Rahul Gandhi: ಬಿಜೆಪಿಯವರಿಗೆ 40ರ ಸಂಖ್ಯೆ ಮೇಲೆ ಬಹಳ ಪ್ರೀತಿ ಇದೆ, ಅಷ್ಟೇ ಸೀಟ್ ನೀಡಿ: ರಾಹುಲ್ ಗಾಂಧಿ
ತುಮಕೂರು,ಮೇ1: ಬಿಜೆಪಿಯವರಿಗೆ 40ರ ಸಂಖ್ಯೆ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ ಇವರಿಗೆ 40ಕ್ಕಿಂತ ಹೆಚ್ಚಿನ ಸೀಟುಗಳನ್ನು ನೀಡಬೇಡಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ತುರುವೇಕೆರೆಯಲ್ಲಿ ಮಾತನಾಡಿದ ಅವರು, ಮೋದಿ ಅವರೇ ನೀವು ನಮ್ಮ ಯೋಜನೆಗಳನ್ನು ಟೀಕಿಸುವುದಾದರೆ, ನೀವು ರಾಜ್ಯಕ್ಕಾಗಿ ಏನು ಮಾಡಲು ಹೊರಟಿದ್ದೀರಿ ಎಂದು ಹೇಳಿ. ಈ ಚುನಾವಣೆ ರಾಜ್ಯದ ಜನರು, ಯುವಕರು, ಮಹಿಳೆಯರು ಹಾಗೂ ಮಕ್ಕಳ ವಿಚಾರವಾಗಿದೆ. ಈ ಚುನಾವಣೆ ಕೇವಲ ಒಬ್ಬ ವ್ಯಕ್ತಿ ಅಥವಾ ಮೋದಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲ. ಇದು ಮೋದಿ ಅವರಿಗೆ ಅರ್ಥವಾಗಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷವನ್ನು ನೀವು ಕನಿಷ್ಠ 150 ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು. ಕಾರಣ, ಬಿಜೆಪಿ ಈಗ ನಿಮ್ಮಿಂದ ಲೂಟಿ ಮಾಡಿರುವ ಹಣದಲ್ಲಿ ಮುಂದಿನ ಸರ್ಕಾರವನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ನೀವು 150 ಸೀಟು ನಮಗೆ ಕೊಟ್ಟರೆ, ಬಿಜೆಪಿ ನಮ್ಮ ಶಾಸಕರನ್ನು ಕದಿಯಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ಆಪರೇಷನ್ ಕಮಲದ ವಿರುದ್ದ ಕಿಡಿಕಾರಿದರು.
ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಇದ್ದು, ನೀವು ನಿಮ್ಮ ಸರ್ಕಾರವನ್ನು ಆರಿಸಬೇಕಾಗಿದೆ. ಕಳೆದ ಚುನಾವಣೆಯಲ್ಲಿ ನೀವು ಬಿಜೆಪಿ ಸರ್ಕಾರವನ್ನು ಆರಿಸಿರಲಿಲ್ಲ. ಆದರೆ ಬಿಜೆಪಿ ಶಾಸಕರನ್ನು ಹಣದ ಮೂಲಕ ಖರೀದಿ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಸರ್ಕಾರ ರಚಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೇವಲ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಈ ಸರ್ಕಾರವನ್ನು 40% ಸರ್ಕಾರ ಎಂದು ಕರೆಯುತ್ತಾರೆ.
ಈ ಸರ್ಕಾರದಲ್ಲಿ ಯಾವುದೇ ಕೆಲಸ ಆಗಬೇಕಾದರೂ 40% ಕಮಿಷನ್ ಲೂಟಿ ಮಾಡುತ್ತಾರೆ. ಸರ್ಕಾರದ ಕೆಲಸ ಎಂದರೆ ಜನರಿಗೆ ಅವರ ಹಣವನ್ನು ನೀಡುವುದಾಗಿದೆ. ಸರ್ಕಾರದ ಕೆಲಸ ಶಿಕ್ಷಣೆ, ಆರೋಗ್ಯ, ರಸ್ತೆ ಅಭಿವೃದ್ಧಿಯಲ್ಲಿ ಹಣ ವಿನಿಯೋಗಿಸುವುದಾಗಿದೆ. ಆದರೆ ಬಿಜೆಪಿ ಸರ್ಕಾರ ಹಣ ಹಾಕಲಿಲ್ಲ, ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು, ಕಾರ್ಮಿಕರ ಜೇಬಿನಿಂದ ಹಣ ಲೂಟಿ ಮಾಡಿದ್ದಾರೆ.

ಪ್ರತಿ ಕೆಲಸದಲ್ಲಿ 40% ಲೂಟಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಗೊತ್ತಿಲ್ಲದ ವಿಚಾರವಲ್ಲ. ಪ್ರಧಾನಮಂತ್ರಿಗಳಿಗೆ ಎಲ್ಲವೂ ಗೊತ್ತಿದೆ. ಗುತ್ತಿಗೆದಾರರ ಸಂಘ, ರುಪ್ಸಾ ಸಂಸ್ಥೆ ಕರ್ನಾಟಕದಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಪತ್ರ ಬರೆದಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿಗಳು ಮಠಗಳಿಗೆ 30% ಕಮಿಷನ್ ಪಡೆಯಲಾಗಿದೆ ಎಂದಿದ್ದಾರೆ. ಪಿಎಸ್ಐ, ಸಹಕಾರಿ ಬ್ಯಾಂಕ್, ಸಹಾಯಕ ಪ್ರಾಧ್ಯಾಪಕರು, ಜೆಇಇ ಸೇರಿದಂತೆ ಎಲ್ಲಾ ನೇಮಕಾತಿಗಳಲ್ಲಿ ಅಕ್ರಮವಾಗಿದೆ.
