Corona Vaccine: ಕರ್ನಾಟಕಕ್ಕೆ ಲಸಿಕೆ ಕೊರತೆ, ಯಾವ ಆಸ್ಪತ್ರೆಗಳಲ್ಲೂ ಲಸಿಕೆ ದಾಸ್ತಾನಿಲ್ಲ
ಬೆಂಗಳೂರು, ಏಪ್ರಿಲ್ 14: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಪತ್ತೆಯಾಗುವಿಕೆ ಪ್ರಮಾಣ ಏರುಗತಿಯಲ್ಲಿದೆ. ಒಂದು ವೇಳೆ ಕೋವಿಡ್ 19 ದಿಢೀರ್ನೇ ಏರಿಕೆ ಆದಲ್ಲಿ ರಾಜ್ಯ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬ ಸಂಶಯ ಕಾಡಿದೆ. ಕಾರಣ ಕೋವಿಡ್ ಲಸಿಕೆಯ ಅಭಾವ ಸೃಷ್ಟಿಯಾಗಿದೆ. ಇದೇ ವೇಳೆ ಎದುರಾಗಿರುವ ಚುನಾವಣೆಯಲ್ಲಿ ಸರ್ಕಾರ ಮುಳುಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕವು ಕೋವಿಡ್-19 ಲಸಿಕೆಗಳ ತೀವ್ರ ಬಿಕ್ಕಟ್ಟನ್ನು ಎದುರು ನೋಡುತ್ತಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ದಾಸ್ತಾನು ಇಲ್ಲ ಎಂದು ಹೇಳಲಾಗಿದೆ. ಇತ್ತ ಖಾಸಗಿ ಆಸ್ಪತ್ರೆಗಳು ಕೂಡ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ಲಸಿಕೆ ಕೊರತೆ ಸಮಸ್ಯೆಯಿಂದ ಬಳಲುತ್ತಿವೆ ಎನ್ನಲಾಗಿದೆ.

ರಾಜ್ಯದಲ್ಲಿ ಗುರುವಾರ ಹೊಸದಾಗಿ 498 ಕೋವಿಡ್ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಈ ವರ್ಷದ ಜನವರಿಯಿಂದ ನಮ್ಮಲ್ಲಿ ಕೋವಿಡ್ ಲಸಿಕೆ ದಾಸ್ತಾನು ಮುಗಿದಿದೆ. ಹೀಗೆಂದು ಎಂದು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಲಸಿಕೆ ನೋಡಲ್ ಅಧಿಕಾರಿ ಡಾ ರಂಗನಾಥ್ ಟಿಎಸ್ ತಿಳಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ತಿಳಿಸಿದ್ದೇವೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಪ್ರಸ್ತುತ ಲಸಿಕೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕೇಂದ್ರದಿಂದ ಪೂರೈಕೆ ಸ್ಥಗಿತ
ಬೆಂಗಳೂರಿನ ಖ್ಯಾತ ಆಸ್ಪತ್ರೆಗಳಲ್ಲಿ ಒಂದಾದ ಬೌರಿಂಗ್ ಆಸ್ಪತ್ರೆಯಲ್ಲೂ ಸಹ ಅಧಿಕಾರಿಗಳು ಲಸಿಕೆ ಅಭಾವದ ಬಗ್ಗೆ ಖಚಿತಪಡಿಸಿದ್ದಾರೆ. ಲಸಿಕೆಗಳನ್ನು ಪೂರೈಕೆ ಮಾಡುತ್ತಿದ್ದ ಭಾರತ ಸರ್ಕಾರ ಸದ್ಯ ಲಸಿಕೆ ಪೂರೈಕೆಯನ್ನು ನಿಲ್ಲಿಸಿದೆ. ಇತ್ತೀಚೆಗೆ ಹೊಸದಾಗಿ ಅಗತ್ಯ ಕೊರೊನಾ ಲಸಿಕೆಗಳನ್ನು ಆಸ್ಪತ್ರೆಗಳಿಗೆ/ ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ ಎಂಬ ಮಾಹಿತಿ ಮೌಖಿಕವಾಗಿ ಲಭ್ಯವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿಕೆ ಅನಿಲಕುಮಾರ್ ವಿವರಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳು ಖಾಲಿ ಆಗಿದೆ. ಇರುವಷ್ಟು ಲಸಿಕೆಯ ಡೋಸ್ಗಳನ್ನು ಈಗಾಗಲೇ ಫಲಾನುಭವಿಗಳಿಗೆ ನೀಡಿದ್ದೇವೆ. ಹೊಸದಾಗಿ ಬರಬೇಕಿದೆ. ಇನ್ನು ಬಂದಿಲ್ಲ ಎಂದು ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ನವೀನ್ ಭಟ್ ತಿಳಿಸಿದರು.

