ಹೊರಬಿತ್ತು ಮತ್ತೊಂದು ಮಹತ್ವದ ಸಮೀಕ್ಷೆ: ಸಿದ್ದರಾಮಯ್ಯ ಪರ ಮತ್ತೆ ಒಲವು ತೋರಿದ ಕನ್ನಡಿಗರು- ಅಂಕಿಅಂಶ, ಮಾಹಿತಿ, ವಿವರ
ಬೆಂಗಳೂರು, ಏಪ್ರಿಲ್ 13: ಮೇ 13ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯು ( Karnataka Assembly Elections 2023 ) ದೇಶದಾದ್ಯಂತ ಭಾರೀ ಕುತೂಹಲ ಕೆರಳಿಸಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ( BJP ) ನೇತೃತ್ವದ ಬಸವರಾಜ ಬೊಮ್ಮಾಯಿ ( Basavaraj Bommai ) ಸರ್ಕಾರ ಮತ್ತೆ ಅಧಿಕಾರ ಗದ್ದುಗೆ ಹಿಡಿಯುವ ನಿಟ್ಟಿನಲ್ಲಿ ಹರಸಾಹಸ ನಡೆಸುತ್ತಿದೆ. ಕಾಂಗ್ರೆಸ್ಸಿಗೆ ( Congress ) ಈ ಬಾರಿ ಗೆಲುವು ಸಾಧಿಸಲೇ ಬೇಕೆಂದು ಶತಾಯಗತಾಯ ಪ್ರಯತ್ನ ನಡೆಸಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸೆಡ್ಡು ಹೊಡೆದಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಗೊಳಿಸಿದೆ. ಏಪ್ರಿಲ್ 13 ರಂದು ಉಮೇದುವಾರಿಕೆ ಸಲ್ಲಿಸುವ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 20ರಂದು ಕೊನೆಯ ದಿನವಾಗಿದೆ. ಮೇ 10ರಂದು ನಡೆಯಲಿರುವ ಚುನಾವಣೆಯ ಫಲಿತಾಂಶಗಳು ಮೇ 13ರಂದು ಹೊರಬರಲಿವೆ.

ಚುನಾವಣೆ ಸಮೀಕ್ಷೆಗಳು ಹೇಳಿದ್ದೇನು?
ಕಳೆದ ತಿಂಗಳು ಬಂದಿರುವ ಆರು ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಮೂರರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ. ಇನ್ನು ಮೂರರಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಬಾರಿಯಂತೆ ಈ ಬಾರಿಯೂ ಯಾರಿಗೂ ಸ್ಪಷ್ಟ ಬಹುಮತ ಬರುವುದಿಲ್ಲವೆಂದು ಮೂರು ಸಮೀಕ್ಷೆಗಳು ಹೇಳಿವೆ. ಒಟ್ಟಾರೆಯಾಗಿ, ಆಡಳಿತ ರೂಢ ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಸೌತ್ ಫಸ್ಟ್- ಪೀಪಲ್ಸ್ ಪಲ್ಸ್ ಸಮೀಕ್ಷೆ ಹೇಳಿದ್ದೇನು?
ಕರ್ನಾಟಕ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲ ಆಯ್ಕೆಯಾಗಿ ಮುಂದುವರಿದಿದ್ದಾರೆ ಎಂದು ಸೌತ್ ಫಸ್ಟ್ - ಪೀಪಲ್ಸ್ ಪಲ್ಸ್ ಸಮೀಕ್ಷೆ ತಿಳಿಸಿದೆ. ಶೇಕಡಾ 32ರಷ್ಟು ಜನರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಮತ್ತು ಲಿಂಗಾಯತ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು 25 ಪ್ರತಿಶತದಷ್ಟು ಜನರು ತಮ್ಮ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ. ಇಲ್ಲಿ ತಿಳಿದುಕೊಳ್ಳಬೇಕಿರುವ ಪ್ರಮುಖ ಅಂಶವೆಂದರೆ, ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಬಿಜೆಪಿಗೆ ಹಿನ್ನೆಡೆ ಮಾಡಲಿರುವುದು ಶತಸಿದ್ದವೆಂದು ರಾಜಕೀಯ ತಜ್ಞರು ಹೇಳಿದ್ದಾರೆ.
ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶೇ 20ರಷ್ಟು ಜನರು ಒಲವು ತೋರಿದ್ದಾರೆ. ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂದು ಶೇ 18ರಷ್ಟು ಮತದಾರರು ಬಯಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದವರಲ್ಲಿ ಶೇಕಡಾ 5 ರಷ್ಟು ಜನರು ಮಾತ್ರ ಇದ್ದಾರೆ.
ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಟ್ರ್ಯಾಕರ್ ಸಮೀಕ್ಷೆಯ ಪ್ರಕಾರ, ಅಹಿಂದ ( ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು ) ಮತಗಳ ಬೆಂಬಲವು ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಲವನ್ನು ಒದಗಿಸಲಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅಹಿಂದಾ ಮತಗಳು ಅವರ ಬೆಂಬಲಕ್ಕೆ ನಿಂತರೆ, ಕಾಂಗ್ರೆಸ್ ಲಾಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications