Karnataka Weather 2025: ರೈತರ ಪಾಲಿಗೆ ಮಳೆ ವರದಾನವಾಯಿತಾ? ಕೃಷಿಗೆ, ಅಂತರ್ಜಲಕ್ಕೆ ಜೀವ ತುಂಬಿದ ವರ್ಷ
ಬೆಂಗಳೂರು: ಭೌಗೋಳಿಕವಾಗಿ ರಾಜ್ಯದ ಬಹುಪಾಲು ಕೃಷಿ ಪ್ರಧಾನವಾಗಿದೆ. ವ್ಯವಸಾಯ ನಂಬಿಕೊಂಡ ರೈತಾಪಿ ಕುಟುಂಬಗಳು ಹೆಚ್ಚಿವೆ. ಆಹಾರ ಉತ್ಪಾದನೆ, ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ 2025ರಲ್ಲಿ ಹವಾಮಾನವು ರೈತರಿಗೆ ಎಷ್ಟು ಪೂರಕ ಫಲಿತಾಂಶ ನೀಡಿದೆ. ಪೂರ್ವ ಮುಂಗಾರು (ಮಾರ್ಚ್-ಮೇ), ಮುಂಗಾರು ಮಳೆ (ಜೂನ್-ಸೆಪ್ಟಂಬರ್) ಹಾಗೂ ಹಿಂಗಾರು ಮಳೆ (ಅಕ್ಟೋಬರ್-ಡಿಸೆಂಬರ್) ಎಷ್ಟು ದಾಖಲಾಗಿದೆ. ಖಾರಿಫ್ ಮತ್ತು ರಾಬಿ ಬೆಳೆಗಳ ಮೇಲೆ ಏನೆಲ್ಲ ಪ್ರಭಾವ ಬೀರಿತು. ಅಂತರ್ಜಲ ಮರುಪೂರಣ, ಅಧಿಕ ಮಳೆ, ಮಳೆ ಕೊರತೆ ಕಂಡ ಜಿಲ್ಲೆಗಳ ವಿವರ ಈ ಲೇಖನದಲ್ಲಿದೆ.
ರಾಜ್ಯದ ಹವಾಮಾನ ಇಲಾಖೆ ಪ್ರಕಾರ, 2025ರ ಡಿಸೆಂಬರ್ 23ರವರೆಗಿನ ಅಂಕಿ ಸಂಖ್ಯೆಗಳನ್ನು ಇಲ್ಲಿ ಕೊಡಲಾಗಿದೆ. ಎಲ್ಲ ಮಳೆಗಳು ಕೃಷಿ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಿವೆ. ಈ ಅವಧಿಯಲ್ಲಿ ಪೂರ್ವ ಮುಂಗಾರು ಮಳೆ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಯಿತು. ವಾಡಿಕೆಯಷ್ಟು ಮುಂಗಾರು ಮಳೆ ಬಂದರೆ, ಹಿಂಗಾರು ಮಳೆ ನಿರೀಕ್ಷೆಯಷ್ಟು ಬಾರದ ರಾಬಿ ಬೆಳೆಗೆ ಅಹಿತಕರ ವಾತಾವರಣ ನಿರ್ಮಿಸಿತು. ರಾಜ್ಯದಲ್ಲಿ ವಾಡಿಕೆ ಮಳೆಗಿಂತ (1,152 ಮಿ.ಮೀ.) ಅತ್ಯಧಿಕ 1,319 ಮಿ.ಮೀ. ಮಳೆ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಶೇ.15 ರಷ್ಟು ಅಧಿಕ ಮಳೆ ಎಂದು TNIE ವರದಿ ಮಾಡಿದೆ.

