ಕರ್ನಾಟಕ:ಆಯುಷ್ಮಾನ್ ಆರೋಗ್ಯ ಖಾತೆ ಗುರುತಿನ ಚೀಟಿ ನೀಡಲು ಚಿಂತನೆ
ಬೆಂಗಳೂರು, ಅಕ್ಟೋಬರ್ 05: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ಮುಂದಿನ ಕೆಲವು ತಿಂಗಳುಗಳಲ್ಲಿ ರಾಜ್ಯದ ಜನರಿಗೆ 'ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ಎಬಿಎಚ್ಎ) ಡಿಜಿಟಲ್ ಗುರುತಿನ ಚೀಟಿ ನೀಡಲು ಚಿಂತನೆ ನಡೆಸಿದೆ.
ಈ ಎಬಿಎಚ್ಎ ಡಿಜಿಟಲ್ ಗುರುತಿನ ಚೀಟಿ (ಐಡಿ)ಗಳು ಶೀಘ್ರದಲ್ಲೇ ಸಾರ್ವತ್ರಿಕವಾಗಲಿದ್ದು, ಮುಂದಿನ ದಿನಗಳಲ್ಲಿ ರೋಗದ ಕಣ್ಗಾವಲು ನೀತಿಯಡಿ ಪ್ರಮುಖ ಆರೋಗ್ಯ ಕ್ಷೇತ್ರದ ಬದಲಾವಣೆಗಳಿಗೆ ಕಾರಣವಾಗಬಹುದು ಇಲಾಖೆ ವಿಶ್ವಾಸ ಹೊಂದಿದೆ.
ಕರ್ನಾಟಕವು ಈವರೆಗೆ 89.4 ಲಕ್ಷ ನಾಗರಿಕರಿಗೆ ನೀಡಲು ಎಬಿಎಚ್ಎ ಡಿಜಿಟಲ್ ಗುರುತಿನ ಚೀಟಿ ಸಿದ್ಧಪಡಿಸಿದೆ. ಈ ಐಡಿಗಳನ್ನು ಹೊಂದಿರುವವರು ವೈಯಕ್ತಿಕ ಆರೋಗ್ಯ ದಾಖಲೆ (ಪಿಎಚ್ಆರ್)ಗಳನ್ನು ಆನ್ಲೈನ್ನಲ್ಲಿ ರಚಿಸಬಹುದಾಗಿದೆ.
ಈವರೆಗೆ ಐಡಿ ಹೊಂದಿರುವವರ ಪೈಕಿ ಶೇ.2 ರಷ್ಟು ಅಂದರೆ 1.96 ಲಕ್ಷ ಜನರ ಪಿಎಚ್ಆರ್ಗಳನ್ನು ಆನ್ಲೈನ್ನಲ್ಲೆ ರಚಿಸಲಾಗಿದೆ. ಇದರಿಂದ ವ್ಯಕ್ತಿಯ ಆರೋಗ್ಯ ಬಗೆಗಿನ ದಾಖಲಾತಿಗಳನ್ನು ಆನ್ಲೈನ್ನಲ್ಲೆ ಆರೋಗ್ಯ ತಜ್ಞರು, ವೈದ್ಯರು ವೀಕ್ಷಿಸಬಹುದಾಗಿದೆ. ರೋಗಿ ಜತೆಗೆ ಸಮಾಲೋಚನೆಗಳು ಮತ್ತು ಟೆಲಿಮೆಡಿಸಿನ್ ಈ ಚಿಂತನೆ ಮತ್ತಷ್ಟು ಸುಲಭವಾಗಿಸುತ್ತದೆ. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆಧಾರ್ ಸಂಖ್ಯೆಯಿಂದ ಐಡಿ ರಚನೆ
ಈ ಡಿಜಿಟಲ್ ಐಡಿ ಕಾರ್ಡ್ಗಳ ರಚನೆಯು ಮೂರು ಕಾರ್ಯ ವಿಧಾನವನ್ನು ಹೊಂದಿದೆ. ವ್ಯಕ್ತಿ ಆನ್ಲೈನ್ ಮೂಲಕ ವೈಯಕ್ತಿಕವಾಗಿ ಐಡಿಗಳನ್ನು ಪಡೆದುಕೊಳ್ಳಬಹುದು. ಆರೋಗ್ಯ ಇಲಾಖೆಯು ತನ್ನ ವಿಮಾ ಕಾರ್ಡ್ ವಿತರಣಾ ಅಭಿಯಾನದ ಸಮಯದಲ್ಲಿ ಐಡಿಯನ್ನು ನೀಡಬಹುದು. ಅಲ್ಲದೇ ಸರ್ಕಾರಿ ಆಸ್ಪತ್ರೆಗಳು ತಮ್ಮ ಕೆಲವು ರೋಗಿಗಳಿಗೆ ಅಗತ್ಯಕ್ಕನುಗುಣವಾಗಿ ಈ ಐಡಿಗಳನ್ನು ರಚಿಸಬಹುದು. ಕೇವಲ ಆಧಾರ ಸಂಖ್ಯೆಯಿಂದ ಈ ಐಡಿಗಳನ್ನು ರಚಿಸಬಹುದಾಗಿದೆ. ವ್ಯಕ್ತಿಗಳ ಆರೋಗ್ಯ ದಾಖಲೆ (ಡೇಟಾ) ಯನ್ನು ಆರೋಗ್ಯ ವೃತ್ತಿಪರರು, ವೈದ್ಯರು ನೋಡಲು ಇಲ್ಲವೇ ಪರಿಶೀಲಿಸಲು ನೋಂದಣಿ ಕಡ್ಡಾಯಗೊಳಿಸಲಾಗಿದೆ.