ಕೆಲವೆಡೆ ಲಸಿಕೆ ವ್ಯಾಲಿಟಿಡಿ ಅಂತ್ಯ
ಅದಷ್ಟೇ ಅಲ್ಲದೇ ಜಯನಗರದ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಘಟಕದ ಮುಖ್ಯಸ್ಥ ಡಾ.ಗೋವಿಂದಯ್ಯ ಯತೀಶ್ ಅವರು, ಆಸ್ಪತ್ರೆಯಲ್ಲಿ 550 ಡೋಸ್ ಕೋವಿಶೀಲ್ಡ್ ಲಸಿಕೆ ಡೋಸ್ ಇದೆ. ಅದರ ಅವಧಿ ಏಪ್ರಿಲ್ 7 ರಂದು ಮುಕ್ತಾಯಗೊಂಡಿದೆ. ಹೀಗಿದ್ದು ಹೊಸದಾಗಿ ಲಸಿಕೆಗೆ ಬೇಕೆಂದು ಆರ್ಡರ್ ಮಾಡಲಾಗಿದೆಯೇ ಎಂದು ಕೇಳಿದೆವಾದರೂ ಮರುತ್ತರ ಬಂದಿಲ್ಲ ಎಂದರು.
ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ಲಸಿಕೆಯ ಡೋಸ್ಗಳು ಲಭ್ಯವಿಲ್ಲ ಎಂದು ಕರ್ನಾಟಕದ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (PHANA) ಅಧ್ಯಕ್ಷರೂ ಆಗಿರುವ ಡಾ ಯತೀಶ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲೂ ಲಸಿಕೆಗಳು ಖಾಲಿ ಆಗಿದ್ದು, ದಾಸ್ತಾನ ಸಹ ಇಲ್ಲ. ಒಂದು ವೇಳೆ ಒಮ್ಮೆಲೆ ಜನ ಲಸಿಕೆ ಪಡೆಯಲು ಬಂದರೆ ಕಷ್ಟವಾಗಲಿದೆ. ಇದ್ದ ಕೋವಿಶೀಲ್ಡ್ನ 1,000 ಡೋಸ್ಗಳು ಕಳೆದ ತಿಂಗಳ ಮಾರ್ಚ್ ನಲ್ಲೇ ವ್ಯಾಲಿಡಿಟಿ ಕಳೆದುಕೊಂಡಿವೆ ಎಂದು ಮಣಿಪಾಲ್ ಆಸ್ಪತ್ರೆಗಳ ನಿರ್ದೇಶಕ ಡಾ ಮನೀಷ್ ರೈ ಆತಂಕ ವ್ಯಕ್ತಪಡಿಸಿದರು.
ಇನ್ನೂ ಕರ್ನಾಟಕ ರಾಜ್ಯ ಜನವರಿ ತಿಂಗಳ ವರೆಗೆ ಹೆಚ್ಚುವರಿ ಲಸಿಕೆಗಳನ್ನು ಹೊಂದಿತ್ತು. ಅದೇ ವೇಳೆ ಬೂಸ್ಟರ್ ಡೋಸ್ ಪಡೆಯುವಂತೆ ಜನರನ್ನು ಒತ್ತಾಯಲಾಯಿತು. ಆಗ ಒಂದಷ್ಟು ಡೋಸ್ಗಳು ಖಾಲಿ ಆದವು ಮರಳಿ ರಾಜ್ಯಕ್ಕೆ ಬಿಡುಗಡೆ ಆಗಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.











Click it and Unblock the Notifications