Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
Karnataka Rain: ಬೆಂಗಳೂರು, ಏಪ್ರಿಲ್ 25: ಕರ್ನಾಟಕದ ರಾಜ್ಯದಲ್ಲಿ ಬೇಸಿಗೆ ಮಧ್ಯೆ ಅಲ್ಲಲ್ಲಿ ಪೂರ್ವ ಮುಂಗಾರು ಮಳೆ (Pre Monsoon rain) ಸುರಿಯಲಾರಂಭಿಸಿದೆ. ಹೆಚ್ಚು ಒಣಹವೆ, ಕಡಿಮೆ ಮಳೆ ಕಾಣುವ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೇ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಳೆ ಬಿದ್ದಿದೆ. ಹಾಗಾದರೆ ಏಪ್ರಿಲ್ 1ರಿಂದ 25ರವರೆಗೆ ದಾಖಲಾದ ಮಳೆ ಎಷ್ಟು? ಉಂಟಾದ ಮಳೆ ಕೊರತೆ?, ಎಲ್ಲೆಲ್ಲಿ ಹೆಚ್ಚು ಮಳೆ ಆಗಿದೆ? ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಪೂರ್ವ ಮುಂಗಾರು ಮಳೆ ಕೈ ಕೊಟ್ಟಿದೆ. ಉಳಿದಂತೆ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಸದ್ಯ ರಾಜ್ಯದಲ್ಲಿ ಏಪ್ರಿಲ್ 1-25ರವರೆಗೆ ಒಟ್ಟಾರೆ ಶೇಕಡಾ 20ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಐಎಂಡಿ ತಿಳಿಸಿದೆ.

ಏಪ್ರಿಲ್ 1ರಿಂದ 25ರ ವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಗೆ ವಾಡಿಕೆ (32ಮಿ.ಮೀ.) ಮಳೆ ಆಗದೇ ಕೇವಲ 6ಮಿ.ಮೀ. ಮಳೆ ದಾಖಲಾಗುವ ಮೂಲಕ ದಕ್ಷಿಣ ಒಳನಾಡಿನ ಭಾಗಕ್ಕೆ ಬರೋಬ್ಬರಿ ಶೇ. -83 ರಷ್ಟು ಮಳೆ ಕೊರತೆ ಉಂಟಾಗಿದೆ.
ಇದೇ 25 ದಿನಗಳ ಅವಧಿಯಲ್ಲಿ ಹೆಚ್ಚು ಮಳೆ ಕಾಣುತ್ತಿದ್ದ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವಾಡಿಕೆ (42ಮಿ.ಮೀ.) ಮಳೆ ಆಗದೇ ಕೇವಲ 35 ಮಿ.ಮೀ. ಮಳೆ ದಾಖಲಾಗಿದ್ದು, ಇದರಿಂದ ಈ ಭಾಗದಲ್ಲಿ ಒಟ್ಟು ಶೇ. -17 ಮಳೆ ಕೊರತೆ ಕಂಡು ಬಂದಿದೆ.

ರಾಜ್ಯದಲ್ಲಿ ಹೆಚ್ಚು ಮಳೆ ಆಗಿದ್ದೆಲ್ಲಿ?
ಏಪ್ರಿಲ್ ತಿಂಗಳ ಇದೇ ಅವಧಿಯಲ್ಲಿ ಬರೀ ಒಣಹವೆ ಕಂಡು ಬರುತ್ತಿದ್ದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು (+30ಮಿ.ಮೀ.) ಮಳೆ ಆಗಿದೆ.
ಅಂದರೆ ಈ ಭಾಗದಲ್ಲಿ ವಾಡಿಕೆ (18ಮಿ.ಮೀ.) ಮಳೆಗಿಂತ 24 ಮಿ.ಮೀ. ಹೆಚ್ಚು ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು (IMD) ಮಾಹಿತಿ ನೀಡಿದೆ.
ಇನ್ನೂ ರಾಜ್ಯದ ಕರಾವಳಿ ಭಾಗದ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ 25 ದಿನಗಳಲ್ಲಿ ನಿರೀಕ್ಷೆಗೂ ಹೆಚ್ಚು ಮಳೆ ಆಗಿದೆ. ಈ ಭಾಗದಲ್ಲಿ ವಾಡಿಕೆ 24 ಮಿ.ಮೀ. ಆಗಬೇಕಿತ್ತು, ಆದರೆ 32 ಮಿ.ಮೀ.ಮಳೆ ದಾಖಲಾಗಿದೆ. ಇದರಿಂದ ಇಲ್ಲಿ ಶೇ.34ರಷ್ಟು ಅಧಿಕ ಮಳೆ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
ಕರ್ನಾಟಕ ಮಳೆ ಮುನ್ಸೂಚನೆ ವರದಿ
ರಾಜ್ಯದಲ್ಲಿ ಈವರೆಗೆ ನಿರೀಕ್ಷೆಯಷ್ಟು ಮಳೆ ಬಾರದಿದ್ದರೂ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆ ಆಗುವ ಲಕ್ಷಣಗಳು ಕಂಡು ಬಂದಿವೆ. ಏಪ್ರಿಲ್ 26ರಿಂದ ಐದು ದಿನ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಿಗೆ ಭಾರಿ ಮಳೆ ಬರಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಕರಾವಳಿ ಭಾಗಕ್ಕೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ದಕ್ಷಿಣ ಒಳನಾಡಿನ ಬಳ್ಳಾರಿ, ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ನಾಲ್ಕರಿಂದ ಐದು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆ, ಬಿಸಲಿನ ತಾಪಮಾನ ಕಂಡು ಬರಲಿದೆ. ಬೆಂಗಳೂರಿಗೆ ಮಳೆ ಮುನ್ಸೂಚನೆ ಸದ್ಯಕ್ಕೆ ಇಲ್ಲ. ಇಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications