ರಂಗನಾಥ ಸರ್ ಗೆ ವಿದಾಯ; ಮುಖರ್ಜಿ ಅಧಿಕಾರಕ್ಕೆ

ಅಂದಹಾಗೆ ರಂಗನಾಥ್ ಸರ್ ಕರ್ನಾಟಕದ ಜನತೆಯ ಸೇವೆ ಮಾಡುವುದು ಬಿಟ್ಟು ಬೇರೆಲ್ಲಿಗೆ ಹೋಗುತ್ತಾರೆ, ಅಲ್ವಾ!?. ಹಾಗಾಗಿಯೇ ಎಲ್ಲವೂ ಅಂದುಕೊಂಡಂತೆ ನಡೆದರೆ ಮಾಹಿತಿ ಹಕ್ಕು ಆಯುಕ್ತರಾಗಿ ಅವರ ಸೇವೆ ಮುಂದುವರಿಯಲಿದೆ.
ಹಾಗಾದರೆ ಮುಂದಿನ CS ಯಾರು ಅಂದರೆ ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಕೌಶಿಕ್ ಮುಖರ್ಜಿ ಅವರು ರಾಜ್ಯದ ನೂತನ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಲಿದ್ದಾರೆ. ಅವರು 23 ತಿಂಗಳು ಕಾಲ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ಯಾರು ಈ ಕೌಶಿಕ್ ಮುಖರ್ಜಿ ?: ಹಾಲಿ ಮುಖ್ಯ ಕಾರ್ಯದರ್ಶಿ ರಂಗನಾಥ್ ಅವರ ಅಧಿಕಾರ ವಿಸ್ತರಣೆ ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಈ ಬಾರಿಯೂ ಕನ್ನಡಿಗರನ್ನೇ ನೇಮಕ ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಸೇವಾ ಜ್ಯೇಷ್ಠತೆ ಹಾಗೂ ಯುಪಿಎಸ್ಸಿ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕೌಶಿಕ್ ಮುಖರ್ಜಿ ಅವರನ್ನೇ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಪಶ್ಚಿಮ ಬಂಗಾಲದ ಕೊಲ್ಕತ್ತಾದವರಾದ ಮುಖರ್ಜಿ 1978 ನೇ ಸಾಲಿನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ. ಮಂಡ್ಯ ಜಿಲ್ಲೆ ಸಹಾಯಕ ಆಯುಕ್ತರಾಗಿ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ಆರಂಭಿಕ ಸೇವೆ ಸಲ್ಲಿಸಿದ್ದ ಅವರು ನಂತರ ಕೇಂದ್ರ ಗೃಹ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಮರಳಿ ರಾಜ್ಯ ಸೇವೆಗೆ ಹಾಜರಾದ ಅವರು, ಮೈಸೂರು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಾಸನ ಜಿಲ್ಲಾಧಿಕಾರಿ, ವಾಟರ್ ಶೆಡ್ ನಿರ್ದೇಶಕ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಆಹಾರ ಮತ್ತು ನಾಗರಿಕ ಪೂರೈಕೆ, ಕೆಎಸ್ ಎಫ್ ಸಿ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ, ಶಿಕ್ಷಣ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಚನೆ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿ ವಿಸ್ತರಣೆ, ಬಂಡಿಪುರದಲ್ಲಿ ಇಕೋ ಸೆನ್ಸಿಟಿವ್ ಝೋನ್ ನಿರ್ಮಾಣ ಸೇರಿದಂತೆ ಹಲವು ಆಡಳಿತಾತ್ಮಕ ಸುಧಾರಣೆಗೆ ಕಾರಣರಾದ ಕೀರ್ತಿ ಹೊಂದಿದ್ದಾರೆ.












Click it and Unblock the Notifications