KRSನಿಂದ ತಮಿಳುನಾಡಿಗೆ ಹರಿದ ಕಾವೇರಿ, ರೈತರ ಆಕ್ರೋಶ
ಮೈಸೂರು, ಜುಲೈ 15: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ಪೂರ್ವನಿಗದಿಯಂತೆ ತಮಿಳುನಾಡಿಗೆ ಜುಲೈ ತಿಂಗಳ ಕಾವೇರಿ ನದಿ ನೀರು ಪಾಲನ್ನು ಕರ್ನಾಟಕ ನೀಡುತ್ತಿದೆ. ಕೃಷ್ಣರಾಜ ಸಾಗರದಿಂದ ಕಾವೇರಿ ಹರಿದು ಮೆಟ್ಟೂರು ಅಣೆಕಟ್ಟಿಗೆ ಸಾಗಿದೆ.
ಆದರೆ, ಕೆಆರ್ ಎಸ್ ಅಣೆಕಟ್ಟು ಭರ್ತಿಗೂ ಮುನ್ನವೇ ತಮಿಳುನಾಡಿಗೆ ನೀರು ಹರಿಸಿರುವುದನ್ನು ಮೈಸೂರು, ಮಂಡ್ಯ ಭಾಗದ ರೈತರು ಖಂಡಿಸಿದ್ದಾರೆ.
ಬೆಳೆಗೆ ನೀರು ಹರಿಸಲು ಒತ್ತಾಯಿಸಿದ್ರು ನೀರು ಹರಿಸದ ಸರ್ಕಾರ, ತಮಿಳುನಾಡಿನ ರೈತರ ಕುರುವೈ(ಅಲ್ಪಾವಧಿ ಬೆಳೆ)ಗೆ ನೀರು ಬಿಟ್ಟಿರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದಲ್ಲದೆ ಸಾಂಬಾ ಬೆಳೆಗಾಗಿ ಚಟುವಟಿಕೆ ಆರಂಭವಾಗಿದ್ದು, ತನ್ನ ಪಾಲಿನ 32 ಟಿಎಂಸಿ ಅಡಿ ನೀರು ಹರಿಸುವಂತೆ ಕರ್ನಾಟಕಕ್ಕೆ ತಮಿಳುನಾಡು ಬೇಡಿಕೆ ಇಟ್ಟಿದೆ.
ಈ ನಡುವೆ 10 ದಿನಗಳ ಕಾಲ 3,581 ಕ್ಯೂಸೆಕ್ ನೀರು ಹರಿಸುವ ಮೂಲಕ ಜುಲೈ ತಿಂಗಳ ಲೆಕ್ಕಾ ಚುಕ್ತಾಗೆ ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದೆ. 104ಅಡಿ ದಾಟಿರುವ ಕಾರಣ ಡ್ಯಾಂನ 80+ಗೇಟ್ ಗಳ ಮೂಲಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಕಾವೇರಿ ನೀರು ಹರಿಸಬೇಕು?
ಕಾವೇರಿ ನದಿ ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರತಿ ತಿಂಗಳು ಇಂತಿಷ್ಟು ನೀರು ಹರಿಸಬೇಕು ಎಂದು ನಿಗದಿಯಾಗಿದೆ. ಅದರಂತೆ ಜೂನ್ ತಿಂಗಳಿನಲ್ಲಿ 9.19 ಟಿಎಂಸಿ ಹಾಗೂ ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾಗಿದೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸಭೆಯಲ್ಲಿ ತಮಿಳುನಾಡಿನಿಂದ ಬಂದ ಬೇಡಿಕೆ ಮಾತ್ರ ಇದಾಗಿದೆ. ಕೇರಳ, ಪುದುಚೇರಿ ರಾಜ್ಯಗಳಿಂದ ಯಾವುದೇ ಬೇಡಿಕೆ ಬಂದಿಲ್ಲ. ನೀರು ಹಂಚಿಕೆ ಸಂಬಂಧ ಪುದುಚೇರಿ ಹಾಗೂ ತಮಿಳುನಾಡಿನ ನಡುವೆ ಆಗಿರುವ ಒಪ್ಪಂದ ಮುಂದುವರೆಯಲಿದೆ ಎಂದು ಸಭೆಯ ನಂತರ ರಾಜೇಂದ್ರಕುಮಾರ್ ಜೈನ್ ಹೇಳಿದರು.