ಬಿಜೆಪಿ ಶಾಸಕರೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು 2500 ಕೋಟಿಗೆ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ. ಕರ್ನಾಟಕದ ಮಕ್ಕಲಿಗೆಈ ಭ್ರಷ್ಟಾಚಾರದ ಬಗ್ಗೆ ಗೊತ್ತಿರುವಾಗ, ಪ್ರಧಾನಿಗೂ ಗೊತ್ತಿರುತ್ತದೆ. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿರುವುದು ಗೊತ್ತಿದ್ದರೂ ಇದನ್ನು ತಡೆಯಲು ಪ್ರಧಾನಮಂತ್ರಿಗಳು ಯಾವ ಕ್ರಮ ಕೈಗೊಂಡಿದ್ದಾರೆ? ನೀವು ಈ ಲೂಟಿ ನಿಲ್ಲುವ ಪ್ರಯತ್ನ ಮಾಡಿದ್ದೀರಾ? ಭ್ರಷ್ಟರನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ ಯಾಕೆ? ಆದರೆ ಈಗ ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಬಂದು ಮತ ಕೇಳುತ್ತಿದ್ದೀರಿ ಎಂದರು.
ಈ ಸಮಯದಲ್ಲಿ ನೀವು ಭ್ರಷ್ಟಾಚಾರ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸ್ಪಷ್ಟನೆ ನೀಡಬೇಕು. ಕರ್ನಾಟಕಿಂದ ಬರುವ ತೆರಿಗೆಯಲ್ಲಿ ಸಿಗಬೇಕಾದ ಪಾಲು ರಾಜ್ಯಕ್ಕೆ ಸಿಗುತ್ತಿಲ್ಲ. ಅದು ಯಾಕೆ ಎಂದು ಜನರಿಗೆ ಹೇಳಿ. ಕರ್ನಾಟಕದಲ್ಲಿ ನೆರೆ ಬಂದಾಗ ಜನರಿಗಾಗಿ ಏನು ಪರಿಹಾರ ನೀಡಿದ್ದೀರಿ? ಎಂದು ಪ್ರಶ್ನಿಸಿದರು.
ನೀವು ಚುನಾವಣೆ ಸಮಯದಲ್ಲಿ ಬಂದು ಕಾಂಗ್ರೆಸ್ ನವರು ನನ್ನ ವಿರುದ್ದ 91 ಬಾರಿ ಆಕ್ರಮಣ ಮಾಡಿದ್ದಾರೆ ಎಂದು ಹೇಳುತ್ತೀರಿ. ಆದರೆ ನೀವು ಕರ್ನಾಟಕಕ್ಕಾಗಿ ನೀವು ಏನು ಮಾಡಿದ್ದೀರಿ ಎಂದು ಹೇಳುತ್ತಿಲ್ಲ. ನಿಮ್ಮ ಮುಂದಿನ ಭಾಷಣಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಜನರಿಗೆ ಏನು ಮಾಡಿದ್ದೀರಿ? ಮುಂದೆ ಐದು ವರ್ಷಗಳಲ್ಲಿ ಏನು ಮಾಡುತ್ತೀರಿ ಎಂದು ಹೇಳಿ ಎಂದು ಪ್ರಶ್ನಿಸಿದರು.
ಇದು ಕರ್ನಾಟಕದ ಚುನಾವಣೆ, ಮೋದಿ ಚುನಾವಣೆಯಲ್ಲ
"ನೀವು ಕರ್ನಾಟಕಕ್ಕೆ ಬರುತ್ತಿರುವುದು ಚುನಾವಣಾ ಪ್ರಚಾರಕ್ಕಾಗಿ, ಆದರೆ ನೀವು ಕರ್ನಾಟಕದ ಬಗ್ಗೆ ಮಾತನಾಡುವುದಿಲ್ಲ. ನೀವು ನಿಮ್ಮ ಬಗ್ಗೆ ಮಾತನಾಡುತ್ತೀರಿ, ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಎನ್ನುವುದನ್ನು ಜನರಿಗೆ ವಿವರಿಸಿ. 91ಸಲ ಕಾಂಗ್ರೆಸ್ಸಿಗರು ನನಗೆ ಬೈದರು ಎನ್ನುವುದನ್ನು ಹೇಳುವುದು ಬಿಟ್ಟು, ಕರ್ನಾಟಕಕ್ಕೆ ಏನು ಮಾಡಿದ್ದೀರಿ" ಎಂದು ರಾಹುಲ್ ಗಾಂಧಿ, ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.












Click it and Unblock the Notifications