ವರ್ಷ ಪೂರ್ತಿ ಕೊಡಬೇಕಾದ ಕಾವೇರಿ ನೀರು 3 ತಿಂಗಳಿನಲ್ಲಿ ಹರಿದಿದೆ!
Recommended Video

ಬೆಂಗಳೂರು, ಆಗಸ್ಟ್ 16 : ಕರ್ನಾಟಕ ತಮಿಳುನಾಡಿಗೆ ಸಾಮಾನ್ಯ ಮಳೆ ವರ್ಷದಲ್ಲಿ 177.25 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ, ಮೂರು ತಿಂಗಳಿನಲ್ಲಿ ಕರ್ನಾಟಕದಿಂದ 187.30 ಟಿಎಂಸಿ ಅಡಿ ನೀರು ಹರಿದು ಹೋಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ಭರ್ತಿ ಯಾಗಿವೆ. ಮಂಡ್ಯದ ಕೆಆರ್ಎಸ್ನಿಂದ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿದೆ.
ಆ.13ರ ಸೋಮವಾರದ ತನಕ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 187.30 ಟಿಎಂಸಿ ಅಡಿ ನೀರು ಹರಿದುಹೋಗಿರುವ ಬಗ್ಗೆ ದಾಖಲೆ ಇದೆ. ಇನ್ನೂ ಒಂದು ವಾರಗಳ ಕಾಲ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗುವ ಸಾಧ್ಯತೆ ಇದೆ.

ಸಾಮಾನ್ಯ ಜಲವರ್ಷದಲ್ಲಿ ಕರ್ನಾಟಕ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರನ್ನು ಹರಿಸಬೇಕಿದೆ. ಆದರೆ, ಜೂನ್, ಜುಲೈ ಮತಮ್ತು ಆಗಸ್ಟ್ 3 ತಿಂಗಳಿನಲ್ಲಿಯೇ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗಿದೆ.
ಜೂನ್ನಿಂದ ಆಗಸ್ಟ್ 13ರ ತನಕ ಕರ್ನಾಟಕ ಹರಿಸಬೇಕಾದ ನೀರು 59.70 ಟಿಎಂಸಿ ಅಡಿ. ಆದರೆ, ಇದಕ್ಕಿಂತ ಮೂರು ಪಟ್ಟು ನೀರು ಹೆಚ್ಚಿಗೆ ತಮಿಳುನಾಡಿಗೆ ಹರಿದು ಹೋಗಿದೆ. ಆದ್ದರಿಂದ, ಈ ವರ್ಷ ಇನ್ನೂ ನೀರು ಹರಿಸಬೇಕಾಗಿದೆಯೇ? ಎಂಬುದು ತಿಳಿದಿಲ್ಲ.
'ಒಂದು ತಿಂಗಳು ಹೆಚ್ಚು ನೀರು ಹರಿಸಿದರೆ ಅದನ್ನು ನಂತರದ ತಿಂಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ನಮ್ಮ ವಾದ. ಈ ವರ್ಷ ತಮಿಳುನಾಡಿಗೆ ತಿಂಗಳುವಾರು ನಿಗದಿಪಡಿಸಿದ ನೀರು ಕೊಡುವ ಅಗತ್ಯ ಬರುವುದಿಲ್ಲ' ಎಂದು ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದ್ದಾರೆ.












Click it and Unblock the Notifications