ಡೇಟಾ ನೋಡಲು ನೋಂದಣಿ ಅಗತ್ಯ
ಈ ನೋಂದಣಿಯನ್ನು ಕೇವಲ ಆರೋಗ್ಯ ವೃತ್ತಿಪರರು, ವೈದ್ಯರು ಮತ್ತು ದಾದಿಯರಿಗೆ ಮಾತ್ರ ಮುಕ್ತಗೊಳಿಸಲಾಗಿದ್ದು, ಇತರರ ಆರೋಗ್ಯ ದಾಖಲೆಗಳನ್ನು ಬೇರೆಯವರೆಲ್ಲೂ ನೋಡಲು ಅವಕಾಶಕ್ಕೆ ನಿರ್ಬಂಧವಿದೆ. ಕರ್ನಾಟಕದಲ್ಲಿ ಒಟ್ಟಾರೆಯಾಗಿ ಸುಮಾರು ಐದು ಲಕ್ಷ ವೈದ್ಯರು, ನರ್ಸ್ ಇದ್ದಾರೆ. ಆದರೆ ಇದುವರೆಗೆ ಕೇವಲ 25,000 ಮಂದಿ ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಅವರು ನೋಂದಾಯಿಸಿದ ನಂತರವೇ ಫಾರ್ಮಾಸಿಸ್ಟ್ಗಳು, ಲ್ಯಾಬ್ ತಂತ್ರಜ್ಞರಂತಹ ಇತರರಿಗೆ ರೋಗಿ ದಾಖಲಾತಿ ತೆರೆದುಕೊಳ್ಳುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ವೈದ್ಯರು ಆರೋಗ್ಯ ಮಾಹಿತಿ ಹಂಚುವುದು ತಪ್ಪಬೇಕು
ಸಾರ್ವಜನಿಕ ಆರೋಗ್ಯ ಕಾರ್ಯಕರ್ತೆ ಡಾ ಸಿಲ್ವಿಯಾ ಕರ್ಪಗಮ್ ಅವರು ರೋಗಿಯ ಡಿಜಿಟಲ್ ಡಾಟಾ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಐಡಿ ಗಳಿಂದಾಗಿ ರಾಜ್ಯ ಸರ್ಕಾರವು ಖಾಸಗಿ ಆರೋಗ್ಯ ಕ್ಷೇತ್ರದ ಮೇಲೆ ಯಾವುದೇ ನಿಯಂತ್ರಣ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೇ ವೈದ್ಯರು ರೋಗಿಯ ಆರೋಗ್ಯ ಮಾಹಿತಿ (ಡೇಟಾ) ಹಂಚಿಕೊಳ್ಳುವುದನ್ನು ಬಿಡಬೇಕು. ಇಲ್ಲವಾದರೆ ಅಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಸಿದ್ಧವಿದಿಯೇ? ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಕರ್ಸಾರದ ಕರಡು ಆರೋಗ್ಯ ಡೇಟಾ ನಿರ್ವಹಣಾ ನೀತಿ-2022 ಯಡಿ ಖಾಸಗಿ ಕಂಪನಿಗಳೊಂದಿಗೆ ಆರೋಗ್ಯ ಡೇಟಾವನ್ನು ಹಂಚಿಕೊಳ್ಳುವ, ಮಾಹಿತಿ ಬಳಕೆಯ ನಿರ್ಬಂಧ ಹಾಗೂ ಇನ್ನಿತರ ಅಂಶಗಳಲ್ಲಿ ಇದು ಹೆಚ್ಚು ಸುರಕ್ಷತೆ ಹೊಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಮಾ ಕಂಪನಿಯು ವ್ಯಕ್ತಿಗಳ ಪ್ರೊಫೈಲ್ ಸಿದ್ಧಪಡಿಸಲು, ಪ್ರೀಮಿಯಂ ಹೆಚ್ಚಿಸಲು ಡೇಟಾ ಬಳಸಬಹುದು. ಇಲ್ಲವೇ ಫಾರ್ಮಾ ಕಂಪನಿಗಳು ವ್ಯಕ್ತಿಯ ಆರೋಗ್ಯ ಡೇಟಾವನ್ನು ಮಾರ್ಕೆಟಿಂಗ್ ರೂಪದಲ್ಲೂ ಬಹಳಸುವ ಸಾಧ್ಯತೆ ಹೆಚ್ಚಿದೆ.

ನಾವು ಡೇಟಾ ಸಂರಕ್ಷಣಾ ಕಾನೂನು ಹೊಂದಿಲ್ಲ
ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ಶ್ರೀನಿವಾಸ್ ಎಂಬುವವರು, ಆಧಾರ್ ಮತ್ತು ಗೌಪ್ಯತೆಯ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಪ್ರತ್ಯೇಕ ಕಾನೂನು ಇಲ್ಲದೆ ರಾಷ್ಟ್ರೀಯ ಆರೋಗ್ಯ ಗುರುತಿನ ಚೀಟಿಗಳನ್ನು ರಚಿಸಲು ಸಾಧ್ಯವಿಲ್ಲ. ಇದು ಸುರಕ್ಷಿತವಲ್ಲ ಎಂದಾದರೆ ಎಬಿಎಚ್ಎ ಅನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಅವಕಾಶ ಇದೆ. ಮುಖ್ಯವಾಗಿ ಭಾರತವು ವ್ಯಕ್ತಿಯ ಡೇಟಾವನ್ನು ದುರುಪಯೋಗ ಆಗದಂತೆ ಖಚಿತಪಡಿಸಿಕೊಳ್ಳುವ ಡೇಟಾ ಸಂರಕ್ಷಣಾ ಕಾನೂನನ್ನು ಹೊಂದಿಲ್ಲ ಎಂದು ಅವರು ವಿವರಿಸಿದರು.












Click it and Unblock the Notifications