karnataka rain: ಒಳನಾಡಿಗೆ ತಗ್ಗಿದ ಮಳೆ, ಆಗಸ್ಟ್ ಮೊದಲ ವಾರ ಕರಾವಳಿಗೆ ಮತ್ತೆ ಭಾರೀ ಮಳೆ
ಬೆಂಗಳೂರು, ಜುಲೈ 30: ಕರ್ನಾಟಕದಾದ್ಯಂತ ಸಕ್ರೀಯಗೊಂಡಿದ್ದ ಮುಂಗಾರು ಮಳೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮಳೆ ಕಡಿಮೆ ಆಗಿದೆ, ಕರಾವಳಿಗೆ ಮುಂದಿನ ಮೂರು ದಿನ ಬಿಟ್ಟು ಮತ್ತೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಒಂದು ತಿಂಗಳಿನಿಂದ ಸುರಿದಿದ್ದ ಅತ್ಯಧಿಕ ಮಳೆ ತಾತ್ಕಾಲಿಕವಾಗಿ ವಿರಾಮ ನೀಡಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಭಾಗಕ್ಕೆ ಮಳೆ ಆಗಿಲ್ಲ. ಇದೀಗ ಆಗಸ್ಟ್ 3 ಹಾಗೂ 4ರಂದು ವ್ಯಾಪಕವಾಗಿ ಈ ಜಿಲ್ಲೆಗಳಲ್ಲಿ ವರುಣಾರ್ಭಟ ಕಂಡು ಬರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇಂದಿನಿಂದ ಮುಂದಿನ ಆಗಸ್ಟ್ 2ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ತುಂತುರು ಮಳೆ ಆಗಬಹುದು. ಈಗಷ್ಟೇ ಪ್ರವಾಹ ಭೀತಿಯಿಂದ ಹೊರ ಬಂದ ಕರಾವಳಿ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಒಳನಾಡು ಜಿಲ್ಲೆಗಳ ಪೈಕಿ ಉತ್ತರ ಕರ್ನಾಟಕ ಬೆಳಗಾವಿ, ಹಾವೇರಿ, ಧಾರವಾಡ, ಗದಗ, ವಿಜಯಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿಯಲ್ಲಿ ಜಿಲ್ಲೆಗಳಲ್ಲಿ ಸುಮಾರು ಎರಡು ವಾರ ಭರ್ಜರಿ ಮಳೆ ದಾಖಲಾಗಿದೆ. ಕಳೆದ ಶುಕ್ರವಾರದಿಂದ ಈ ಜಿಲ್ಲೆಗಳ್ಲಲಿ ಮಳೆ ತೀವ್ರತೆ ಕುಂದಿದೆ.
ಒಳನಾಡಿಗೆ ಹಗುರ ಮಳೆ ಸಾಧ್ಯತೆ
ರೈತರು ಜಮೀನುಗಳಲ್ಲಿ ಕಾಲಿಡದಷ್ಟು ಮಳೆ ದಿನನಿತ್ಯ ಸುರಿಯುತ್ತಲೇ ಇತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಯಿತು, ಇದೀಗ ರೈತರು, ಕೂಲಿ ಕೆಲಸದಾಳುಗಳು ಮತ್ತೆ ಹೊಲಗಳತ್ತ ಮುಖ ಮಾಡಿದ್ದಾರೆ. ಪೈರುಗಳಿಗೆ ರಸಗೊಬ್ಬರ-ರಸಾಯನಿಕ ಸಿಂಪಡಣೆಯ ಕೆಲಸವಾಗುತ್ತಿದೆ.

ಅದೇ ರೀತಿ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಸಹ ಉತ್ತಮ ಮಳೆ ದಾಖಲಾಗಿತ್ತು. ಸದ್ಯಕ್ಕೆ ಒಳನಾಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ, ಹವಾಮಾನ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಲ್ಲಿ ಮುಂದಿನ ಮೂರು ದಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ತುಂತುರು ಮಳೆ ಆಗುವ ಸಾಧ್ಯತೆಗಳು ಇವೆ.
ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ದಾಖಲು
ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ, ಧರ್ಮಸ್ಥಳ, ದಕ್ಷಿಣ ಕನ್ನಡ, ಕ್ಯಾಸಲ್ ರಾಕ್, ಕಾರವಾರ, ಚಿಕ್ಕಮಗಳೂರು, ಬೆಳಗಾವಿ, ಯಾದಗಿರಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಸಾಧಾರಣವಾಗಿ ಮಳೆ ಆಗಿದೆ.
ಬೆಂಗಳೂರು ನಗರದಲ್ಲಿ ಎರಡು ದಿನದಿಂದ ಅಲ್ಲಲ್ಲಿ ತುಂತುರು ಮಳೆ ಆಗಿತ್ತು. ಭಾನುವಾರ ಆಗಾಗ ಮೋದ ಕವಿದ ವಾತಾವರಣ ಕಂಡು ಬಂದಿದೆ. ಉಳಿದಂತೆ ಒಂದರೆಡು ಕಡೆಗಳು ಸೋನೆ ಮಳೆಯಾಗುವ ಸಾಧ್ಯತೆ ಇದೆ. ಇದರ ಹೊರತು ಜೋರು ಮಳೆ ಇಲ್ಲವೇ ಗಂಭೀರ ಸ್ವರೂಪದ ಹವಾಮಾನ ಬದಲಾವಣೆಗಳು ಇಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications