ತಗ್ಗಿದ ಮಳೆ ಅಬ್ಬರ, ಶುರುವಾಯ್ತು ಹಾನಿ ಲೆಕ್ಕಾಚಾರ
ಬೆಂಗಳೂರು, ಜೂ. 29 : ರಾಜ್ಯಾದ್ಯಂತ ಅಬ್ಬರಿಸುತ್ತಿದ್ದ ವರುಣ ಕೊಂಚ ತಣ್ಣಗಾಗಿದ್ದಾನೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಇಳಿಮುಖವಾಗಿದೆ.
ಭಾರೀ ಮಳೆ ಪಡೆಯುತ್ತಿದ್ದ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು ಹಾನಿ ಲೆಕ್ಕ ಹಾಕಲಾಗುತ್ತಿದೆ. ಆಗುಂಬೆ, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 6 ಸೇಂ ಮಿ ಮಳೆಯಾಗಿದೆ.
ಆದರೆ ಉಳ್ಳಾಲ, ತಣ್ಣೀರುಬಾವಿ, ಪಡುಬಿದ್ರಿ, ಮರವಂತೆ ಭಾಗದಲ್ಲಿ ಕಡಲ್ಕೊರೆತ ಸಮಸ್ಯೆ ಸ್ವಲ್ಪಮಟ್ಟಿಗೆ ಮುಂದುವರಿದಿದೆ. ಕೃಷಿ ಚಟುವಟಿಕೆಗೆ ವೇಗ ದೊರೆತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಮಳೆ ಪ್ರಮಾಣ ಕಡಿಮೆಯಾಗಿದೆ.[ಮಲೆನಾಡ ಮಳೆ ಚಿತ್ರಗಳು]
ಮುಂದಿನ 24 ಗಂಟೆ ಅವಧಿಯಲ್ಲಿ ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಸಾಧಾರಣ ಮಳೆ ಬೀಳಲಿದೆ. ದಕ್ಷಿಣ ಒಳನಾಡಿನ ಕೆಲ ಭಾಗಗಳು ಮಳೆ ಪಡೆದುಕೊಳ್ಳಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜಲಾಶಯಗಳ ಮಟ್ಟ ಏರಿಕೆ
ಭದ್ರಾ, ಆಲಮಟ್ಟಿ ಮತ್ತು ಕಬನಿ ಜಲಾಶಯಗಳು ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಮುಂಜಾಗೃತೆ ವಹಿಸಲು ತಿಳಿಸಲಾಗಿದೆ. ಭರ್ತಿಯಾಗಿದ್ದ ಕಬಿನಿಗೆ ಸಿಎಂ ಸಿದ್ದರಾಮಯ್ಯ ಭಾನುವಾರ ಬಾಗಿನ ಅರ್ಪಿಸಿದ್ದರು.

ಬೆಂಗಳೂರಲ್ಲಿ ಮಳೆ
ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಮಳೆಯಾಗಿರಲಿಲ್ಲ. ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಮಳೆಯಾಗಿದೆ. ಬೆಳಗ್ಗೆ ಶುಭ್ರ ಆಕಾಶವಿದ್ದರೂ ಮಧ್ಯಾಹ್ನ ಏಕಾಏಕಿ ಮಳೆ ಸುರಿದಿದೆ. ಮೋಡ ಕವಿದ ವಾತಾವರಣ ವಿದ್ದು ಸಂಜೆ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ.

ಮಲೆನಾಡು ಕತ್ತಲಲ್ಲಿ
ಭಾರೀ ಮಳೆಗೆ ಮಲೆನಾಡಿನ ಅನೇಕ ಭಾಗಗಳು ವಿದ್ಯುತ್ ಕೊರತೆಯಿಂದ ಬಳಲುತ್ತಿವೆ. ಗಾಳಿ ಮಳೆಗೆ ಮರಗಳು ಮುರಿದು ಬಿದ್ದಿದ್ದು ಅವುಗಳನ್ನುತೆರವು ಮಾಡಲಾಗುತ್ತಿದೆ. ಶಿರಸಿ, ಕೊಪ್ಪ, ತರೀಕೆರೆ, ತೀರ್ಥಹಳ್ಳಿ, ಸಿದ್ದಾಪುರ, ಸಾಗರ ಭಾಗದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೈ ಕೊಟ್ಟು ವಾರಗಳೇ ಉರುಳಿದೆ.

ಕೃಷಿ ಕಾರ್ಯ ಚುರುಕು
ಮುಂಗಾರು ಮಳೆ ಬಿರುಸಾದ್ದರಿಂದ ರಾಜ್ಯಾದ್ಯಂತ ಕೃಷಿ ಕೆಲಸಕ್ಕೆ ವೇಗ ದೊರೆತಿದೆ. ಈಗ ಸಾಕಷ್ಟು ಮಳೆಯಾಗಿದೆ. ಇನ್ನು ಹದ ಮಳೆ ಬಿದ್ದರೆ ಸಾಕು. ಉಳುಮೆ ಮಾಡಲು ಮತ್ತು ಔಷಧಿ ಸಿಂಪಡಣೆಗೆ ಮಳೆ ಅವಕಾಶ ನೀಡಬೇಕು ಎಂದು ಶಿರಸಿ ರೈತ ಗಣಪತಿ ಹೇಳುತ್ತಾರೆ.












Click it and Unblock the Notifications