ಭಾರೀ ಮಳೆಗೆ ಕರ್ನಾಟಕದ ಮಲೆನಾಡು, ಕರಾವಳಿ ತತ್ತರ
ಬೆಂಗಳೂರು, ಜೂ. 23: ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ವಿದ್ಯುತ್ ಮಾಯವಾಗಿದ್ದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಉಳಿದಂತೆ ದಕ್ಷಿಣ ಒಳನಾಡು ಭಾಗಗಳಾದ ಬೆಂಗಳೂರು, ಮೈಸೂರು, ಚಾಮರಾಜನಗರದಲ್ಲಿ ಸಾಧಾರಣ ಮಳೆ ಬಿದ್ದಿದೆ. ಉತ್ತರ ಒಳನಾಡಿನ ಬೆಳಗಾವಿ, ಹುಬ್ಬಳ್ಳಿ ಧಾರವಾಡದಲ್ಲೂ ತುಂತುರು ಮಳೆಯಾಗಿದ್ದು ಕೃಷಿ ಚಟುವಟಿಕೆಗೆ ವೇಗ ಸಿಕ್ಕಿದೆ.[ಮುಂಗಾರಿನ ಆರ್ಭಟದ ಚಿತ್ರಗಳು]
ನದಿಗಳುನಿರೀಕ್ಷೆಯ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮನೆಗಳು ಕುಸಿದಿವೆ. ಮಳೆ ಪರಿಣಾಮ ಸಾರಿಗೆ ಸಂಪರ್ಕಗಳು ಕಡಿತಗೊಂಡಿದೆ. ಕೃಷಿ ಜಮೀನು, ರಸ್ತೆ ಜಲಾವೃತಗೊಂಡಿದೆ.
ಜಲಾಶಯ ನೀರಿನ ಮಟ್ಟ
* ಆಲಮಟ್ಟಿ 507.10 (519.60 ಮೀ)
* ಲಿಂಗನಮಕ್ಕಿ 1,755.55 (1,819 ಅಡಿ)
* ಭದ್ರಾ 139.10 (186 ಅಡಿ)
* ತುಂಗಭದ್ರಾ 1585.27 (1633 ಅಡಿ)
* ಕೆಆರ್ ಎಸ್ 88.06 (124.80 ಅಡಿ)
* ಹಾರಂಗಿ 2816.35 (2859 ಅಡಿ)
* ಹೇಮಾವತಿ 2880 (2992 ಅಡಿ)
* ಕಬಿನಿ 2269.80 (2284 ಅಡಿ)
* ಘಟಪ್ರಭಾ 2080.38 (2175 ಅಡಿ)
* ಮಲಪ್ರಭಾ 2039.37 (2079.50 ಅಡಿ)

ಹೊಸನಗರದಲ್ಲಿ ಅತಿಹೆಚ್ಚು
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 30 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಚಿಕ್ಕಮಗಳೂರಿನ ಕೊಟ್ಟಿಗೆಹಾರ ದಲ್ಲಿ 23, ಕಮ್ಮರಡಿ 14, ಕೊಡಗಿನ ಬಾಗಮಂಡಲ17, ಶಿವಮೊಗ್ಗ ತಾಳಗುಪ್ಪದಲ್ಲಿ13 ಸೆಂ.ಮೀ. ಮಳೆಯಾಗಿದೆ.

ಜಲಾಶಯಗಳ ಒಳಹರಿವು ಹೆಚ್ಚಳ
ರಾಜ್ಯಾದ್ಯಂತ ಮಳೆ ಬೀಳುತ್ತಿರುವ ಪರಿಣಾಮ ಜಲಾಶಯಗಳ ಒಳಹರಿವಿನಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಲಿಂಗನಮಕ್ಕಿ, ಆಲಮಟ್ಟಿ, ಕೆಆರ್ ಎಸ್, ಭದ್ರಾ, ತುಂಗಭದ್ರಾ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಮಲೆನಾಡಲ್ಲಿ ನಿಂತಿಲ್ಲ ವರುಣನ ಆರ್ಭಟ
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಶಿರಸಿ, ಸಿದ್ದಾಪುರ, ಮೂಡಿಗೆರೆ, ಕಳಸ, ಬಾಳೆಹೊನ್ನೂರು, ಹೊಸನಗರ, ಸಾಗರ, ಸೊರಬ, ಮುಂಡಗೋಡ, ಹಳಿಯಾಳ, ಯಲ್ಲಾಪುರ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಹವಾಮಾನ ಮೂನ್ಸೂಚನೆ
ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪಶ್ವಿಮ ಘಟ್ಟ ಪ್ರದೇಶದಲ್ಲೂ ವ್ಯಾಪಕ ಮಳೆ ಮುಂದುವರಿಯಲಿದೆ..

ಖಾನಾಪುರ ಸೇತುವೆ ಜಲಾವೃತ
ಖಾನಾಪುರ- ಬೀಡಿ ಗ್ರಾಮಗಳ ಮಧ್ಯದಲ್ಲಿನ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಪಶ್ಚಿಮ ದಿಕ್ಕಿನಿಂದ ಗಂಟೆಗೆ 45ರಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮುಂದಿನ 24 ಗಂಟೆಗಳ ಅವಧಿಗೆ ಕರಾವಳಿ ಕರ್ನಾಟಕದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications