Karnataka Elections: ಕೊನೆಯ ಹಂತದ ಪ್ರಚಾರವೇ ಪಕ್ಷಗಳಿಗೆ ನಿರ್ಣಾಯಕ- ಕಾರಣ ತಿಳಿಯಿರಿ
ಬೆಂಗಳೂರು, ಏಪ್ರಿಲ್ 25: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಪ್ರಕ್ರಿಯೆ ಮಹತ್ವದ ಹಂತಕ್ಕೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಹಲವು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತದಾರರನ್ನು ಓಲೈಸಲು ರಾಜ್ಯದಲ್ಲಿ ಅನೇಕ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

ಈ ಪ್ರಚಾರ ಪ್ರಯತ್ನಗಳು ಎರಡು ರಾಷ್ಟ್ರೀಯ ಪಕ್ಷಗಳಿಗೆ ವಿಶೇಷವಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಚುನಾವಣಾ ಪೂರ್ವ ಸಮೀಕ್ಷೆಗಳು ಎರಡೂ ಪಕ್ಷಗಳ ನಡುವೆ ನೇರ ಪೈಪೋಟಿ ಇರುವುದನ್ನು ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಈ ಅಂತಿಮ ಹಂತದ ಪ್ರಚಾರ ಏಕೆ ಮುಖ್ಯವಾಗಿದೆ ಎಂಬುದಕ್ಕೆ ಕಾರಣಗಳು ಇಲ್ಲಿವೆ.
ಬಿಜೆಪಿ
ರಾಜ್ಯದ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿಯಲು ಆಕಾಂಕ್ಷೆ ಹೊಂದಿರುವ ಬಿಜೆಪಿ ಈ ಕೊನೆಯ ಹಂತದ ಪ್ರಚಾರದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಸ್ಟಾರ್ ಪ್ರಚಾರಕರನ್ನು ಬಿಜೆಪಿ ನಿಯೋಜಿಸಲಿದೆ. ಮುಂದಿನ 16 ದಿನಗಳಲ್ಲಿ ಮತದಾರರನ್ನು ಓಲೈಸಲು ಭಾರಿ ಕಸರತ್ತನ್ನು ಬಿಜೆಪಿ ನಡೆಸಲಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ನೊಂದಿಗೆ ತೀವ್ರ ಪೈಪೋಟಿಯಲ್ಲಿ ಎದುರಿಸುತ್ತಿರುವ ಬಿಜೆಪಿ ಮೋದಿಯವರ ವರ್ಚಸ್ಸು ಮತ್ತು ಸೋಶಿಯಲ್ ಇಂಜಿನಿಯರಿಂಗ್ ಮೇಲೆ ಹೆಚ್ಚು ಅವಲಂಭಿತವಾಗಿದೆ. ಕರ್ನಾಟಕದಲ್ಲಿ ಮತದಾರರನ್ನು ತಲುಪುವ ಯೋಜನೆಗಳ ಭಾಗವಾಗಿ ಪಕ್ಷವು ಅಸ್ಸಾಂ, ಮಹಾರಾಷ್ಟ್ರ, ಕೇರಳ, ಗೋವಾ ಮತ್ತು ತಮಿಳುನಾಡುಗಳಿಂದ ವಿಶೇಷ ತಂಡಗಳನ್ನು ಆಯೋಜಿಸಿದೆ.
ಪ್ರಚಾರದ ಅಂತಿಮ ಹಂತದಲ್ಲಿ ಡಬಲ್-ಇಂಜಿನ್ ಸರ್ಕಾರದ ಪ್ರಯೋಜನಗಳ ಬಗ್ಗೆ ಹೆಚ್ಚು ಮಾತನಾಡಲು ಬಿಜೆಪಿ ನಿರ್ಧರಿಸಿದೆ. ಮುಸ್ಲಿಮರ ಶೇ 4 ಮೀಸಲಾತಿಯನ್ನು ರದ್ದುಗೊಳಿಸಿರುವುದು, ಭ್ರಷ್ಟಾಚಾರ ಮತ್ತು ಲಿಂಗಾಯತ ವಿರೋಧಿ ಅಭಿಯಾನ ವಿಚಾರಗಳನ್ನು ಎದುರಿಸುವ ನಿಟ್ಟಿನಲ್ಲಿ ಬಿಜೆಪಿ ತಯಾರಿ ಮಾಡಿಕೊಂಡಿದೆ.

ಕಾಂಗ್ರೆಸ್
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ನೇರ ಪೈಪೋಟಿ ಒಡ್ಡಿದೆ. ಬಿಜೆಪಿ ವಿರುದ್ಧ ರಕ್ಷಣಾತ್ಮಕ ನಡೆಯನ್ನು ಕೈ ಪಾಳಯ ಅನುಸರಿಸುತ್ತಿದೆ. ಅದರ ನಾಲ್ಕು ಗ್ಯಾರಂಟಿಗಳು ಜನರಲ್ಲಿ, ವಿಶೇಷವಾಗಿ ಮಧ್ಯಮ ವರ್ಗದವರಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿವೆ. ಅಂತಿಮ ಹಂತದಲ್ಲಿ, ಪಕ್ಷವು ತನ್ನ ವೇಗವನ್ನು ಉಳಿಸಿಕೊಳ್ಳಲು ಮತ್ತು ಬಿಜೆಪಿಯನ್ನು ಹಿಮ್ಮೆಟ್ಟಿಸಲು ಹಲವಾರು ರೀತಿಯ ಯತ್ನಗಳನ್ನು ನಡೆಸುತ್ತಿದೆ.
ವಿಶೇಷವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪಗಳು ಮತ್ತು ಬಿಜೆಪಿ ಲಿಂಗಾಯತರನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂಬ ನಿರೂಪಣೆಗೆ ಕಾಂಗ್ರೆಸ್ ಒತ್ತು ನೀಡುತ್ತಿದೆ. ಮೋದಿ-ಶಾ ಪ್ರಚಾರಗಳನ್ನು ಎದುರಿಸಲು ಪಕ್ಷವು ಹಲವು ಯತ್ನಗಳಲ್ಲಿ ತೊಡಗಿದೆ. ಪಕ್ಷದ ಪ್ರಮುಖ ಪ್ರಚಾರಕರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರಿಂದ ರಾಜಕೀಯ ರ್ಯಾಲಿಗಳು ಮತ್ತು ರೋಡ್ಶೋಗಳ ಸರಣಿಯನ್ನು ಸಹ ಆಯೋಜಿಸಿದೆ.
ಸೋನಿಯಾ ಗಾಂಧಿ ಕೂಡ ಚುನಾವಣೆ ಹತ್ತಿರದಲ್ಲಿ ಒಂದೆರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಪಕ್ಷವು ರೈತರಿಗೆ ತನ್ನ ಐದನೇ ಮತ್ತು ಅಂತಿಮ ಚುನಾವಣಾ ಗ್ಯಾರಂಟಿಯನ್ನು ಘೋಷಿಸಬಹುದು.

ಜೆಡಿಎಸ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ವ್ಯಾಪಕ ಪ್ರಚಾರ ಕೈಗೊಂಡಿದೆ. ಇದು 93 ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲ ಪಕ್ಷಗಳಿಗಿಂತ ಮೊದಲು ಪ್ರಕಟಿಸಿತ್ತು. ಸ್ಟಾರ್ ಪ್ರಚಾರಕ ಕುಮಾರಸ್ವಾಮಿ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪಕ್ಷದ ಪ್ರಚಾರವೀಗ ಕುಂಠಿತಗೊಂಡಿದೆ.
ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು, ಅನಾರೋಗ್ಯದಿಂದ ಬಳಲುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ತಮ್ಮ ಪುತ್ರ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ. ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಪಕ್ಷವು ಕನಿಷ್ಠ 40 ಸ್ಥಾನಗಳನ್ನು ಗೆದ್ದು ಕಿಂಗ್ಮೇಕರ್ ಆಗಿ ಹೊರಹೊಮ್ಮುವ ಭರವಸೆಯಲ್ಲಿದೆ. ಆದರೆ ಕುಮಾರಸ್ವಾಮಿ ಅವರ ದೀರ್ಘಾವಧಿಯ ಅನುಪಸ್ಥಿತಿಯು ಈ ಮಹತ್ವಾಕಾಂಕ್ಷೆಯನ್ನು ಹಾಳುಮಾಡಬಹುದು ಎನ್ನಲಾಗಿದೆ.












Click it and Unblock the Notifications