Karnataka Rain: ಇಂದು ಸಂಜೆ ವೇಳೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಬೀಳುವ ಮುನ್ಸೂಚನೆ
ಕರ್ನಾಟಕ, ಜೂನ್, 05: ಈಗಾಗಲೇ ಮುಂಗಾರರು ಪೂರ್ವ ಮಳೆಯಿಂದ ರಾಜ್ಯದ ಹಲವೆಡೆ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಹಲವರು ಮನೆ, ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದರೆ, ಕೆಲವೆಡೆ ಕೃಷಿ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಹಾಗೆಯೇ ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ ಭಾಗಗಳಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದಾನೆ. ಹೀಗೆ ಮಳೆ ಕ್ಷೀಣಿಸುತ್ತಿದ್ದಂತೆ ನಗರದಲ್ಲಿ ಬಿಸಿಲಿನ ತಾಪಾಮಾನ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ಧಗೆ ಮಾತ್ರ ಕಡಿಮೆಯಾಗುತ್ತಿಲ್ಲ. ಸಂಜೆ ನಂತರ ಮೋಡದ ವಾತಾವರಣ ನಿರ್ಮಾಣ ಆಗುತ್ತಲೇ ಇದ್ದು, ಮಳೆ ಮಾತ್ರ ಬರುತ್ತಿಲ್ಲ. ಆದರೆ ಹವಾಮಾನ ಇಲಾಖೆ ಇಂದು ಸಂಜೆ ವೇಳೆಗೆ ನಗರದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರವೂ (ಜೂನ್ 05) ಕೂಡ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಆದ್ದರಿಂದ ಮಳೆ ಬಂದಂತಹ ಸಂದರ್ಭದಲ್ಲಿ ವಾಹನ ಸವಾರರು ಅಂಡರ್ ಪಾಸ್ಗಳಲ್ಲಿ ಹೋಗದಂತೆಯೂ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ.
ಇನ್ನು ಈಗಾಗಲೇ ಭಾನುವಾರ (ಜೂನ್ 04) ಕೊಡಗು ಜಿಲ್ಲೆಯ ನಾಪ್ಲೋಕ್ಲುನಲ್ಲಿ 5 ಸೆ. ಮೀ. ಮಳೆ ಬಿದ್ದಿದೆ. ಇನ್ನುಳಿದಂತೆ ಕೊಳ್ಳೇಗಾಲ, ಸರಗೂರು, ಕೊಟ್ಟಿಗೆಹಾರ 3 ಸೆಂ. ಮೀ., ಅರಕಲಗೂಡು, ಮೂರ್ನಾಡು 2 ಸೆಂ. ಮೀ., ಬೀದರ್, ತಿ.ನರಸೀಪುರ, ಕಳಸ, ಮೂಡಿಗೆರೆ & ಮೈಸೂರಿನಲ್ಲಿ 1 ಸೆಂ. ಮೀ. ಮಳೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಳೆ ಪಡೆಯಲಿರುವ ಜಿಲ್ಲೆಗಳಿವು
ಇನ್ನು ಇಂದು ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಆದರೆ ನಗರದಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆಯಿದೆ. ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಮಂಡ್ಯ ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆದಿದ್ದು, ಇಲ್ಲೂ ಕೂಡ ಸಂಜೆ ವೇಳೆಗೆ ಮಳೆರಾಯ ಆರ್ಭಟಿಸಲಿದ್ದಾನೆ ಎಂದು ತಿಳಿಸಿದೆ.
ಇನ್ನು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ, ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಗುಡುಗು ಸಹಿತ ಭಾರೀ ಮಳೆ ಬೀಳುವ ಸಂಭವ ಇದೆ. ಹಾಗೆಯೆ ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಜೂನ್ 7ರವರೆಗೆ ಮಳೆ ಬೀಳುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.
ಅದರಲ್ಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಧಗೆಗೆ ಜನರು ಕಂಗಾಲಾಗಿದ್ದರು. ಇದೀಗ ಕೆಲವು ದಿನಗಳ ಹಿಂದೆಯಷ್ಟೇ ಸತತವಾಗಿ ಮಳೆ ಸುರಿದ ಕಾರಣ ವಾತಾವರಣ ತಂಪಾಗಿದೆ. ಮತ್ತೊಂದೆಡೆ ಉಷ್ಣಾಂಶವೂ ಕಡಿಮೆ ಆಗುತ್ತಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್ನಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆ ಆಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಗಾರು ಮಳೆ ರಾಜ್ಯಕ್ಕೆ ಇಷ್ಟೊತ್ತಿಗೆ ಪ್ರವೇಶ ಮಾಡಬೇಕಿತ್ತು. ಆದರೆ ಈ ಬಾರಿ ಜೂನ್ 8ರಿಂದ ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿ ಇದೆ. ಹಾಗೆಯೆ ಈ ಮುಂಗಾರು ವಕೋಪವನ್ನು ಎದುರಿಸಲು ಆಯಾ ಜಿಲ್ಲಾವಾರು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಈಗಾಗಲೇ ಅಪಾಯದ ಸ್ಥಳಗಳಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸಗಳನ್ನು ಸಹ ಆಯಾ ಜಿಲ್ಲೆ ಅಧಿಕಾರಿಗಳು ಮಾಡುತ್ತಿದ್ದಾರೆ.












Click it and Unblock the Notifications