ತಮಿಳುನಾಡಿನ ಮೆಟ್ಟೂರು ಡ್ಯಾಂ ಭರ್ತಿಯಾಗಿದೆ
ತಮಿಳುನಾಡಿನ ಮೆಟ್ಟೂರು ಡ್ಯಾಂ ಭರ್ತಿಯಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಜಲಾಶಯದಿಂದ 3 ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳಿಗೆ ಬಿಡುಗಡೆ ಮಾಡಿದ್ದಾರೆ. 2011ರ ಬಳಿಕ ಮೊದಲ ಬಾರಿಗೆ ನಾಲೆಗಳಿಗೆ ನೀರು ಹರಿಸಲಾಗಿದೆ. 10 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.
ಮೆಟ್ಟೂರು ಡ್ಯಾಂನಿಂದ ನಾಲೆಗಳಿಗೆ ನೀರನ್ನು ಬಿಟ್ಟರೆ ನಾಗಪಟ್ಟಿಣಂ, ತಂಜಾವೂರು, ಪುದುಕೋಟೈ ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಜಲಾಶಯದ ಕೆಳಭಾಗದ ಸುಮಾರು 5 ಲಕ್ಷ ಎಕರೆ ಭೂಮಿಯಲ್ಲಿ ರೈತರು ಕುರುವೈ, ಸಾಂಬಾ ಬೆಳೆಯನ್ನು ಬೆಳೆಯುತ್ತಾರೆ.

ಕಾವೇರಿಕೊಳ್ಳದ ಜಲಾಶಯಗಳ ನೀರಿನ ಮಟ್ಟ (ಜುಲೈ 15)
ಹಾರಂಗಿ: 2851.24 (ಪೂರ್ಣ ಮಟ್ಟ 2859ಅಡಿ)
ಹೇಮಾವತಿ: 2891.45 (2922.0)
ಕೃಷ್ಣರಾಜ ಸಾಗರ: 104.53 (124.80 ಅಡಿ) , ಒಳ ಹರಿವು: 5,122 ಕ್ಯೂಸೆಕ್ಸ್, ಹೊರ ಹರಿವು: 3364
ಕಬಿನಿ: 2270.77 (2284.0)
ಒಳ ಹರಿವು ಬರದೇ ಇದ್ದಲ್ಲಿ ನೀರು ಹರಿಸುವ ಅಗತ್ಯವಿಲ್ಲ.

ಸುಪ್ರೀಂಕೋರ್ಟಿನ ಅಂತಿಮ ತೀರ್ಪೇನು?
ಕರ್ನಾಟಕದಿಂದ ತಮಿಳುನಾಡಿಗೆ ವಾರ್ಷಿಕವಾಗಿ 177 ಟಿಎಂಸಿ ಅಡಿ ಕಾವೇರಿ ಬಿಡಬೇಕು, ಆದರೆ, ಅಗತ್ಯಕ್ಕೆ ತಕ್ಕಂತೆ ಕರ್ನಾಟಕ ರಾಜ್ಯವು ತನ್ನ ನೀರಾವರಿ ಸಂಪತ್ತನ್ನು ವಿಸ್ತರಿಸಿಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಅಣೆಕಟ್ಟು ನಿರ್ಮಾಣದ ಕರ್ನಾಟಕದ ಪ್ರಸ್ತಾವನೆಗೆ ಬಲ ಸಿಕ್ಕಿದೆ.ಆದರೆ, ಪ್ರಸ್ತಾವಿತ ಮೇಕೇದಾಟು ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ಸರ್ಕಾರ ಪತ್ರ ಬರೆದಿದೆ. ಒಟ್ಟಾರೆ, ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪಿನಂತೆ ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ಇದರಲ್ಲಿ 4.75 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಬಹುದು.












Click it and Unblock the Notifications