ರಾಜ್ಕುಮಾರ್ ಸೊಸೆ ಗೀತಾ ಶಿವರಾಜ್ಕುಮಾರ್ ರಾಜಕೀಯ ಸೇರ್ಪಡೆ ನಿರ್ಧಾರ ಸರಿಯೇ? ಇಲ್ಲೊಂದು ಚರ್ಚೆ
ಬೆಂಗಳೂರು, ಏಪ್ರಿಲ್ 29: ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಪುತ್ರಿ ಹಾಗೂ ಹ್ಯಾಟ್ರಿಕ್ ಹಿರೋ ಡಾ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ವಿಚಾರವೀಗ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಡಾ ರಾಜಕುಮಾರ್ ಅವರ ಕುಟುಂಬದ ಸೊಸೆ ರಾಜಕೀಯಕ್ಕೆ ಬರುವುದು ಬೇಡವಾಗಿತ್ತು ಎಂದು ಕೆಲವರು ಹೇಳಿದರು. ಇನ್ನು ಕೆಲವರು ಗೀತಾ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇದೆ ಎಂದು ಹೇಳುತ್ತಿದ್ದಾರೆ.
ಗೀತಾ ಶಿವರಾಜಕುಮಾರ್ ಅವರು ಏಪ್ರಿಲ್ 28 ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಈ ಮೂಲಕ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಮಧು ಬಂಗಾರಪ್ಪ ಅವರ ಸ್ವಂತ ಸಹೋದರ ಬಿಜೆಪಿಯ ಕುಮಾರ ಬಂಗಾರಪ್ಪ ವಿರುದ್ಧ ಸ್ಪರ್ಧಿಸಿದ್ದಾರೆ. ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಒಂದು ವರ್ಷದ ಹಿಂದೆ ಕಾಂಗ್ರೆಸ್ ಸೇರಿದ್ದರು.

ಗೀತಾ ಶಿವರಾಜಕುಮಾರ್ ಈ ಹಿಂದೆ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದರು. 2014 ರಲ್ಲಿ, ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಪ್ರಬಲ ನಾಯಕ ಯಡಿಯೂರಪ್ಪ ವಿರುದ್ಧ ಗೀತಾ ಸೋಲು ಅನುಭವಿಸಿದ್ದರು.
ಗೀತಾ ಕಾಂಗ್ರೆಸ್ ಸೇರ್ಪಡೆ ಕುರಿತು ಶಿವಣ್ಣ ಹೇಳಿದ್ದೇನು?
ಗೀತಾ ಅವರ ಕಾಂಗ್ರೆಸ್ ಸೇರ್ಪಡೆ ಕುರಿತು ತಮ್ಮದೇ ಆದ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಪತ್ನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ. ಗೀತಾ ಅವರು ಹೊಸ ಬದಲಾವಣೆ ಬಯಸಿ ನಿರ್ಧಾರ ಕೈಗೊಂಡಿದ್ದಾರೆ. ನನ್ನ ಪತ್ನಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾನು ಸದಾ ಬೆಂಬಲ ನೀಡುತ್ತೇನೆ. ಮಧು ಬಂಗಾರಪ್ಪ ಪರ ಶನಿವಾರದಿಂದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದೇವೆ' ಎಂದಿದ್ದಾರೆ.

ಗೀತಾ ತಂದೆ ರಾಜಕೀಯದಲ್ಲಿದ್ದರು. ಅವರಿಗೆ ನಾವು ರಾಜಕೀಯ ಕಲಿಸುವ ಅಗತ್ಯವಿಲ್ಲ. ಮಕ್ಕಳಿಗೆ ಕೌಶಲ್ಯ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಅವರು, ಸಮಾಜಸೇವೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯ ಪರಿವಾರದಿಂದ ಬಂದ ಗೀತಾ
ಗೀತಾ ಅವರು ರಾಜಕೀಯ ಕುಟುಂಬದಿಂದ ಬಂದವರು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಹುಟ್ಟಿದ ಅವರು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಪುತ್ರಿ. ಗೀತಾ ಅವರ ಸಹೋದರ ಕುಮಾರ್ ಬಂಗಾರಪ್ಪ ಅವರು ಸದ್ಯ ಬಿಜೆಪಿ ಎಂಎಲ್ಸಿ. ಹಿಂದೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಇವರ ಇನ್ನೊಬ್ಬ ಸಹೋದರ ಮಧು ಬಂಗಾರಪ್ಪನವರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಅವರ ತಮ್ಮ ಅಣ್ಣನ ವಿರುದ್ಧ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಹೀಗಾಗಿ ರಾಜಕೀಯ ಅವರ ರಕ್ತದಲ್ಲಿಯೇ ಇದೆ.

ಖ್ಯಾತ ನಟ ರಾಜ್ಕುಮಾರ್ ಸೊಸೆ ರಾಜಕೀಯ ಪ್ರವೇಶ
ಖ್ಯಾತಿಯ ಉತ್ತುಂಗದಲ್ಲಿದ್ದ ಡಾ ರಾಜ್ಕುಮಾರ್ ಅವರು ರಾಜಕೀಯ ಪ್ರವೇಶಿಸಲಿಲ್ಲ. ಅವರಿಗೆ ರಾಜಕೀಯ ಪಕ್ಷಗಳ ಆಹ್ವಾನವಿದ್ದರೂ ಅವರೆಂದೂ ರಾಜಕೀಯವನ್ನು ಅಪ್ಪಿಕೊಳ್ಳಲಿಲ್ಲ. ಅವರ ಮೂವರು ಮಕ್ಕಳಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ದಿವಂಗತ ಡಾ ಪುನೀತ್ ರಾಜ್ಕುಮಾರ್ ಅವರು ಯಾವುದೇ ಪಕ್ಷದ ಪರ ನಿಂತುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಗೀತಾ ಶಿವರಾಜ್ಕುಮಾರ್ ಅವರು ರಾಜಕಾರಣಕ್ಕೆ ಬರುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಸ್ವಂತ ನಿರ್ಧಾರ ತೆಗೆದುಕೊಂಡ ಗೀತಾ ಶಿವರಾಜ್ಕುಮಾರ್
ಗೀತಾ ಅವರು ತಮ್ಮದೇ ಆದ ಸ್ವಂತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ರಾಜಕೀಯ ಅವರ ರಕ್ತದಲ್ಲಿಯೇ ಇದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಎಲ್ಲರಿಗೂ ತಮ್ಮದೇ ಆದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸೇರುವ, ಬಿಡುವ ಹಕ್ಕು ಎಲ್ಲರಿಗೂ ಇದೆ. ಈ ಹಿನ್ನೆಲೆಯಲ್ಲಿ ಗೀತಾ ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾಗಿದೆ ಎಂದು ಕೆಲವರ ವಾದವಾಗಿದೆ.












Click it and Unblock the Notifications