ನಾಡಗೀತೆ ರಾಗ ಸಂಯೋಜನೆಯ ಸರ್ಕಾರದ ನಿರ್ಧಾರ ಸ್ವಾಗತಿಸಿ ಕಸಾಪ
ಬೆಂಗಳೂರು, ಸೆಪ್ಟಂಬರ್ 23: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ 'ಜಯಭಾರತ ಜನನಿಯ ತನುಜಾತೆ'ಗೆ ಸಂಗೀತ ವಿದುಷಿ ಎಚ್.ಆರ್. ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾಸಿನಂತೆ ಕಾಲಾವಧಿ ಅಂತಿಮಗೊಳಿಸಲಾಗಿದೆ. ಮೈಸೂರು ಅನಂತ ಸ್ವಾಮಿಯವರ ರಾಗ ಸಂಯೋಜನೆ ಮತ್ತು 2 ನಿಮಿಷ 20 ಸೆಕೆಂಡ್ಗಳ ಕಾಲಾವಧಿಯನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ನಿರ್ಧಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ.
ಸರ್ಕಾರದ ನಿರ್ಧಾರ ಸ್ವಾಗತಿಸಿ ಮಾತನಾಡಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅಧ್ಯಕ್ಷ ಡಾ. ಮಹೇಶ ಜೋಶಿ ಅವರು,
ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆ ಪರಿಹರಿಸಲಾಗಿದೆ. ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಿಂತಲೂ ಮೊದಲು ಈ ಗೊಂದಲಕ್ಕೆ ಇತಿಶ್ರೀ ಹಾಡಬೇಕಿತ್ತು. ಈ ಬಗ್ಗೆ ಸರ್ಕಾರಕ್ಕೆ ಪರಿಷತ್ತು ಒತ್ತಡ ತಂದಿತ್ತು. ಇದಕ್ಕೆ ಪೂರಕವಾಗಿ ನೀರ್ಣಯ ಕೈಗೊಂಡ ಮುಖ್ಯಮಂತ್ರಿಗಳಿಗೆ ಅವರು ಅಭಿನಂದನೆ ತಿಳಿಸಿದ್ದಾರೆ.
'ಜಯಭಾರತ ಜನನಿಯ ತನುಜಾತೆ' ಕವಿತೆಯನ್ನು 1971ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಡಿಸಿತ್ತು. ಈ ಮೂಲಕ ಪ್ರಸ್ತುತ ಗೀತೆಯನ್ನು ನಾಡಗೀತೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಘೋಷಣೆ ಮಾಡಿತ್ತು. ಮುಂದೆ ಕರ್ನಾಟಕ ಸರಕಾರ 2004ರ ಜನವರಿ 6ರಂದು ಜಯಭಾರತ ಜನನಿಯ ತನುಜಾತೆ ಈ ಹಾಡನ್ನು ಅಧಿಕೃತ ನಾಡಗೀತೆಯೆಂದು ಸರ್ಕಾರ ಘೋಷಿಸಿತ್ತು.

ನಾಡಗೀತೆ ರಾಗ ಸಂಯೋಜನೆಗಾಗಿ 4ಸಮಿತಿ ರಚನೆ
ನಾಡಗೀತೆಯನ್ನು ಯಾವ ಧಾಟಿಯಲ್ಲಿ ಹಾಡಬೇಕು ಎನ್ನುವ ಕುರಿತು ಇದುವರೆಗೂ ಕ್ರಮವಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ವಸಂತ ಕನಕಾಪುರ, ಡಾ. ಚೆನ್ನವೀರ ಕಣವಿ ಮತ್ತು ಡಾ.ಎಚ್.ಆರ್.ಲಿಲಾವತಿ ಅವರ ನೇತ್ರತ್ವದಲ್ಲಿ ನಾಲ್ಕು ಸಮಿತಿಗಳನ್ನು ಕಾಲಕಾಲಕ್ಕೆ ನೇಮಿಸಿ ವರದಿ ಪಡೆಯಲಾಗಿತ್ತು. ಆದರೆ ಧಾಟಿ ಅಂತಿಮ ಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪರಿಷತ್ತು ಒತ್ತಡ ಹೇರಿತ್ತು ಎಂದರು.
ಅಂತಿಮವಾಗಿ ಮೈಸೂರು ಅನಂತಸ್ವಾಮಿಯವರು ನೀಡಿದ ರಾಗ ಸಂಯೋಜನೆಯನ್ನು ಸರ್ಕಾರ ಅಂತಿಮಗೊಳಿಸಿದೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿ ಸೌಹಾರ್ದಯುತ ವಾತಾವರಣ ಉಂಟಾಗಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.












Click it and Unblock the Notifications