Sakleshpur RFO : ಸಕಲೇಶಪುರ ಆರ್ಎಫ್ಒ ಶಿಲ್ಪಾ ಅಮಾನತು ರದ್ದು
ಬೆಂಗಳೂರು, ಜನವರಿ 20; ಹಾಸನ ಜಿಲ್ಲೆಯ ಸಕಲೇಶಪುರದ ಆರ್ಎಫ್ಒ ಎಸ್. ಎಲ್. ಶಿಲ್ಪಾ ಅಮಾನತು ಆದೇಶ ರದ್ದುಗೊಳಿಸಿ ಕೆಎಟಿ ಆದೇಶ ಹೊರಡಿಸಿದೆ. ಜನವರಿ 10ರಂದು ಶಿಲ್ಪಾ ಅಮಾನತುಗೊಳಿಸಲಾಗಿತ್ತು.
ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದೆ. ಎಸ್. ಎಲ್. ಶಿಲ್ಪಾ ತಮ್ಮ ಅಮಾನತು ಆದೇಶವನ್ನು ಕೆಎಟಿಯಲ್ಲಿ ಪ್ರಶ್ನೆ ಮಾಡಿದ್ದರು.
ಅಧಿಕಾರಿಯ ಅರ್ಜಿ ಪುರಸ್ಕಾರ ಮಾಡಿರುವ ಕೆಎಟಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಹೊರಡಿಸಿದ್ದ ಎಸ್. ಎಲ್. ಶಿಲ್ಪಾ ಅಮಾನತು ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ವಲಯ ಅರಣ್ಯಾಧಿಕಾರಿ ಎಸ್. ಎಲ್. ಶಿಲ್ಪಾ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಅಮಾನತು ಏಕೆ?; ಅರಣ್ಯ ಅಪರಾಧಗಳ ತನಿಖೆಯಲ್ಲಿ ವಿಫಲ, ಸಿಬ್ಬಂದಿಗಳ ನಿಯಂತ್ರಣದಲ್ಲಿ ವಿಫಲ, ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವಿಫಲ, ಆನೆ ಮತ್ತು ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲ ಸೇರಿದಂತೆ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಎಸ್. ಎಲ್. ಶಿಲ್ಪಾ ಅಮಾನತು ಮಾಡಲಾಗಿತ್ತು.
ಶಿಲ್ಪಾ ಅವರ ಕಾರ್ಯ ವೈಖರಿ ಕುರಿತು ಮೇಲಾಧಿಕಾರಿಗಳು ಸೂಚನೆ ನೀಡಿದರೂ ಯಾವುದೇ ಪತ್ರಕ್ಕೂ ಅವರು ಪ್ರತಿಕ್ರಿಯೆ ನೀಡಿಲ್ಲ ಎಂಬ ಆರೋಪವಿತ್ತು. ಜವಾಬ್ದಾರಿ ನಿರ್ವಹಣೆಯಲ್ಲಿಯೂ ಅವರು ವಿಫಲರಾಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಜನವರಿ 10ರಂದು ಹೊರಡಿಸಿದ ಆದೇಶದಲ್ಲಿ ಕೇಂದ್ರ ಸ್ಥಾನದಲ್ಲಿದ್ದರೆ ಲೋಪಗಳಿಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇಟ್ಟು ಎಸ್. ಎಲ್. ಶಿಲ್ಪಾರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು.
ಎಸ್. ಎಲ್. ಶಿಲ್ಪಾ ಅಮಾನತು ಆದೇಶ ರದ್ದುಗೊಳಿಸಬೇಕು ಎಂದು ಎಸ್ಸಿ, ಎಸ್ಟಿ ಒಕ್ಕೂಟ ಪ್ರತಿಭಟನೆಯನ್ನು ಸಹ ನಡೆಸಿತ್ತು. ಕಾಡುಪ್ರಾಣಿಗಳ ಬೇಟೆ ನಿಯಂತ್ರಣ, ರೆಸಾರ್ಟ್ ಚಟುವಟಿಕೆಗಳಿಗೆ ಅವರು ಕಡಿವಾಣ ಹಾಕಿದ್ದಾರೆ. ಆದ್ದರಿಂದ ಪ್ರಭಾವಿಗಳು ಅಮಾನತು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು.












Click it and Unblock the Notifications