂಚಿನ ಫಲಕ ನೀಡಿ ಪ್ರಶಸ್ತಿ ವಿಜೇತರನ್ನು ಗೌರವಿಸಲಾಗುತ್ತದೆ. ನ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ವಿಶ್ವನಾಥ ಪ್ರಸಾದ ತಿವಾರಿ ಅಧ್ಯಕ್ಷತೆಯಲ್ಲಿ ಇಂಫಾಲದಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿವಿಧ ಭಾಷೆಗಳಿಗೆ ಪ್ರಶಸ್ತಿ ಆಯ್ಕೆಯನ್ನು ಪ್ರಕಟಿಸಿದರು.














Click it and Unblock the Notifications