ಬೇಳೆಕಾಳು ಖರೀದಿಗೆ ಟೆಂಡರ್ ಆಹ್ವಾನಿಸಿದ ರಾಜ್ಯ ಸರ್ಕಾರ
ಕಲಬುರಗಿ,ಮೇ 20: ದಿನೇ ದಿನೇ ಏರುತ್ತಿರುವ ಬೇಳೆ ಕಾಳು ದರಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು ಗೊತ್ತೆ ಇದೆ.
ರೈತರಿಂದ ಖರೀದಿಸಿರುವ ತೊಗರಿ ಭಾರತ ಆಹಾರ ನಿಗಮದಲ್ಲಿ ದಾಸ್ತಾನಿದ್ದು ಇದರ ಖರೀದಿಗೆ ಟೆಂಡರ್ ಕರೆಯಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.[ಗಮನಿಸಿ, 120 ರು.ಗಿಂತ ಹೆಚ್ಚಿನ ದರಕ್ಕೆ ಬೇಳೆಕಾಳು ಮಾರುವಂತಿಲ್ಲ]
ಕಲಬುರಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಮತ್ತಿತರ ದ್ವಿದಳ ಧಾನ್ಯಗಳ ಬೆಲೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕೈಗೊಳ್ಳಲು ಚಿಂತನೆ ನಡೆಸಿದೆ ಹಾಗೂ ತೊಗರಿಯನ್ನು ಮಿಲ್ಲಿಂಗ್ ಮಾಡುವ ಬಗ್ಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಕಳೆದ ವರ್ಷ (2015-16)ರಲ್ಲಿ 3ಲಕ್ಷ ಮೆಟ್ರಿಕ್ ಟನ್ ತೊಗರಿಯ ಉತ್ಪಾದನೆಯಾಗಿದ್ದು, ಇದು ಈ ಹಿಂದಿನ ವರ್ಷಗಳಿಗಿಂತ ಶೇ. 40ರಷ್ಟು ಕಡಿಮೆಯಾಗಿದೆ. ಆದರೂ ತೊಗರಿ ಉತ್ಪಾದನೆಯಲ್ಲಿ ಕಲಬುರಗಿ ಜಿಲ್ಲೆಯು ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಎಂದರು. [ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಆಹಾರ ಇಲಾಖೆ ಉಪನಿರ್ದೇಶಕ ಎ.ಟಿ. ಜಯಪ್ಪ, ಸಹಾಯಕ ನಿರ್ದೇಶಕ ವಿಜಯಾನಂದ ಡಿಗ್ಗಿಕರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಾಶ ಅಯ್ಯಾಳಕರ್, ಸೆಂಟ್ರಲ್ ವೇರ್ಹೌಸ್ ಮ್ಯಾನೇಜರ್ , ತೊಗರಿ ಅಭಿವೃದ್ಧಿ ಮಂಡಳಿಯ ಆಡಳಿತಾಧಿಕಾರಿ ಮಲ್ಲಪ್ಪ, ಎಚ್ ಕೆ.ಸಿ.ಸಿ.ಐ. ಪದಾಧಿಕಾರಿ ಭೀಮಾಶಂಕರ ಪಾಟೀಲ್ ಹಾಜರಿದ್ದರು.