ಕರ್ನಾಟಕ: ಭರವಸೆ ಈಡೇರಿಸದ ಸರ್ಕಾರದ ವಿರುದ್ಧ ಪೌರಕಾರ್ಮಿಕರ ಹೋರಾಟ
ಬೆಂಗಳೂರು, ಅಕ್ಟೋಬರ್ 06: ಮೂರು ತಿಂಗಳ ಗಡುವು ಪಡೆದು ವಿವಿಧ ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಪೌರ ಕಾರ್ಮಿಕರು ಮತ್ತು ಇತರ ಗುತ್ತಿಗೆ ಕಾರ್ಮಿಕರ ಹೋರಾಟ ಮುಂದುವರಿದಿದೆ.
ಕರ್ನಾಟಕ ರಾಜ್ಯ ಸರ್ಕಾರವು ನೀಡಿದ್ದ ಭರವಸೆಯಂತೆ ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸಿಲ್ಲ, ಕನಿಷ್ಠ ಮಾಸಿಕ ವೇತನ 30,000 ರೂ.ವೇತನ ನಿಗದಿ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಲ್ಲಿ ಮೂರು ತಿಂಗಳಾದರೂ ಸೂಕ್ತ ನಿರ್ಧಾರ ಕೈಗೊಂಡಿಲ್ಲ ಎಂದು ಪೌರ ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ನೈರ್ಮಲ್ಯ ಸ್ವಚ್ಛತಾ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಉದ್ಯೋಗವನ್ನು ಕಾಯಂಗೊಳಿಸಬೇಕು. ಮಾಸಿಕ 30ಸಾವಿರ ರೂ. ವೇತನ ನೀಡುವುದು, ಪಿಂಚಣಿ ಯೋಜನೆ, ಮೂಲಭೂತ ಹಕ್ಕು ದೊರಕಿಸಿಕೊಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕಗೆ ಆಗ್ರಹಿಸಿದ್ದಾರೆ.
ಇಷ್ಟು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ ಜುಲೈನಲ್ಲಿ ರಾಜ್ಯ ಪೌರಕಾರ್ಮಿಕರ ಸಂಘದ ವತಿಯಿಂದ ಸಾವಿರಾರು ಮಂದಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಮೂರು ತಿಂಗಳ ಗುಡುವು ಪಡೆದು ಸಮಿತಿ ರಚಿಸಿತ್ತು. ಪೌರ ಕಾರ್ಮಿಕರು ಹಾಗೂ ಇತರೆ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಒಪ್ಪಿಗೆ ನೀಡಿತ್ತು. ಆದರೆ ಆಡಿದ ಮಾತಿನಂತೆ ನಡೆದುಕೊಂಡಿಲ್ಲ. ಗಡುವು ಮುಗಿದರೂ ಈ ಬಗ್ಗೆ ಸರ್ಕಾರ ಸೊಲ್ಲೆತ್ತಿಲ್ಲ ಎಂದು ಪ್ರತಿಭಟನಾನಿರತರು ಕಿಡಿ ಕಾರಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಕೆಲಸ ಅಸಾಧ್ಯ
ಕಾರ್ಮಿಕರು ಸದ್ಯ 12 ಸಾವಿರದಿಂದ ದಿಂದ 17ಸಾವಿರವರೆಗೆ ಸಂಬಂಳ ಪಡೆಯುತ್ತಿದ್ದಾರೆ. ಅವರನ್ನು ಕಾಯಂಗೊಳಿಸಿದರೆ ಪಿಂಚಣಿಯಂತಹ ಪ್ರಯೋಜನಗಳಿಗೆ ಅರ್ಹರಾಗುತ್ತಾರೆ. ಆದರೆ ಖಾಯಂಗೊಳಿಸಲಾಗಿಲ್ಲ. ಮೂಲಭೂತ ಹಕ್ಕುಗಳ ನಿರಂತರ ನಿರಾಕರಣೆ ಆಗುತ್ತಲೆ ಇದೆ. ಇಂತಹ ಅಮಾನವೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪೌರಕಾರ್ಮಿಕರು ಹೇಳಿದ್ದಾರೆ.
ಜುಲೈ 4ರಂದು ನಾಲ್ಕು ದಿನಗಳ ಧರಣಿ ನಡೆಸಿದ್ದ ವೇಳೆ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರು. ಮೂರು ತಿಂಗಳು ಕೇಳಿದ್ದರು. ಹೀಗಾಗಿ ಅಂದು ಧರಣಿ ಹಿಂಪಡೆಯಲಾಯಿತು ಎಂದರು.