ರಾಜ್ಯದಲ್ಲಿ ಪ್ರವೇಶವಾರು ಕೃಷಿ ಭೂಮಿಗಳು ಈ ವರ್ಷ ಉತ್ತಮ ಮಳೆ ಕಂಡಿವೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆ 712 ಮಿ.ಮೀ.ಗಿಂತ ಶೇ.4ರಷ್ಟು ಅಧಿಕ ಅಂದರೆ 741 ಮಿ.ಮೀ. ಮಳೆ ದಾಖಲಾಗಿದೆ. ಉತ್ತರ ಒಳನಾಡು ಭಾಗದಲ್ಲಿ ಸಾಮಾನ್ಯ 700 ಮಿ.ಮೀಗಿಂತ ಶೇ. 21ರಷ್ಟು ಅಧಿಕ 848 ಮಿ.ಮೀ. ಮಳೆ ಆಗಿದೆ. ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು 2,129 ಮಿ.ಮೀ. (+9%) ಮಳೆ ಹಾಗೂ ಮೂರು ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ ಒಟ್ಟು 4,184 ಮಿ.ಮೀ. ಅಧಿಕ (+19%) ಮಳೆ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ನಿರೀಕ್ಷೆಗಿಂತಲೂ ಶೇ.149% ಪೂರ್ವ ಮುಂಗಾರು ಮಳೆ
ಈ ವರ್ಷ ಮಳೆಗಾಲ ಅವಧಿಗೂ ಮುನ್ನವೇ ಆರಂಭವಾಗಿದೆ. ಪೂರ್ವ ಮುಂಗಾರು ಮಳೆ ಅಸಾಧಾರಣವಾಗಿ ಹೆಚ್ಚಿನ ಮಳೆ ಸುರಿಸಿತು. ಮಾರ್ಚ್ -ಮೇ ಅವಧಿಯಲ್ಲಿ ಪೂರ್ವ ಮುಂಗಾರು ನಿರೀಕ್ಷಿತ 115 ಮಿ.ಮೀ. ಗಿಂತ ಶೇ.149ರಷ್ಟು ಅಧಿಕ ಅಂಧರೆ 286 ಮಿ.ಮೀ. ಮಳೆ ಆಗಿದೆ. ಇದು ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಯಿತು. ಒಣಗಿದ ನೆಲಗಳು ಸಂತೃಪ್ತಗೊಂಡು ಹಸಿರು ಕಂಡವು. ಪೂರ್ವ ಮುಂಗಾರು ಉತ್ತಮವಾಗಿದ್ದರಿಂದಲೇ ಮುಂಗಾರು ಆರಂಭದ ಜೂನ್ ತಿಂಗಳಲ್ಲಿ ಕೆಆರ್ಎಸ್, ಕಬಿನಿ, ಹಾರಂಗಿ ಹಾಗೂ ಇತರ ಜಲಾಶಯಗಳು ಭರ್ತಿಯಾದವು. ನದಿಗಳ ಒಳಹರಿವು ಹೆಚ್ಚಾಯಿತು. ಇದು ಸಹ ನೀರಾವರಿ ಕೃಷಿಗೆ ಪೂರಕ ವಾತಾವರಣ ನಿರ್ಮಿಸಿತು.

