Karnataka Weather: 7 ವರ್ಷದ ದಾಖಲೆ ಮುರಿದ 2024ರ ತಾಪಮಾನ: 18 ಜಿಲ್ಲೆಗಳಿಗೆ 'ಹೀಟ್ವೇವ್ ಅಲರ್ಟ್'
ಬೆಂಗಳೂರು, ಮೇ 02: ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಬಿಸಲಿನದ್ದೆ ಸುದ್ದಿ. ತಾಪಮಾನ ಯಾವ ಇಳಿಕೆ ಆಗಿ ಮಳೆ ಬರಲಿದೆಯೋ ಎಂದು ಕಾಯುತ್ತಿರುವ ಜನರಿಗೆ ಹವಾಮಾನ ಇಲಾಖೆ ಬಿಸಿಲಿನ ಕುರಿತು ಆಘಾತಕಾರಿ ಅಂಕಿ ಸಂಖ್ಯೆಗಳ ಮಾಹಿತಿ ಬಹಿರಂಗಪಡಿಸಿದೆ.
ರಾಜ್ಯದಲ್ಲಿ ಕಳೆದ ತಿಂಗಳು ಏಪ್ರಿಲ್ 30 ರಂದು ದಾಖಲಾದ ಗರಿಷ್ಠ ತಾಪಮಾನದ ಕಳೆದ ಏಳು ವರ್ಷಗಳಲ್ಲಿಯೇ ಅತ್ಯಧಿಕ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಗುರುವಾರ (ಏ.30ಕ್ಕೆ) ರಾಜ್ಯದಲ್ಲಿ ಗರಿಷ್ಠ ತಾಪಮಾನ 45.6˚C ದಾಖಲಾಗಿದೆ ಎಂದು ಅಂಕಿ ಸಂಖ್ಯೆ ಸಹಿತ ವಿವರ ನೀಡಿದೆ.

ಬೆಂಗಳೂರು ಹಾಗೂ ಮಲೆನಾಡು ಜಿಲ್ಲೆಗಳು ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಯಂತೆ ಬೆಂದಿವೆ. ಇನ್ನೂ ಸದಾ ಅಧಿಕ ಒಣಹವೆ, ಮಳೆ ಕಡಿಮೆ ಇರುವ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪರಿಸ್ಥಿತಿ ಹೇಳತೀರದಾಗಿದೆ.
ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆಗಾಗಿ ಜನರು ಕಾಯುತ್ತಿದ್ದಾರೆ. ಆದರೆ ಆಗುತ್ತಿಲ್ಲ. ಇದಕ್ಕೆ ವಿರುದ್ಧವಾಗಿ ತಾಪಮಾನವು ಒಂದೇ ಸಮನೇ ಹೆಚ್ಚಾಗುತ್ತಲೇ ಇದೆ. ಮೂಲಗಳ ಪ್ರಕಾರ ಬೆಸಿಗೆ ಆರಂಭದಿಂದಲೂ ಈವರೆಗೆ ಹೆಚ್ಚು ತಾಪಮಾನ ಕಂಡ ವರ್ಷ ಇದೇ ಆಗಿದೆ. ಅಲ್ಲದೇ ಏಪ್ರಿಲ್ನಲ್ಲಿ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಅನೇಕ ಬಾರಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗಿದೆ.