ಖಾಯಮಾತಿಗಾಗಿ ಸಮಿತಿ ರಚನೆ
ಖಾಯಮಾತಿ ಸಂಬಂಧ ಸರ್ಕಾರ ಸಮಿತಿ ರಚಿಸಿತು. ವಿಶೇಷ ನೇಮಕಾತಿ ನಿಯಮಗಳಿಗೆ ಮಾರ್ಗಸೂಚಿ ರೂಪಿಸಲು ಸಫಾಯಿ ಕರ್ಮಚಾರಿ ನಿಗಮದ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಕಾನೂನು ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಜುಲೈ 15ರಂದು ರಚನೆ ಆಯಿತು. ಇದರಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ರಾಷ್ಟ್ರೀಯ ಕಾರ್ಯದರ್ಶಿ ಸಹ ಇದ್ದಾರೆ ಎಂದು ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯೆ ಮೈತ್ರೇಯಿ ಕೃಷ್ಣನ್ ಹೇಳಿದರು.

ಪೌರ ಕಾರ್ಮಿಕ ಸಮಿತಿ ವರದಿ ಪರಿಗಣಿಸಿಲ್ಲ
ಎಐಸಿಸಿಟಿಯು ಪ್ರಕಾರ, ರಾಜ್ಯದಲ್ಲಿ 27,000 ಕ್ಕೂ ಹೆಚ್ಚು ಪೌರಕಾರ್ಮಿಕರಿದ್ದಾರೆ. ಸೆಪ್ಟೆಂಬರ್ 26ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಪೌರಕಾರ್ಮಿಕರ (ವಿಶೇಷ) ನಿಯಮಗಳು 2022 ರ ನೇಮಕಾತಿಯನ್ನು ಪ್ರಕಟಿಸಿತು.
ಹುದ್ದೆಯ ವೇತನ ಶ್ರೇಣಿಯನ್ನು ರೂ.17,000 ರಿಂದ ರೂ.28,950 ಕ್ಕೆ ನಿಗದಿಯಾಗಿದೆ. ಆದರೆ, ಪ್ರಸ್ತುತ 3,673 ಪೌರಕಾರ್ಮಿಕರ ಹುದ್ದೆಗಳು ಮಾತ್ರ ಖಾಲಿ ಇವೆ ಎಂದು ಹೇಳಲಾಗಿದೆ. ಪೌರಕಾರ್ಮಿಕ ಸಮಿತಿಯು ಈಗಾಗಲೇ ನೀಡಿರುವ ವರದಿ ಪರಿಗಣಿಸದೇ ಕರಡು ಸಿದ್ಧಪಡಿಸಲಾಗಿದೆ ಎಂದರು.
ಈ ಎಲ್ಲ ಬೆಳವಣಿಗೆಯು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತು. ನಂತರ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎಲ್ಲ ನೈರ್ಮಲ್ಯ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಲಿಖಿತವಾಗಿ ಅವರು ಸೂಚಿಸಿದ್ದರು. ಚಾಲಕರು, ಸಹಾಯಕರು ಸೇರಿದಂತೆ ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಪೌರಕಾರ್ಮಿಕ ಸಮಿತಿ ಮಾಡಿರುವ ಎಲ್ಲ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಅವರು ಹೇಳಿದ್ದರು.

ಹಾಲಿ ಸಂಬಳ ಸಾಕಾಗುತ್ತಿಲ್ಲ
ಸಾಂಕ್ರಾಮಿಕ ರೋಗದ ಮಧ್ಯೆಯು ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಮುಂಚೂಣಿಯಲ್ಲಿದ್ದರು. ಸಾಂಕ್ರಾಮಿಕ ಸಮಯದಲ್ಲಿ ಸಹ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಅತ್ಯಲ್ಪ ಸಂಬಳ ಮತ್ತು ಹೆಚ್ಚುತ್ತಿರುವ ಜೀವನ ಖರ್ಚಿನಿಂದ ನಮ್ಮ ಭವಿಷ್ಯ ಕತ್ತಲೆಯಾಗಿದೆ ಎಂದು ಪೌರಕಾರ್ಮಿಕರು ಅಳಲು ತೊಂಡಿಕೊಂಡಿದ್ದಾರೆ. 20 ವರ್ಷದಿಂದ ದುಡಿಯುತ್ತಿರುವ ಪೌರ ಕಾರ್ಮಿಕರಾದ ಪಂಜಾಲಮ್ಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರೂ ದಿನವೂ ಕೆಲಸಕ್ಕೆ ಬರುತ್ತಿದ್ದಾರೆ. ಮಾಸಿಕ 15,000 ರೂ. ಪಡೆದರೆ ಅದರ ಬಹುಪಾಲು ಬಾಡಿಗೆಗೆ ಹೋಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವಾಗಲೂ ನಾವು ಸರ್ಕಾರಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ ನಮ್ಮ ಸರಳ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಮಹಿಳಾ ಪೌರಕಾರ್ಮಿಕರೊಬ್ಬರು ತಿಳಿಸಿದರು.












Click it and Unblock the Notifications