ಉತ್ತರ ಒಳನಾಡಿನಲ್ಲಿ ಶೇ.21ಅಧಿಕ ಮಳೆ
ರಾಬಿ ಬೆಳೆಗೆ ಕೃಪೆ ತೋರುವ ಮುಂಗಾರು ಮಳೆ (ನೈಋತ್ಯ ಮಾನ್ಸೂನ್) ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯವಾಗಿತ್ತು. ಅಷ್ಟಾಗಿ ಅಬ್ಬರಿಸಲಿಲ್ಲ. ವಾಡಿಕೆ 852 ಮಿಮೀ.ನಷ್ಟು 882 ಮಿ.ಮೀ.ಮಳೆ (+4%) ಮಳೆ ದಾಖಲಾಗಿದೆ. ಹೀಗಾಗಿ ಇದು ಸಾಮಾನ್ಯ ಮಳೆ ಎಂದು ಪರಿಗಣಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಶೇಕಡಾ ಅಧಿಕ ಮಳೆ (+21%) ಆಗಿದ್ದರ ಹಿನ್ನೆಲೆ ರೈತರು ಬೆಳೆದ ಮೆಕ್ಕೆಜೋಳ, ಕಬ್ಬು, ಹೆಸರು, ಸೋಯಾ ಇನ್ನಿತರ ಬೆಳೆಗಳು ನಿರೀಕ್ಷೆಯಷ್ಟು ಫಸಲು ನೀಡಿವೆ. ರೈತರ ಮೊಗದಲ್ಲಿ ಒಂದಷ್ಟು ಮಂದಹಾಸ ಮೂಡಿತು. ಅದೇ ಹಿಂಗಾರು ಮಳೆಯು ನಿರೀಕ್ಷೆಯಷ್ಟು ಆಗದೇ ರಾಬಿ ಬೆಳೆಗಳಿಗೆ ಪೂರಕವಾಗಿರಲಿಲ್ಲ. ಆದರೆ ಸಕಾಲಕ್ಕೆ ಬಿದ್ದ ಚಳಿಯ ತಂಪು ಹಿಂಗಾರು ಬೆಳೆಗಳಿಗೆ ಆಸರೆ ಆಯಿತು. ನೀರಾವರಿ ಕೃಷಿಗೆ ನದಿಗಳ ನೀರು ಸಾಕಷ್ಟಿದೆ.
ಕರಾವಳಿಗೆ ಮಾತ್ರ ಶೇ.3 ಅಧಿಕ ಹಿಂಗಾರು ಮಳೆ ಬಿದ್ದಿದೆ. ಉಳಿದಂತೆ ಉತ್ತರ ಒಳನಾಡಿಗೆ ನಿರೀಕ್ಷೆಗಿಂತ ಶೇ. 9ರಷ್ಟು ಕಡಿಮೆ, ಮಲೆನಾಡಿನಲ್ಲಿ ಶೇ. 7ರಷ್ಟು ಕಡಿಮೆ ಮಳೆ ದಾಖಲಾಗಿದೆ. ಒಟ್ಟಾರೆ 2025ರ ಅಕ್ಟೋಬರ್-ಡಿಸೆಂಬರ್ 23 ರವರೆಗಿನ ಹಿಂಗಾರು ಮಳೆ ಕೊರತೆ ಸೃಷ್ಟಿಸಿದೆ. 181ಮಿ.ಮೀ. ಬದಲಾಗಿ ಕೇವಲ 149 ಮಿ.ಮೀ. ದಾಖಲಾಗುವ ಮೂಲಕ ಶೇ.17ರಷ್ಟು ಮಳೆ ಕೊರತೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕೃಷಿ ಮೇಲೆ ಮುಂಗಾರು ಪ್ರಭಾವ: ಇಳುವರಿ ಏರಿಕೆ
ಋತುವಿನ ಅವಧಿಗೆ ಬದಲಾಗಿ ತಿಂಗಳ ಮಳೆ ಅವಧಿಯಲ್ಲಿ ಉತ್ತಮ, ಸಾಧಾರಣ ಮಳೆ ದಾಖಲಾತಿ ಕಂಡು ಬಂದಿದೆ. ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಒಟ್ಟಾರೆ ರಾಜ್ಯದ ಹವಾಮಾನ ಸ್ಥಿತಿಗತಿ ಮತ್ತು ಮಳೆಯು ಕೃಷಿ ಕಾರ್ಯಾಚರಣೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆ ಆಗಿ ಸಮಸ್ಯೆ ಆಯಿತು. ಮಳೆಯಿಂದಾಗಿ ಖಾರಿಫ್ ಉತ್ಪಾದನೆ ಹೆಚ್ಚಾಗಿದೆ. ಆದರೆ ತೊಗರಿಗೆ ಅಧಿಕ ನೀರು ಬೇಕಾಗಿದ್ದರಿಂದ ಮುಂಗಾರು ವೇಳೆ ಕೊಂಚ ಕಳಪೆ ಉಂಟಾಗಿದ್ದು, ತೊಗರಿ ಇಳುವರಿಯಲ್ಲಿ ಶೇ. 25 ರಿಂದ 30ರಷ್ಟು ಕುಸಿತಕ್ಕೆ ಕಾರಣವಾಯಿತು.
