Karnataka Rains: ರಾಜ್ಯದ 5 ಕಡೆ ಭರ್ಜರಿ ಮಳೆ ದಾಖಲು, ಹವಾಮಾನ ವರದಿ
ಬೆಂಗಳೂರು, ಏಪ್ರಿಲ್ 06: ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಶುರುವಿಟ್ಟಿಕೊಂಡಿದೆ. ಮುಂದಿನ ನಾಲ್ಕೈದು ದಿನವು ಜೋರು ಮಳೆ ಸಾಧ್ಯತೆ ಇದೆ. ಕಳೆದ 24 ಗಂಟೆಗಳಲ್ಲಿ ರಾಜ್ಯ 5 ಪ್ರದೇಶಗಳಲ್ಲಿ ಗುಡುಗು ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆ ದಾಖಲಾಗಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಳೆ ದಾಖಲಾತಿ ವಿವರ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ಮಲೆನಾಡು, ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಆಗಾಗ್ಗೆ ಸಾಧಾರಣದಿಂದ ಭಾರಿ ಮಳೆ ಆಗುತ್ತಿದೆ. ಈ ಮಧ್ಯೆ ಕಳೆದ ಒಂದು ವಾರದಿಂದ ಒಣ ಹವೆ ಹಾಗೂ ಬಯಲು ಸೀಮೆ ಪ್ರದೇಶಗಳಾದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಫೂರ್ವ ಮುಂಗಾರು ಚುರುಕುಗೊಂಡಿದೆ. ಉತ್ತಮ ಮಳೆ ದಾಖಲಾಗಿದೆ. ರೈತರು ಮುಂಗಾರು ಬಿತ್ತನೆಗೆ ಹೊಲ ಹದ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಅಂದರೆ ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ ಒಂದು ದಿನದಲ್ಲಿ ಅತ್ಯಧಿಕ ಮಳೆಯು ರಾಜ್ಯದ ಐದು ಕಡೆಗಳಲ್ಲಿ ದಾಖಲಾಗಿದೆ. ಗುಡುಗು ಮಿಂಚು ಸಹಿತ ಜೋರು ಮಳೆ ಮಾತ್ರವಲ್ಲದೇ ಕೆಲವೆಡೆ ಆಲಿಕಲ್ಲಿನ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆ ದಾಖಲಾಗಿದ್ದೆಲ್ಲಿ? ವಿವರ
ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರು ಎಂಬಲ್ಲಿ 97.0 ಮಿಮೀ ಮಳೆ ಅಂದರೆ ರಾಜ್ಯದ ಗರಿಷ್ಠ ಮಳೆ ಇಲ್ಲಿ ದಾಖಳಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಜಾಲಿಯಲ್ಲಿ 83.0 ಮಿಮೀ, ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜದಲ್ಲಿ 82.0 ಮಿ.ಮೀ., ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿಯಲ್ಲಿ 72.0 ಮಿ.ಮೀ., ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳಂದೂರಿನಲ್ಲಿ 70.5 ಮಿ.ಮೀ. ಮಳೆ ದಾಖಲಾಗಿದೆ. ಈ ಐದು ಪ್ರದೇಶಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆರ್ಭಟ ಕಂಡು ಬಂದಿದೆ.
ಉಳಿದಂತೆ ರಾಜ್ಯದ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ನೆನ್ನೆ 52 ಮಿ.ಮೀ, ಶಿವಮೊಗ್ಗದಲ್ಲಿ 52 ಮಿ.ಮೀ, ಹಾಸನ - 48 ಮಿ.ಮೀ,ಚಿಕ್ಕಮಗಳೂರು 45 ಮಿ.ಮೀ, ಹಾವೇರಿ 44 ಮಿ.ಮೀ, ರಾಮನಗರ 43 ಮಿ.ಮೀ., ರಾಯಚೂರು 43 ಮಿ.ಮೀ.,ದಾವಣಗೆರೆ 42 ಮಿ.ಮೀ, ಧಾರವಾಡ 41 ಮಿ.ಮೀ, ಯಾದಗಿರಿ 34 ಮಿ.ಮೀ, ಮೈಸೂರು 33 ಮಿ.ಮೀ ಮತ್ತು ಚಾಮರಾಜನಗರ 24 ಮಿ.ಮೀ. ಮಳೆ ಕಂಡು ಬಂದಿದೆ.

ಬಂಗಾಳಕೊಲ್ಲಿ ಉಪಸಾಗರದಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಸಮುದ್ರ ಮೇಲ್ಮೈನಲ್ಲಿನ ಹವಾಮಾನ ವೈಪರಿತ್ಯಗಳ ಕಾರಣದಿಂದಾಗಿ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ, ಮಹಾರಾಷ್ಟ್ರ ವರೆಗೆ ಮಳೆ ಆಗುತ್ತಿದೆ. ಮುಂದಿನ ಒಂದು ವಾರ ನಗರದಲ್ಲಿ ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.












Click it and Unblock the Notifications