#ಕರ್ನಾಟಕದ್ರೋಹಿಬಿಜೆಪಿ: ಚುನಾವಣೆಗೂ ಮುನ್ನ ಶುರುವಾಯ್ತು ಕಾಂಗ್ರೆಸ್ಸಿನ ಮತ್ತೊಂದು ಅಭಿಯಾನ
ಬೆಂಗಳೂರು, ಏಪ್ರಿಲ್ 08: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಇರುವಾಗಲೇ ಆಡಳಿತರೂಢ ಬಿಜೆಪಿ ( BJP ) ವಿರುದ್ಧ ಕಾಂಗ್ರೆಸ್ಸಿನ ( Congress ) ಮತ್ತೊಂದು ಅಭಿಯಾನ ಶುರುವಾಗಿದೆ. ಹಲವು ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
'ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಬಿಜೆಪಿ. ಅಮೂಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು. KMF ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿಸಿದರು. ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು ಸರ್ವನಾಶ ಮಾಡುತ್ತಿದೆ #ಕರ್ನಾಟಕವಿರೋಧಿಬಿಜೆಪಿ' ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

'ಅಖಂಡ ಭಾರತದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿ ನಾಯಕರು ಅಖಂಡ ಕರ್ನಾಟಕಕ್ಕೆ ದಕ್ಕೆಯಾಗುತ್ತಿರುವಾಗ ಬಾಯಿ ಬಿಡದಿರುವುದೇಕೆ? ಕರ್ನಾಟಕದ ಅಸ್ಮಿತೆಯನ್ನು ನಾಶ ಮಾಡುವ ನಾಗಪುರದ ಗುಪ್ತ ಕಾರ್ಯಸೂಚಿಗೆ #ಕರ್ನಾಟಕವಿರೋಧಿಬಿಜೆಪಿ ನಾಯಕರು ಸಹಕರಿಸುತ್ತಿದ್ದಾರೆ. ಮಹಾ ಉದ್ಧಟತನಕ್ಕೆ ಕಡಿವಾಣ ಹಾಕಬೇಕಾದ ಮೋದಿ ಮೌನವಹಿಸಿದ್ದೇಕೆ?' ಎಂದು ಪ್ರಶ್ನಿಸಿದೆ.
'ಕನ್ನಡ, ಕರ್ನಾಟಕ, ಕನ್ನಡಿಗ ಈ ಮೂರೂ ವಿಷಯಗಳಲ್ಲಿ ಬಿಜೆಪಿ ಹಲವಾರು ದ್ರೋಹ ಎಸಗಿದ ಕರಾಳ ಇತಿಹಾಸವಿದೆ. ಕರ್ನಾಟಕವನ್ನ ಒಡೆಯುವುದಷ್ಟೇ ಅಲ್ಲ, ಪರ ರಾಜ್ಯಗಳಿಗೆ ಕರ್ನಾಟಕವನ್ನು ಹರಿದು ಹಂಚುವುದು ಬಿಜೆಪಿಯ ಆಂತರ್ಯದ ಅಜೆಂಡಾ. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂಬ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆಗೆ #ಕರ್ನಾಟಕದ್ರೋಹಿಬಿಜೆಪಿ ಮೌನ ವಹಿಸಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

