ರಾಜ್ಯದಲ್ಲಿ ಇನ್ನೂ 2 ದಿನ ಮಳೆ, ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಸೆಪ್ಟೆಂಬರ್ 7 : ಕರ್ನಾಟಕದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಧಾರವಾಡ, ಹುಬ್ಬಳ್ಳಿ, ಗದಗ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಯ ಕೆಲವು ಕಡೆ ಉತ್ತಮ ಮಳೆ ಸುರಿದಿದೆ. ರಾಜ್ಯದಲ್ಲಿ ಮಳೆಯಿಂದಾಗಿ 6 ಜನರು ಮೃತಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ, ಹೊಸದುರ್ಗ, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಗಳಲ್ಲಿ ಸಾಧಾರಣ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಬುಧವಾರ ಮೂರು ತಾಸು ಮಳೆ ಸುರಿದಿದೆ. ಬೆಳಗಾವಿಯ ಬೈಲಹೊಂಗಲ, ಚಿಕ್ಕೋಡಿಯಲ್ಲಿ ಸಾಧಾರಣ ಮಳೆಯಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ ನಗರದ ಸುತ್ತ-ಮುತ್ತ ಮಧ್ಯಾಹ್ನ ಎರಡು ಗಂಟೆಗಳ ಕಾಲ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆಯಲ್ಲಿ ಮಳೆಯಾಗಿದೆ. ಚಿಕ್ಕಬಳ್ಳಾಪುರಲ್ಲಿ ಸಂಜೆ ಭಾರೀ ಮಳೆಯಾಗಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತಮ ಮಳೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.
ಸೆ.6ರ ಮಂಗಳವಾರ ಮೈಸೂರಿನಲ್ಲಿ 57, ರಾಯಚೂರಿನಲ್ಲಿ 22, ಬೆಂಗಳೂರು ನಗರದಲ್ಲಿ 30, ಬಳ್ಳಾರಿಯಲ್ಲಿ 16, ರಾಮನಗರದಲ್ಲಿ 24 ಮಿ.ಮೀ.ಮಳೆಯಾಗಿದೆ. ರಾಜ್ಯದಲ್ಲಿ ಮಳೆಗೆ ಒಟ್ಟು 6 ಜನರು ಬಲಿಯಾಗಿದ್ದಾರೆ.
ಹಾವೇರಿಯಲ್ಲಿ ಸಿಡಿಲು ಬಡಿದು ಬಸಪ್ಪ ಗೋಣೇರ (23), ಲಕ್ಷ್ಮೇಶ್ವರದಲ್ಲಿ ಪಾಂಡಪ್ಪ ಲಮಾಣಿ (33), ಧಾರವಾಡದಲ್ಲಿ ಮಲಕಪ್ಪ ಸೂರ್ಯವಂಶಿ (45) ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಕೊಪ್ಪಳದಲ್ಲಿ ಮನೆಯ ಗೋಡೆ ಕುಸಿದು ವಿರುಪಣ್ಣ ಮಜನಹಳ್ಳಿ (80) ಸಾವನ್ನಪ್ಪಿದ್ದಾರೆ. ಮೈಸೂರಿನ ಕೆ.ಆರ್.ನಗರದಲ್ಲಿ ಗೋಡೆ ಕುಸಿದು ಚೆನ್ನಮ್ಮ (52) ಮೃಪಟ್ಟಿದ್ದಾರೆ. ಎಚ್.ಡಿ.ಕೋಟೆಯಲ್ಲಿ ಗೋಡೆ ಕುಸಿದು ಸಂತೋಷ್ ಎಂಬುವವರು ಸಾವನ್ನಪ್ಪಿದ್ದಾರೆ.
| ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
| ಲಿಂಗನಮಕ್ಕಿ | 1819.00 | 1794.90.01 |
| ಸುಪಾ | 1849.92 | 1793.01 |
| ವಾರಾಹಿ | 1949.50 | 1923.62 |
| ಹಾರಂಗಿ | 2859.00 | 2857.21 |
| ಹೇಮಾವತಿ | 2922.00 | 2891.96 |
| ಕೆಆರ್ಎಸ್ | 124.80 | 101.40 |
| ಕಬಿನಿ | 2284.00 | 2277.87 |
| ಭದ್ರಾ | 2158.00 | 2134.53 |
| ತುಂಗಭದ್ರಾ | 1633.00 | 1624.80 |
| ಘಟಪ್ರಭಾ | 2175.00 | 2152.81 |
| ಮಲಪ್ರಭಾ | 2079.50 | 2054.70 |
| ಆಲಮಟ್ಟಿ | 1704.81 | 1704.81 |
| ನಾರಾಯಣಪುರ | 1615.00 | 1615.07 |












Click it and Unblock the Notifications