ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ
ಮಂಗಳೂರು, ಮಾರ್ಚ್ 12: ಕರ್ನಾಟಕದ ಮಲೆನಾಡು, ಕರಾವಳಿ ಸೇರಿದಂತೆ 6 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಶಿವರಾತ್ರಿ ದಿನದಂದು ಒಂದರ್ಧ ಗಂಟೆ ಜೋರಾಗಿ ಮಳೆ ಸುರಿದಿದೆ. ಕೇರಳದ ಮಳೆ ಮಾರುತಗಳು ಇನ್ನೆರಡು ದಿನಗಳ ಕಾಲ ಕರ್ನಾಟಕ ಕರಾವಳಿಯಲ್ಲಿ ಮಳೆ ಸುರಿಯಲು ಕಾರಣವಾಗಲಿದೆ ಎಂದು ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಿದ್ದು, ಉತ್ತರ ಕನ್ನಡದ ಕೆಲವೆಡೆ ಮಳೆ ಸುರಿದಿದೆ. ರಾಜ್ಯದ ಹಲವೆಡೆ ಮೋಡಕವಿದ ವಾತಾವರಣ ಉಂಟಾಗಿತ್ತು. ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರಿನಲ್ಲಿ ಮುಂದಿನ 24 ಗಂಟೆಯೊಳಗಾಗಿ ಮಳೆಯಾಗುವ ಸಾಧ್ಯತೆಯಿದೆ. ಹೆಚ್ಚಾಗಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಮುನ್ಸೂಚನೆ ಏನಿದೆ?
ಈಶಾನ್ಯ ಮಾರುತಗಳು ಅರಬ್ಬೀಸಮುದ್ರವನ್ನು ಆವರಿಸುತ್ತಿದ್ದು, ಕರ್ನಾಟಕ -ಕೇರಳ ಗಡಿ ಭಾಗದ ಕರಾವಳಿ ಜಿಲ್ಲೆಗಳಲ್ಲಿ ಸೈಕ್ಲೋನ್ ಮಾದರಿ ಗಾಳಿ ಮಳೆ ಸುರಿಯಲಿದೆ. ಈ ಮೂಲಕ ಮುಂಗಾರು ಪೂರ್ವ ಮಳೆ ಆರಂಭ ಎಂದು ಸ್ಕೈಮ್ಯಾಟ್ ವೆದರ್ ಸಂಸ್ಥೆ ಹೇಳಿದೆ.

ಬೆಂಗಳೂರಿನಲ್ಲಿ ಹವಾಮಾನ
ಬೆಂಗಳೂರಿನಲ್ಲಿ ಶುಭ್ರ ಆಕಾಶವಿದ್ದು, ಭಾಗಶಃ ಮೋಡವಿದ್ದರೂ ಮಧ್ಯಾಹ್ನದ ವೇಳೆಗೆ ಬಿಸಿಲು ಜೋರಾಗಲಿದೆ. ಮಾರ್ಚ್ 12ರಂದು ಬೆಂಗಳೂರು ನಗರದಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಉತ್ತರ ಒಳನಾಡಿನ ಒಣ ಹವೆ
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ. ಮಧ್ಯ ಕರ್ನಾಟಕ ಭಾಗದಲ್ಲೂ ಒಣ ಹವೆ ಇರಲಿದೆ. ದಾವಣಗೆರೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತನಕ ತಲುಪಿ ಇಂದು ಬಿಸಿಲು ಬಾಧಿಸಲಿದೆ.
Recommended Video

ಕಲಬುರಗಿಯಲ್ಲಿ ಇಂದು ಬಿಸಿಲಿನ ಆಘಾತ
ಕಲಬುರಗಿಯಲ್ಲಿ ನಿನ್ನೆ 37.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಮಾರ್ಚ್ 12ರಂದು 36 ಡಿಗ್ರಿ ಸೆಲ್ಸಿಯಸ್ ನಂತೆ ಇರಲಿದೆ. ಬೀದರ್ 34 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 35 ಡಿಗ್ರಿ ಸೆಲ್ಸಿಯಸ್ ಹಾಗೂ ಹುಬ್ಬಳ್ಳಿ 34 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೊಂದಿರಲಿದ್ದು, ಎಲ್ಲೆಡೆ ಶುಭ್ರ ಆಕಾಶ ಗೋಚರಿಸಲಿದೆ.












Click it and Unblock the Notifications