'ಕರ್ನಾಟಕವನ್ನ ಒಡೆದಾಳುವ ಬಿಜೆಪಿಯ ಇರಾದೆ ಇಂದು ನಿನ್ನೆಯದಲ್ಲ, ಕರ್ನಾಟಕವನ್ನು ಇಬ್ಬಾಗ ಮಾಡುವ RSS ಅಜೆಂಡಾವನ್ನ ಬಿಜೆಪಿಯ ನಾಗಪುರದ ನೌಕರರು ಉಚ್ಛರಿಸುತ್ತಿದ್ದಾರೆ. ರಾಜ್ಯ ಒಡೆಯುವುದು ಬಿಜೆಪಿಯ ಅಜೆಂಡಾ ಅಲ್ಲ ಎಂದಾದರೆ ಆನಂದ್ ಸಿಂಗ್ ಹೆಳಿಕೆ ವಿರುದ್ಧ ಕ್ರಮ ಕೈಗೊಂಡಿಲ್ಲವೇಕೆ? ಹೇಳಿಕೆಯನ್ನು ಖಂಡಿಸಿಲ್ಲವೇಕೆ?' ಎಂದು ಕಾಂಗ್ರೆಸ್ ಕೇಳಿದೆ.
'ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗಿದ್ದರೂ ಕರ್ನಾಟಕಕ್ಕೆ ಸಿಗುವುದು ಮಾತ್ರ ಬಿಡಿಗಾಸು. ಕರ್ನಾಟಕದ ಅಸ್ಮಿತೆ, ಆರ್ಥಿಕತೆ ಎರಡನ್ನೂ ಮುಳುಗಿಸುವುದು ಬಿಜೆಪಿಯ ಷಡ್ಯಂತ್ರ. ಕರ್ನಾಟಕದ ಸಾಲವನ್ನು ಡಬಲ್ ಮಾಡಿದ್ದೇ ಡಬಲ್ ಇಂಜಿನ್ಗಳ ಸಾಧನೆ. 25 ಸಂಸದರನ್ನ ಪಡೆದ #ಕರ್ನಾಟಕವಿರೋಧಿಬಿಜೆಪಿ ಮಾಡಿದ್ದು ಕನ್ನಡಿಗರಿಗೆ ದ್ರೋಹ ಮಾತ್ರ' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ರಣದೀಪ್ ಸುರ್ಜೇವಾಲಾ ಟ್ವೀಟ್
ಕರ್ನಾಟಕದ 'ನಂದಿನಿ' ಅನ್ನು ಗುಜರಾತ್ನ ಅಮುಲ್ಗೆ ಮಾರಾಟ ಮಾಡುವ ಬಿಜೆಪಿಯ ಷಡ್ಯಂತ್ರ ಈಗ ಸ್ಪಷ್ಟವಾಗಿದೆ. ಅಮಿತ್ ಶಾ ಅವರು ಮೊದಲಿಗೆ ಬಹಿರಂಗವಾಗಿ ಹೇಳಿಕೆ ನೀಡಿದರು. ಇದೀಗ ಶೋಭಾ ಕರಂದ್ಲಾಜೆ ಅದನ್ನು ಬೆಂಬಲಿಸಿದ್ದಾರೆ. ನಂದಿನಿ ಇಳಿಕೆ, ಅಮುಲ್ ಗಳಿಕೆ, ಬೊಮ್ಮಾಯಿ ಸರ್ಕಾರ ಸರ್ಕಾರ 'ಮೂಕ' ಬಸವ! ನಂದಿನಿ ಉಳಿಸಿ, ಬಿಜೆಪಿ ಓಡಿಸಿ!' ಎಂದು ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ವಾಗ್ದಾಳಿ
'ಬಿಜೆಪಿ ಕರ್ನಾಟಕವನ್ನು ಒಡೆಯುತ್ತಿದೆ. ಅವರಿಗೆ ಕರ್ನಾಟಕದ ಅಸ್ಮಿತೆಯ ಬಗ್ಗೆ ಯಾವ ಕಾಳಜಿಯೂ ಇಲ್ಲ. ರಾಜ್ಯದ ಇತಿಹಾಸ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅವರ ಕೊಡುಗೆಯೇ ಇಲ್ಲ. ಹೀಗಿರುವಾಗ ಅವರಿಗೆ ಕರ್ನಾಟಕ, ಕನ್ನಡದ ವಿಚಾರವಾಗಿ ಪ್ರೀತಿ ಹುಟ್ಟಲು ಹೇಗೆ ಸಾಧ್ಯ?' ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
'ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿಗಳು 'ನನ್ನ ಸಮಾಧಿ ತೊಡಲು ಪ್ರಯತ್ನಿಸುತ್ತಿದ್ದಾರೆ' ಎಂದು ಹೇಳುತ್ತಾರೆ. ಆದರೆ ಕರ್ನಾಟಕದ ಬಗ್ಗೆ ಮಾತ್ರ ಮಾತನಾಡುವುದಿಲ್ಲ! ಅವರು ರಾಜ್ಯಕ್ಕೆ ಬಂದಾಗ ಮಹಾರಾಷ್ಟ್ರ ತಗಾದೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.











Click it and Unblock the Notifications