ರಾಜ್ಯದ 7 ವರ್ಷದ ದಾಖಲೆ ತಾಪಮಾನದ ವಿವರ
ರಾಜ್ಯದಲ್ಲಿ 2017ರಿಂದ 2024ರವರೆಗೆ ಅತ್ಯಧಿಕ ತಾಪಮಾನ ಇದೇ ವರ್ಷ ದಾಖಲಾಗಿದೆ. 2017 ರಲ್ಲಿ ಏಪ್ರಿಲ್ ನಲ್ಲಿ 42.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, 2018 ರಲ್ಲಿ 45.3 ಡಿಸೆ, 2019ರಲ್ಲಿ 43.7 ಡಿಸೆ, 2020ರಲ್ಲಿ 41.5 ಡಿಸೆ, 2021ರಲ್ಲಿ 42.5 ಡಿಸೆ, 2022ರಲ್ಲಿ 44.1 ಡಿಸೆ, 2023ರಲ್ಲಿ 40.2 ಡಿಸೆ ಹಾಗೂ 2024ರಲ್ಲಿ 45.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಐಎಂಡಿ ಪ್ರಕಾರ, ಕಳೆದ ಏಳು ವರ್ಷದಲ್ಲಿ ನಾಲ್ಕು ಬಾರಿ ಅಂದರೆ, 2018, 2020, 2022 ಮತ್ತು 2024ರಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಈ ಪೈಕಿ ಪ್ರಸಕ್ತ ವರ್ಷ ಅತ್ಯಧಿಕ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮೇ 02ರ ತಾಪಮಾನ ದಾಖಲಾತಿ
ಕರ್ನಾಟಕದಲ್ಲಿ ಗುರುವಾರ (ಮೇ 02) ರಂದು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಬಿಸಲಿನ ವಾತಾವರಣ, ಒಣ ಹವೆ ಕಂಡು ಬಂದಿದೆ. ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ದೈನಂದಿನ 40 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚು ತಾಪಮಾನ ಕಂಡು ಬಂದಿದೆ.
ಇದರಲ್ಲಿ ಕಲಬುರಗಿ ಮತ್ತು ರಾಯಚೂರಿನಲ್ಲಿ ತಲಾ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ದಾವಣಗೆರೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಏಪ್ರಿಲ್ 25 ರಂದು #ಕರ್ನಾಟಕ ರಾಜ್ಯದಲ್ಲಿ ದಾಖಲಾದ #ಗರಿಷ್ಠ #ತಾಪಮಾನದ ವರ್ಷವಾರು (2017-2024) ಹೋಲಿಕೆ. ಕಳೆದ 7 ವರ್ಷಕ್ಕೆ ಹೋಲಿಸಿದರೆ 45.6˚C ಅತಿ ಹೆಚ್ಚು ತಾಪಮಾನ ದಾಖಲಾಗಿದೆ. #ರಣಬಿಸಿಲು #ಶಾಖತರಂಗ #ಬಿಸಿಗಾಳಿ #ಸುರಕ್ಷಿತವಾಗಿರಿ. pic.twitter.com/iTmHtMy9Uk
— Karnataka State Natural Disaster Monitoring Centre (@KarnatakaSNDMC) April 30, 2024
ಮೇ.7ರವರೆಗೆ ಅಧಿಕ ತಾಪಮಾನ: ಹೀಟ್ವೇವ್ ಅಲರ್ಟ್
ತಾಪಮಾನದಿಂದ ಕಂಗೆಟ್ಟಿರುವ ಕರ್ನಾಟಕ ರಾಜ್ಯಕ್ಕೆ ವರುಣ ಕೃಪೆ ತೋರಿಲ್ಲ. ರಾಜ್ಯದಲ್ಲಿ ಒಂದೆರಡು ಕಡೆ ತುಂತುರು ಮಳೆ ಬಂದಿದ್ದು ಬಿಟ್ಟರೆ ಎಲ್ಲೆಡೆ ಶಾಖದ ಅಲೆ ಮುಂದುವರಿಯುತ್ತಿದೆ. ಇದೀಗ ಮುಂದಿನ ಐದು ದಿನ ಬಹುತೇಕ ರಾಜ್ಯಾದ್ಯಂತ ಹೀಟ್ ವೇವ್ ಮುಂದುವರಿಯಲಿದೆ. ವಿಪರೀತ ಝಳ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಾಳೆ ಮೇ 3ರಿಂದ 7ರವರೆಗೆ ಕರ್ನಾಟಕದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ 5 ದಿನ ಅತ್ಯಧಿಕ ಶಾಖದ ಅಲೆ ಕಂಡು ಬರುವ ಕಾರಣ 'ಆರೆಂಜ್ ಅಲರ್ಟ್' ಕೊಡಲಾಗಿದೆ.












Click it and Unblock the Notifications