'ಬರ'ಗೆಟ್ಟ ರಾಯಚೂರು ಜನತೆಗೆ ನೀರು ಮಾಫಿಯಾ ಬರೆ
ರಾಯಚೂರು, ಏಪ್ರಿಲ್, 25: ಏರುತ್ತಿರುವ ಬಿಸಿಲಿನ ತಾಪಕ್ಕೆ ಪರಿಹಾರವೇ ಇಲ್ಲ. ಮಳೆಯ ದೇವರಿಗೂ ರಾಯಚೂರು ಜನರ ಕೂಗು ಕೇಳುತ್ತಿಲ್ಲ. ಆಡಳಿತವೂ ಜನರಿಗೆ ಸ್ಪಂದಿಸುತ್ತಿಲ್ಲ.
ಸಿಎಂ ಸಿದ್ದರಾಮಯ್ಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆಯೇ? ಅದಕ್ಕೆ ಸ್ಪಷ್ಟ ಉತ್ತರ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ.[ರಾಯಚೂರು: ಮಸೀದಿಯೊಳಗೆ ಪತ್ತೆಯಾಯ್ತು ಮಂದಿರ]

ಇವೆಲ್ಲದರ ಮಧ್ಯೆ ನೀರು ಮಾರಾಟದ ಮಾಫಿಯಾ ತಲೆ ಎತ್ತಿದೆ. ಜನರನ್ನು ಸುಲಿಯುತ್ತಿರುವ ನೀರು ಮಾಫಿಯಾ ನಿಯಂತ್ರಿಸಲು ಸ್ಥಳೀಯ ಆಡಳಿತದ ಬಳಿ ಸಾಧ್ಯವಾಗುತ್ತಿಲ್ಲ. 10 ರು. ಗೆ ಸಿಗುತ್ತಿದ್ದ ಬಿಂದಿಗೆ ನೀರಿಗೆ ರಾಯಚೂರು ಜನ 20 ರು. ನೀಡಬೇಕಾಗಿದೆ.
ಜೀವ ಜಲ ದುಬಾರಿ: ನೀರು ಮಾಫಿಯಾ ಕರ್ನಾಟಕವೊಂದಕ್ಕೆ ಸೀಮಿತವಾದ ಸಮಸ್ಯೆಯಾಗಿ ಉಳಿದುಕೊಂಡಿಲ್ಲ. ಪ್ರತಿಯೊಂದು ರಾಜ್ಯಗಳಲ್ಲೂ ತಲೆ ಎತ್ತಿದ್ದು ಜನರನ್ನು ಸುಲಿಗೆ ಮಾಡುತ್ತಿದೆ.['ಪ್ರತಿ ಕುಟುಂಬಕ್ಕೆ ಕನಿಷ್ಠ 12 ಬಿಂದಿಗೆ ನೀರು ನೀಡಿ']
ನೀವು ಹೆಚ್ಚಿನ ದರ ನೀಡಲೇಬೇಕು, ಸರ್ಕಾರವೇ ನೀರಿನ ದರ ಏರಿಕೆ ಮಾಡಿದೆ. ಬಿಂದಿಗೆ ನೀರಿಗೆ 20 ರು. ನೀಡಿ ಎಂದು ದಲ್ಲಾಳಿಗಳು ನಮ್ಮನ್ನು ಕೇಳುತ್ತಿದ್ದಾರೆ. ನಿಜವಾಗಿ ನೀರೆಲ್ಲ ಸರ್ಕಾರಕ್ಕೆ ಸೇರಿದ್ದು ಅಂದರೆ ಜನರಿಗೆ ಸೇರಿದ್ದು, ನಮ್ಮ ನೀರಿಗೆ ನಾವೇ ದುಡ್ಡು ಕೊಟ್ಟು ಕೊಂಡುಕೊಳ್ಳುವಂಥ ಸ್ಥಿತಿ ಎದುರಾಗಿದೆ ಎಂದು ಕಮಲಮ್ಮ ಎಂಬ ಮಹಿಳೆ ಆತಂಕ ತೋಡಿಕೊಳ್ಳುತ್ತಾರೆ.
ದೇವಾಲಯ ಮೂಲ: ಕೆಲ ದೇವಾಲಯಗಳಿಗೆ ಸೇರಿದ ಜಾಗದಲ್ಲಿ ನೀರಿನ ಮೂಲಗಳು ಉಳಿದುಕೊಂಡಿವೆ ಆದರೆ ನೀರಿಗೆ ಬೇಡಿಕೆ ಹೆಚ್ಚಾಗಿದ್ದು ಜನರು ಒಂದೇ ಕಡೆ ಧಾವಿಸುತ್ತಿದ್ದು ಇನ್ನು ಕೆಲವೇ ದಿನದಲ್ಲಿ ಈ ಮೂಲಗಳು ಬತ್ತಿ ಹೋಗಲಿವೆ. ಜನರ ಕೈಯಿಂದ ಹಣ ಸುಲಿಗೆ ಮಾಡುತ್ತಿರುವ ವಾಟರ್ ಮಾಫಿಯಾದವರನ್ನು ಮೊದಲು ನಿಯಂತ್ರಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.












Click it and Unblock the Notifications