ಅನಿಯಮಿತ ಮಳೆಗೆ ಒಳನಾಡು ಜಿಲ್ಲೆಗಳಲ್ಲಿ ಮೆಕ್ಕೆಜೋಳ, ರಾಗಿ ಮತ್ತು ದ್ವಿದಳ ಧಾನ್ಯಗಳ ನಿರೀಕ್ಷಿತ ಇಳುವರಿ ಕಂಡು ಬಂತು ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಿ ತೊಗರಿ ಹಾಗೂ ಇತರ ಧಾನ್ಯಗಳ ಕೊಯ್ಲಿಗೆ ಅನುಕೂಲವಾಯಿತು. ರಾಬಿ ಋತುವಿನ ಹೊತ್ತಿಗೆ ಸರಿಯಾಗಿ ಹಿಂಗಾರು ಮಳೆ ಬರಲಿಲ್ಲ. ಮಣ್ಣಿನಲ್ಲಿ ಉಳಿದ್ದ ತೇವಾಂಶ ಮತ್ತು ಚಳಿಗಾಲ ಕಾರಣ ಬೆಳೆಗಳಿಗೆ ತೊಂದರೆ ಆಗಲಿಲ್ಲ. ನಿರೀಕ್ಷಿತ ರಾಬಿ ಬೆಳೆ ಬೆಳೆಯಲಾಗಿದೆ. ಉತ್ತಮ ಇಳುವರಿ ನಿರೀಕ್ಷೆ ಇದೆ.
ವಾಣಿಜ್ಯ ಬೆಳೆಗಳಿಗೆ ಕಳೆತಂದ ಮುಂಗಾರು
ಮಳೆ ಪ್ರಯೋಜನ ಪಡೆದ ವಾಣಿಜ್ಯ ಬೆಳೆ ಕಬ್ಬು ಬೆಳೆಯಲ್ಲಿ ಶೇ 10 ರಿಂದ 15 ರಷ್ಟು ಇಳುವರಿ ಏರಿತು. ಇದು ಸಕ್ಕರೆ ಉತ್ಪಾದನೆಯ ಹೆಚ್ಚಳಕ್ಕೆ ಪೂರಕವಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆಗಳು ಕಾಫಿ ಬೆಳೆಗೆ ಉತ್ತಮ ವಾತಾವರಣ ನಿರ್ಮಿಸಿಕೊಟ್ಟಿವೆ. ಈ ಬಾರಿ ಉತ್ಪಾದನೆ ಶೇಕಡಾ 20 ರಷ್ಟು ಏರಿಕೆ ಆಗುವ ಸಂಭವವಿದೆ ಎಂದು ಊಹಿಸಲಾಗಿದೆ.
ಕರ್ನಾಟಕದ 2025 ರ ಹವಾಮಾನ ಪರಿಸ್ಥಿತಿಗಳು ಕೊಂಚ ಸವಾಲಿನ ಮಧ್ಯ ಕೃಷಿಗೆ ಮಾತ್ರವಲ್ಲದೇ ಅಂತರ್ಜಲ ಮರುಪೂರಣ, ನದಿ, ಕೆರೆ, ಜಲಾಶಯಗಳಿಗೆ ಜೀವ ಕಳೆ ತಂದು ಕೊಟ್ಟಿದೆ. ಕೃಷಿ ಆದಾಯ, ವ್ಯಾಪಾರ ವಹೀವಾಟು ಸುಧಾರಿಸಿದೆ.












Click it and Unblock the Notifications