ಹಿಂದೂಗಳ ದಮನಕ್ಕೆ ರಾಜ್ಯ ಸರಕಾರ ಪಿತೂರಿ: ಕಾಗೇರಿ
ಕಾರವಾರ, ಅಕ್ಟೋಬರ್ 11: ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸುತ್ತಿರುವ ಹಿಂದೂಗಳ ದಮನಕ್ಕೆ ರಾಜ್ಯ ಸರಕಾರ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ಹಿಂದೂ ಮುಖಂಡರ ಮೇಲೆ ಸುಖಾ ಸುಮ್ಮನೆ 395 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ, ಜಾಮೀನು ದೊರಕದಂತೆ ಮಾಡಿದೆ ಎಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಭಟ್ಕಳದ ಪುರಸಭೆ ಗಲಭೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರಾಮಚಂದ್ರ ನಾಯ್ಕರ ಮನೆಗೆ ಭೇಟಿ ನೀಡಿ, ಕುಟುಂಬದವರನ್ನು ಸಂತೈಸಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಂಗಡಿ ತೆರವು ಪ್ರಕರಣ ನಂತರ ನಡೆದ ಘಟನೆಗಳಿಗೆ ಪುರಸಭೆಯೇ ನೇರ ಕಾರಣ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದಿನ ಪರಿಸ್ಥಿತಿ ಉದ್ಭವವಾಗಿದೆ. ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಇದನ್ನು ಸಕಾಲಕ್ಕೆ ಪರಿಹರಿಸಲು ಪ್ರಯತ್ನಿಸಬೇಕಿತ್ತು ಎಂದು ಕಾಗೇರಿ ತಿಳಿಸಿದರು.
ಗ್ರಾಮೀಣ ಭಾಗದ ರಸ್ತೆಗಳು ಹೊಂಡಗಳಿಂದ ಕೂಡಿದ್ದು ಸಂಚರಿಸಲು ಸಾದ್ಯವಾಗುತ್ತಿಲ್ಲ. ಪಿಡಬ್ಲ್ಯೂಡಿ ಬಳಿ ಹಣ ಇದ್ದರೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ. ಅಕ್ಟೋಬರ್ 2ರಂದು ಅನುಷ್ಠಾನಕ್ಕೆ ತಂದ ಮಾತೃಪೂರ್ಣ ಯೋಜನೆಯಂತೂ ಬಾಣಂತಿಯರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ಪೌಷ್ಟಿಕ ಆಹಾರ ಸೇವಿಸಲು ಗರ್ಬಿಣಿಯರು, ಬಾಣಂತಿಯರು ಮೈಲು ದೂರವಿರುವ ಅಂಗನವಾಡಿಗೆ ತೆರಳುವುದು ಕಷ್ಟಕರ ಎಂದು ಕಾಗೇರಿ ಹೇಳಿದರು.












Click it and Unblock the Notifications