Karnataka Rain: ಸುಡುವ ಬೇಸಿಗೆ ನಡುವೆಯೂ ರಾಜ್ಯದ ಈ ಭಾಗದಲ್ಲಿ ತಂಪೆರೆದ ಮಳೆ
ರಾಜ್ಯದಲ್ಲಿ ಬಿರು ಬೇಸಿಗೆಯಿಂದ ಜನ ಕಂಗಾಲಾಗಿದ್ದಾರೆ. ಸುಡುವ ಬಿಸಿಲು, ಬತ್ತಿದ ನದಿ, ಕೆರೆ, ಕೊಳವೆಬಾವಿಗಳು ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಿದೆ. ಇದೆಲ್ಲದರ ನಡುವೆ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಅದಕ್ಕೆ ತಕ್ಕಂತೆ ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆಯಾಗಿದ್ದು, ಅಚ್ಚರಿಯ ಜೊತೆಗೆ ಸಂತಸಕ್ಕೆ ಕಾರಣವಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲುವಿನಲ್ಲಿ ಬುಧವಾರ ಕೆಲ ಸಮಯ ಮಳೆಯಾಗಿದ್ದು ಕಾದಿದ್ದ ಭೂಮಿಗೆ ತಂಪೆರದಿದೆ. @Coorgthekashmir ಎಕ್ಸ್ ಖಾತೆಯಲ್ಲಿ ಕಿಗ್ಗಾಲುವಿನಲ್ಲಿ ಮಳೆಯಾಗುತ್ತಿರುವು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಮುನ್ಸೂಚನೆ ಇದ್ದು, ಮಾರ್ಚ್ 20ರ ಬಳಿಕ ಕೊಡಗು, ಪಶ್ಚಿಮ ಘಟ್ಟಗಳ ಭಾಗದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು. ಆದರೆ ಅಂದುಕೊಂಡಿದ್ದ ಸಮಯಕ್ಕೂ ಮುನ್ನವೇ ಕೊಡಗು ಜಿಲ್ಲೆಯ ಕಿಗ್ಗಾಲುವಿನಲ್ಲಿ ಮಳೆಯಾಗಿದೆ.
ರಾಜ್ಯದಲ್ಲಿ ಈ ಬಾರಿ ಉತ್ತಮ ವರ್ಷಧಾರೆ
ಎಲ್ ನಿನೋ ಪ್ರಭಾವ ಕಡಿಮೆಯಾಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಜಾಗತಿಕವಾಗಿ ತಾಪಮಾನ ಸಹಜ ಸ್ಥಿತಿಗೆ ಮರಳಲಿದೆ. ಈ ಬಾರಿ ರಾಜ್ಯದಲ್ಲಿ ಕೂಡ ಉತ್ತಮ ಮುಂಗಾರು ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ-ಜೂನ್ ವೇಳೆಗೆ ರಾಜ್ಯದಲ್ಲಿ ಉತ್ತಮ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಈ ಬಾರಿ ರಾಜ್ಯದಲ್ಲಿ ಮುಂಗಾರು ಕೈಕೊಟ್ಟರೆ ಮಾತ್ರ ಭೀಕರ ಬರಗಾಲ ಎದುರಾಗಲಿದೆ. ಆದರೆ ಹವಾಮಾನ ತಜ್ಞರು ಉತ್ತಮ ಮಳೆಯಾಗುವ ಮುನ್ಸೂಚನೆ ಕೊಟ್ಟಿರುವುದು ಸದ್ಯ ಸಮಾಧಾನ ತರಿಸಿದೆ. ಆದರೆ ಮಳೆಗಾಲ ಆರಂಭಕ್ಕೆ ಇನ್ನು ಮೂರು ತಿಂಗಳು ಸಮಯ ಇದ್ದು ಅದುವರೆಗೂ ಸುಡು ಬಿಸಿಲಿನ ನಡುವೆ, ನೀರಿನ ಕೊರತೆ ನಡುವೆ ದಿನ ಕಳೆಯುವುದು ಸವಾಲಾಗಿದೆ.
ಕೃಷಿ ಮೇಲೆ ಕೂಡ ಪರಿಣಾಮ
ಎಲ್ ನಿನೋ ಕಾರಣದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಕಳೆದ ವರ್ಷ ಮಳೆ ಸಂಪೂರ್ಣವಾಗಿ ಕೈಕೊಟ್ಟಿತ್ತು. ಪ್ರಮುಖ ಜಲಾಶಯಗಳು ಅರ್ಧ ಕೂಡ ತುಂಬದೇ ಇರುವುದು ಕೃಷಿ ಚಟುವಟಿಕೆ ಮೇಲೆ ಕೂಡ ಪರಿಣಾಮ ಬೀರಿದೆ.
ರಾಜ್ಯದಲ್ಲಿ ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದು ಬೆಂಗಳೂರಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಸದ್ಯ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಭಾರಿ ಸಮಸ್ಯೆಯಾಗಿದ್ದು, ಟ್ಯಾಂಕರ್ ನೀರಿನ ಬೆಲೆ ಗಗನಕ್ಕೇರಿದೆ.












Click it and Unblock the Notifications