ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆ, ರಾಜ್ಯದ ಯಾವ ಜಿಲ್ಲೆಗಳಿವೆ?
ಬೆಂಗಳೂರು, ನವೆಂಬರ್ 23 : ಪ್ರಧಾನಿ ನರೇಂದ್ರ ಮೋದಿ ಅವರು ನಗರ ಅನಿಲ ವಿತರಣಾ ವ್ಯವಸ್ಥೆ (ಸಿಜಿಡಿ)ಗೆ ಚಾಲನೆ ನೀಡಿದ್ದಾರೆ. ಕೊಳವೆಗಳ ಮೂಲಕ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಮಾಡುವ ಯೋಜನೆ ಇದಾಗಿದ್ದು, ಕರ್ನಾಟಕದ 8 ಜಿಲ್ಲೆಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ.
ನವದೆಹಲಿಯಲ್ಲಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ನರೇಂದ್ರ ಮೋದಿ, 'ಮುಂದಿನ 3 ರಿಂದ 4 ವರ್ಷಗಳಲ್ಲಿ ಪೈಪ್ ಮೂಲಕ ಮನೆ-ಮನೆಗೆ ಅಡುಗೆ ಅನಿಲ ಪೂರೈಕೆ ಮಾಡುವ ಯೋಜನೆಯನ್ನು ದೇಶದ 400 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತದೆ' ಎಂದರು.
ಸಿಎನ್ಜಿ ವಿತರಣಾ ಕೇಂದ್ರಗಳ ಸಂಖ್ಯೆಯನ್ನು 2020ರ ವೇಳೆಗೆ 10 ಸಾವಿರಕ್ಕೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರ 12 ಕೋಟಿ ಎಲ್ಪಿಜಿ ಸಂಪರ್ಕವನ್ನು ನೀಡಿದೆ. ಉಜ್ವಲ ಯೋಜನೆಯಡಿ 6 ಕೋಟಿ ಸಂಪರ್ಕವನ್ನು ನೀಡಲಾಗಿದೆ.
ಅಡುಗೆ ಅನಿಲ ಸರಬರಾಜು ಜಾಲವನ್ನು ನಿರ್ಮಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್ಜಿಆರ್ಬಿ) ಈಗಾಗಲೇ 9ನೇ ಹರಾಜು ಪ್ರಕ್ರಿಯೆಯನ್ನು ಮುಗಿಸಿದೆ. 129 ಜಿಲ್ಲೆಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ...

ಕರ್ನಾಟಕದ 8 ಜಿಲ್ಲೆಗಳು
ಅಡುಗೆ ಅನಿಲ ಸರಬರಾಜು ಜಾಲವನ್ನು ನಿರ್ಮಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್ಜಿಆರ್ಬಿ) ಈಗಾಗಲೇ 9ನೇ ಹರಾಜು ಪ್ರಕ್ರಿಯೆಯನ್ನು ಮುಗಿಸಿದೆ. ಕರ್ನಾಟಕದ 8 ಜಿಲ್ಲೆಗಳನ್ನು ಈ ಯೋಜನೆಗೆ ಸೇರಿಸಲಾಗಿದೆ.

ಯಾವ-ಯಾವ ಜಿಲ್ಲೆಗಳು?
ನಗರ ಅನಿಲ ವಿತರಣಾ ವ್ಯವಸ್ಥೆ (ಸಿಜಿಡಿ) ಯೋಜನೆಗೆ ಕರ್ನಾಟಕದ ರಾಮನಗರ, ದಕ್ಷಿಣ, ಉಡುಪಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಬಳ್ಳಾರಿ ಮತ್ತು ಗದಗ ಜಿಲ್ಲೆಗಳು ಸೇರಿವೆ. ದೇಶದ 129 ಜಿಲ್ಲೆಗಳನ್ನು 9ನೇ ಹರಾಜು ಪ್ರಕ್ರಿಯೆಯಲ್ಲಿ ಸೇರಿಸಲಾಗಿದೆ.

10ನೇ ಹರಾಜು ಪ್ರಕ್ರಿಯೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್ಜಿಆರ್ಬಿ) ಈಗಾಗಲೇ 9ನೇ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿದೆ. 10ನೇ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯದ ಬಾಗಲಕೋಟೆ, ರಾಯಚೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕಲಬುರಗಿ, ವಿಜಯಪುರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸೇರಿಸಲಾಗುತ್ತದೆ.

ರಾಮನಗರದಲ್ಲಿ ವಿತರಣೆ ಜಾಲ
ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ರಾಜ್ಯಕ್ಕೆ ಅಡುಗೆ ಅನಿಲ ವಿತರಣೆ ಮಾಡಲಾಗಲಿದೆ. ರಾಮನಗರದಲ್ಲಿ 300 ಕೋಟಿ ವೆಚ್ಚದಲ್ಲಿ ಅನಿಲ ವಿತರಣೆ ಜಾಲವನ್ನು ನಿರ್ಮಾಣ ಮಾಡಲಾಗುತ್ತದೆ. ಒಟ್ಟು 1.13 ಮನೆಗಳಿಗೆ ಅನಿಲ ವಿತರಣೆ ಮಾಡಲಾಗುತ್ತದೆ.












Click it and Unblock the Notifications